ಚಿತ್ರರಂಗದಲ್ಲಿ ನವರಸ ನಾಯಕ ಎಂದೇ ಖ್ಯಾತರಾಗಿರುವ ಜಗ್ಗೇಶ್ ಅವರ ಬಣ್ಣದ ಬದುಕಿಗೆ ಈಗ ನಲವತ್ತು ವರ್ಷಗಳು.
ಇದೇ ಸಂದರ್ಭವನ್ನು ಖುಷಿಯಾಗಿಸಲು ಮಾಧ್ಯಮಗಳ ಜೊತೆ ತಾವು ಬೆಳೆದು ಬಂದ ದಾರಿಯನ್ನು ನೆನೆಯುವಾಗ ಕಷ್ಟಗಳ ನೆನೆದು ಭಾವುಕರಾದರು ಜಗ್ಗೇಶ್.
ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಸ್ಟುಡಿಯೋಗೆ ಮಾಧ್ಯಮಗಳನ್ನು ಕರೆದು ನಲವತ್ತು ವರ್ಷಗಳಲ್ಲಿ ತಾವು ಬೆಳೆದು ಬಂದ ದಾರಿಯನ್ನು ಮೆಲುಕು ಹಾಕಿದರು.
ಸಾಧನೆಯ ಹಾದಿಯಲ್ಲಿ ಎದುರಾದ ಸಂಕಷ್ಟಗಳಿಂದ ಪಾರಾದ ಬಗೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಈ ವೇಳೆ ಎಲ್ಲೋ ಬೆಳೆಯಬೇಕಾದವನಿಗೆ ದೇವರು ಈ ಮಟ್ಟಕ್ಕೆ ತಂದ ಎಂದು ಹೇಳುವಾಗ ಗದ್ಗದಿತರಾದರು..
ನಾನು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಬೇಕಾದಷ್ಟು ಸಾಧನೆಗಳನ್ನು ಮಾಡುವ ಅವಕಾಶವನ್ನು ಗುರುರಾಯರು ಕಲ್ಪಿಸಿದರು. ಎಷ್ಟೋ ವೇಳೆ ಪವಾಡಗಳು ನಡೆದಾಗ ಅದಕ್ಕೆ ರಾಯರೇ ಸಾಕ್ಷಿಯಾಗಿ ಇದ್ದರು. ಹಾಗಾಗಿ ಇನ್ನು ಮುಂದೆ ಆಧ್ಯಾತ್ಮ ದ ಕಡೆಗೂ ಮನಸ್ಸು ವಾಲುತ್ತಿದೆ ಎಂದರು.
ಸಾಧನೆ ನಮ್ಮದು ಎಂದು ಹೇಳಿಕೊಳ್ಳಲು ಕಷ್ಟ ಪಡಬೇಕು.. ಯಾರಿಗೂ ತಾನಾಗಿಯೇ ಎಲ್ಲವೂ ಒಲಿದು ಬಿಡುವುದಿಲ್ಲ ಎಂದು ಹೇಳುತ್ತಾ ಹೋದರು ಜಗ್ಗೇಶ್.
1990ರಲ್ಲಿ ಚಿಕ್ಕ ಚಿಕ್ಕ ಅವಕಾಶಗಳನ್ನು ಪಡೆದು ಖುಷಿ ಪಡುತ್ತಿದ್ದವನಿಗೆ; ದ್ವಾರಕೀಶ್ ಅವರು ಕೃಷ್ಣ ನೀ ಕುಣಿದಾಗ ಚಿತ್ರದಲ್ಲಿ ವಿಲನ್ ಶೆಡ್ ಇರುವ ಪಾತ್ರ ನೀಡಿದರು ಮಾತ್ರವಲ್ಲ; ನೀನು ರಜನೀಕಾಂತ್ ಥರಾನೇ ಕಾಣ್ತಿಯಾ ಎಂದು ಹೇಳಿ ಅವರಿಗೆ ಹೋಲಿಸಿದ ಬಟ್ಟೆಯನ್ನು ನೀಡಿದ್ದರು. ಅಂದಿನಿಂದ ಬದುಕು ಬದಲಾಗಿ ಹೋಯ್ತು..
ನಂತರ ಉಪೇಂದ್ರ ನಿರ್ದೇಶನದಲ್ಲಿ ತರ್ಲೆ ನನ್ ಮಗ ಎಂಬ ಚಿತ್ರ ತಯಾರಾದರೂ ಅದು ಬಿಡುಗಡೆ ಕಾಣಲಿಲ್ಲ. ಅದೇ ವೇಳೆ ಮೊಂಡು ಧೈರ್ಯ ಮಾಡಿ ಮಾಡಿದ ಚಿತ್ರ ಭಂಡ ನನ ಗಂಡ ಚಿತ್ರವು ಪವಾಡವನ್ನೇ ಮಾಡಿತು.
ಆನಂತರ ನಾನು ಹಿಂದಿರುಗಿ ನೋಡಲಿಲ್ಲ. ಜಗ್ಗೇಶ್ ಜಮಾನವೊಂದು ಆಗ ಶುರುವಾಗಿತ್ತು. ಇದೇ ಕಾಲಘಟ್ಟದಲ್ಲಿ ಡಿ.ಕೆ.ಶಿವಕುಮಾರ್ ನನ್ನನ್ನು ರಾಜಕೀಯಕ್ಕೆ ಕರೆತಂದರು. ಅಲ್ಲಿಯೂ ಅನೇಕ ತಿರುವುಗಳು ಸಂಭವಿಸಿದವು ಎಂದು ಹೇಳುತ್ತಾ ಹೋದರು ನವರಸ ನಾಯಕ.
ಪರಿಮಳ ಜಗ್ಗೇಶ್ ಸಹ ಈ ಸಂದರ್ಭದಲ್ಲಿ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.