ವೈಯಕ್ತಿಕ ವೈಶಮ್ಯದಿಂದ ದೂರವಾದ ಎರಡು ಕುಟುಂಬಗಳನ್ನು ಬೆಸೆಯಲು ಹೊಸ ತಂತ್ರಗಳನ್ನು ರೂಪಿಸುವುದು ತೆಲುಗು ಚಿತ್ರರಂಗದಲ್ಲಿ ಬಹಳ ಕಾಲ ನಡೆದುಕೊಂಡು ಬಂದಿದೆ..
ಹಾಗಾಗಿ ಅಲ್ಲಿಂದ ಎರವಲು ಪಡೆದ ಕಥೆಗಳು ಇದೇ ಧಾಟಿಯನ್ನು ಅನುಸರಿಸುತ್ತವೆ. ಸದ್ಯ ತೆಲುಗು ಮೂಲದ ನಿರ್ಮಾಪಕ ಬಿ.ನರಸಿಂಹರೆಡ್ಡಿ ಆ ರೀತಿಯ ಕಥೆ ಹೊಂದಿರುವ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸುತ್ತಿದ್ದಾರೆ.
‘ಇಲ್ಲಿಂದ ಆರಂಭವಾಗಿದೆ’ ಎಂಬ ಹೆಸರಿನ ಚಿತ್ರವನ್ನು ಬಿ.ನರಸಿಂಹರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಮೊದಲೇ ಕನ್ನಡದ ವರನಟ ಡಾ.ರಾಜ್ಕುಮಾರ್ ಅವರ ಅಭಿಮಾನಿಯಾಗಿರುವ ಅವರು ರಾಜ್ ಮಾದರಿಯ ಸಿಐಡಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಲಕ್ಷ್ಮಣ ಚಪರ್ಲ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಚಾರದ ಸಲುವಾಗಿ ಟ್ರೈಲರ್ ಮತ್ತು ಮೂರು ಹಾಡುಗಳೊಂದಿಗೆ ಮಾಧ್ಯಮದವರ ಮುಂದೆ ಬಂದಿತ್ತು ಚಿತ್ರತಂಡ.
ಮುಖ್ಯವಾಗಿ ಸೆಸ್ಪನ್ಸ್, ಹಾರರ್ ಅಂಶಗಳನ್ನು ಹೊಂದಿರುವ ಚಿತ್ರದಲ್ಲಿ ನವಿರಾದ ಪ್ರೀತಿ, ತಾಯಿ ಮಗಳ ಬಾಂಧವ್ಯದ ಕಥೆಯೂ ಇದೆ. ಅಲ್ಲದೆ ಹಾರವೊಂದು ಪಾತ್ರವಾಗಿ ಮೂಡಿಬಂದಿದ್ದು, ಸತ್ಯ ನ್ಯಾಯಕ್ಕೆ ಎಂದಿಗೂ ಗೆಲುವು ಸಿಗಲಿದೆ ಎಂಬುದನ್ನು ಅದು ಮನವರಿಕೆ ಮಾಡಿಕೊಡುತ್ತಿದೆ. ಕೀರ್ತಿಕೃಷ್ಣ ಹಾಗೂ ನಿಖಿತಾಸ್ವಾಮಿ ಮತ್ತು ಮಧುಬಾಲ ಮುಖ್ಯ ಪಾತ್ರದಲ್ಲಿದ್ದಾರೆ. ಇವರೊಂದಿಗೆ ಬಾಲಿವುಡ್ ನಟರಾದ ಪ್ರದೀಪ್ರಾವುತ್, ಶಾಹುರಾಜ್ಶಿಂಧೆ, ಮಗಧೀರ ಖ್ಯಾತಿಯ ದೇವ್ಗಿಲ್ ಅಲ್ಲದೆ ಕನಕಪುರದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ವಿವರಗಳು ಬಂದವು.
ಬೆಂಗಳೂರು, ಮಂಗಳೂರು, ಕನಕಪುರ, ಪಾವಗಡ ಹಾಗೂ ಇತರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ರಾಜ್ಕಿರಣ್, ಛಾಯಾಗ್ರಹಣ ಜಯರಾಮ್, ಸಂಕಲನ ಸೀನು, ನೃತ್ಯ ಬಾಲಕೃಷ್ಣ-ಗಂಗಮ್ರಾಜು, ಸಂಭಾಷಣೆ ಗೋಪಿಕಿರಣ್ ಅವರದಾಗಿದೆ.
ಏಳು ಸಾಹಸಗಳಿಗೆ ದೇವರಾಜು ಕೆಲಸ ಮಾಡಿದ್ದಾರೆ. ಸಿರಿ ಮ್ಯೂಸಿಕ್ ಸಂಸ್ಥೆಯು ಹಾಡುಗಳನ್ನು ಹೊರತಂದಿದೆ. ಪುಷ್ಪ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿದ್ದಗೊಂಡಿರುವ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸದ್ಯದಲ್ಲೆ ಏಕಕಾಲಕ್ಕೆ ಬಿಡುಗಡೆ ಕಾಣುತ್ತಿದೆ.