ಇದೇ 19ರಂದು ಬಿಡುಗಡೆ ಕಾಣುತ್ತಿರುವ ‘ಶ್ರೀಮಂತ’ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣ ಪತ್ರ ನೀಡಿದ್ದು, ಚಿತ್ರದ ಆಶಯಗಳನ್ನು ಸೆನ್ಸಾರ್ ಅಧಿಕಾರಿಗಳು ಕೊಂಡಾಡಿದ್ದಾರೆ.
ರೈತ ಅನ್ನದಾತ; ರೈತ ದೇಶದ ಬೆನ್ನೆಲುಬು; ರೈತ ಶ್ರೀಮಂತ ಎಂದು ಸಾರುವ ಹಾಸನ್ ರಮೇಶ್ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡಿದ್ದ ‘ಶ್ರೀಮಂತ’ ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದು ಮುಗಿದ ಆ ಪ್ರಕ್ರಿಯೆಗಳ ಬಳಿಕ ಚಿತ್ರ ಮಂದಿರಗಳಲ್ಲಿ ಪ್ರತ್ಯಕ್ಷವಾಗುತ್ತಿದೆ.
ಬಾಲಿವುಡ್ ನಟ ಸೋನುಸೂದ್ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ ವಿಶೇಷತೆಗಳಿಗೆ ಕೊರತೆಯೇ ಇಲ್ಲ; ಮುಖ್ಯವಾಗಿ ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ಚಿತ್ರಕ್ಕಿದೆ. ಅವರ ಸಂಗೀತದಲ್ಲಿ ಮೂಡಿ ಬಂದಿರುವ ‘ರೈತ ಮಹಾ ಸಂತ..’ ಎಂದು ಬಿಂಬಿಸಿರುವ ರೈತ ಗೀತೆ ಚಿತ್ರದ ಹೈಲೈಟ್.
ಈ ಹಾಡು ಮೇರು ಗಾಯಕ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರ ಕೊನೆಯ ಹಾಡು. ಈ ಹಾಡನ್ನು ಥೀಮ್ ಸಾಂಗ್ ಆಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ನಿರ್ದೇಶಕ ಹಾಸನ್ ರಮೇಶ ವಿವರ ನೀಡಿದ್ದಾರೆ.
ಚಿತ್ರದಲ್ಲಿ ಕನ್ನಡದ ಮುಂಚೂಣಿಯ ನಾಯಕ ನಟರೊಬ್ಬರು ಕಾಣಿಸಿಕೊಂಡಿದ್ದಾರೆ. ಆದರೆ ನಿರ್ದೇಶಕರು ಈ ವಿಷಯವನ್ನು ಬಹಿರಂಗಗೊಳಿಸಿಲ್ಲ. ಕ್ರಾಂತಿ ಎಂಬ ಯುವನಟ ಮತ್ತು ಸಾಕಷ್ಟು ಕಲಾವಿದರ ಸಂಗಮ ಚಿತ್ರದಲ್ಲಿದೆ.
ಬಹುಕೋಟಿ ವೆಚ್ಚದ ಈ ಚಿತ್ರವನ್ನು ಹಾಸನ್ ರಮೇಶ್ ಅವರ ಜೊತೆ ನಾರಾಯಣಪ್ಪ ಹಾಗೂ ಸಂಜಯ್ ಬಾಬು ನಿರ್ಮಿಸಿದ್ದಾರೆ. ಬಹಳವೇ ಶ್ರೀಮಂತಿಕೆಯ ವಿಷಯಗಳನ್ನು ಒಳಗೊಂಡಿರುವ ‘ಶ್ರೀಮಂತ’ ಚಿತ್ರದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ನಾಡಿನ ಅಗ್ರಮಾನ್ಯ ಗಣ್ಯರು ಪ್ರಶಂಸಿದ್ದಾರೆ ಎಂಬುದು ಹೆಗ್ಗಳಿಕೆ.
ಈಚಿನ ವರ್ಷಗಳಲ್ಲಿ ಪರಿಶುದ್ಧ ಮನರಂಜನೆಯ ಚಿತ್ರಗಳು ಬಿಡುಗಡೆ ಕಂಡಿದ್ದು ವಿರಳ. ಆದರೆ ಶ್ರೀಮಂತಿಕೆಯ, ಹೃದಯ ವೈಶಾಲ್ಯದ ವಿಷಯ ಇಟ್ಟುಕೊಂಡು ಮಹತ್ವದ ಸಂದೇಶ ಕೊಡುವ ಆಶಯದಲ್ಲಿರುವ ಚಿತ್ರತಂಡಕ್ಕೆ ಈ ಚಿತ್ರ ಕೌಟುಂಬಿಕ ಪ್ರೇಕ್ಷಕರನ್ನು ಖಂಡಿತಾ ಸೆಳೆದು ಕಮಾಲ್ ಮಾಡುತ್ತದೆ ಎಂಬುದು ಚಿತ್ರತಂಡದ ನಂಬಿಕೆ.
ಚುನಾವಣೆ ಮುಗಿದ ತಕ್ಷಣವೇ ಬಹಳವೇ ಧೈರ್ಯ ಮಾಡಿ ಬರುತ್ತಿರುವ ಶ್ರೀಮಂತಗೆ ಮೇಕಿಂಗ್ ಮತ್ತು ವಿಷಯದ ಮೇಲೆ ಬಹಳವೇ ಭರವಸೆ. ಹಾಗಾಗಿ ಈ ಚಿತ್ರವನ್ನು ಪ್ರೇಕ್ಷಕ ಕೈ ಹಿಡಿದು ಗೆಲ್ಲಿಸುವುದು ಅನಿವಾರ್ಯವಾಗಿದೆ.