ಈ ಚಿತ್ರ ಮಲೆನಾಡಿನ ಪರಿಸರ ಸೇರಿದಂತೆ ಅಲ್ಲಿನ ಭಾಷಾ ವೈವಿಧ್ಯ; ಜನರ ಮನೋಭಾವ ಸೇರಿದಂತೆ ಅನೇಕ ವಿಷಯಗಳನ್ನು ಕಟ್ಟಿಕೊಡುತ್ತದೆ..
ಹೆಸರು ಪಾಠಶಾಲಾ..!
ಈ ಹಿಂದೆ ‘ಗ್ಯಾಪಲ್ಲೊಂದು ಸಿನಿಮಾ’ ಹಾಗೂ ‘ಓಮಿನಿ’ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಹೆದ್ದೂರ್ ಮಂಜುನಾಥ್ ಶೆಟ್ಟಿ ಇದರ ನಿರ್ದೇಶಕ.
ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸುಧಾಕರ ಬನ್ನಂಜೆ ಅವರ ಶಿಷ್ಯ ಹಾಗೂ ಸಿಹಿಕಹಿ ಚಂದ್ರು ಅವರ ಗರಡಿಯಲ್ಲಿ ಪಳಗಿರುವ ಮಂಜುನಾಥ್ ಶೆಟ್ಟಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹಾಯಕರಾಗಿಯೂ ಕೆಲಸ ಮಾಡಿದ ಅನುಭವ ಬೆನ್ನಿಗಿದೆ.
‘ಪಾಠಶಾಲಾ’ ಕೇವಲ ಮಕ್ಕಳ ಕಥೆಯಲ್ಲ; ಮಲೆನಾಡು ಪರಿಸರದಲ್ಲಿ ನಡೆಯುವ ಒಳ್ಳೆಯ ಹಾಗೂ ಕೆಟ್ಟ ನಡೆಗಳ ಮತ್ತು ವಿದ್ಯಮಾನಗಳ ಸುತ್ತ ನಡೆಯುವ ಕಥೆಯಾಗಿದೆ ಎಂಬ ವಿವರ ಬಂತು ನಿರ್ದೇಶಕರಿಂದ.
ಹಿರಿಯ ನಿರ್ದೇಶಕ ಸುಧಾಕರ ಬನ್ನಂಜೆ ಈ ಚಿತ್ರದಲ್ಲಿ ಶಾಲಾ ಮಾಸ್ತರರ ಪಾತ್ರವನ್ನು ನಿರ್ವಹಿಸಿದ್ದಾರೆ. ಟೀಸರ್ ಬಿಡುಗಡೆಯ ಈ ಸಮಾರಂಭದಲ್ಲಿ ಗುರುವಿಗೆ ಗೌರವ ಸಮರ್ಪಣೆ ಮಾಡಿದರು ಮಂಜುನಾಥ್ ಶೆಟ್ಟಿ.
ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ದಂಪತಿಗಳು ಟೀಸರ್ ಬಿಡುಗಡೆ ಮಾಡಿದ ಸಮಾರಂಭದಲ್ಲಿ
ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಹೆಚ್.ಎಸ್.ರಾಘವೇಂದ್ರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ವಿಜಯ್ ಶೆಟ್ಟಿ, ಕೆರಬೇಟೆ ಖ್ಯಾತಿಯ ಗೌರಿ ಶಂಕರ್, ರವೀಂದ್ರ ಸಿಂಗ್ ಮೊಲಾದವರು ಉಪಸ್ಥಿತರಿದ್ದರು.
ಎಂ.ಎಸ್.ಸ್ಕ್ವೇರ್ ಮೂವೀಸ್ ಬ್ಯಾನರ್ ನಡಿ ಹೆದ್ದೂರು ಮಂಜುನಾಥ್ ಶೆಟ್ಟಿ ಹಾಗೂ ಅವರ ಪತ್ನಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸ್ನೇಹಿತರ ಸಹ ನಿರ್ಮಾಣ ಹಾಗೂ ಬೆಂಬಲ ಚಿತ್ರಕ್ಕಿದೆ.
ತೀರ್ಥಹಳ್ಳಿ ತಾಲ್ಲೂಕಿನ. ಕಮ್ಮರಡಿ ಹಾಗೂ ಸುತ್ತ ಮುತ್ತಲಿನ ಸ್ಥಳಗಳಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ. ನಲವತ್ತಕ್ಕೂ ಆಧಿಕ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಮಕ್ಕಳಿಗೆ ತರಬೇತಿ ನೀಡಿ ಆನಂತರ ಚಿತ್ರೀಕರಣ ಮಾಡಲಾಯಿತು ಎಂಬ ವಿವರ ಕೊಟ್ಟರು ನಿರ್ದೇಶಕರು.
ಹಿರಿಯರಾದ ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಹಾಗೂ ಇತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
80 ಹಾಗೂ 90 ರ ದಶಕದ ಕಾಲಘಟ್ಟದಲ್ಲಿ ಶಿಕ್ಷಕರ ಹಾಗೂ ಮಕ್ಕಳ ನಡುವೆ ಇದ್ದ ಸಂಬಂಧದ ಸುತ್ತಲ್ಲಿನ ಕಥಾಹಂದರ ಹೊಂದಿರುವ ಚಿತ್ರ ಮಾರ್ಚ್ ವೇಳೆಗೆ ಬಿಡುಗಡೆ ಕಾಣಲಿದೆ ಎಂಬ ಮಾಹಿತಿ ನೀಡಿದರು ನಿರ್ದೇಶಕರು.