Snehapriya.com

June 8, 2025

ಶ್ರೀಮಂತ ಚಿತ್ರವಿಮರ್ಶೆ

Social Share :

ರೇಟಿಂಗ್ : 4/5

ನಿರ್ಮಾಪಕರು : ಟಿ.ಕೆ.ರಮೇಶ್
ನಾರಾಯಣಸ್ವಾಮಿ
ಸಂಜಯ್ ಬಾಬು

ನಿರ್ದೇಶನ : ಹಾಸನ್ ರಮೇಶ್

ಗ್ರಾಮೀಣ ಸೊಗಡಿನಲ್ಲಿ ಮೀಯುವ
ಸೋಗಸು ಕನಸುಗಳ ವಿಜೃಂಭಣೆ..

ಮರೆತು ಹೋಗಿರಬಹುದಾದ ಗ್ರಾಮೀಣ ಭಾಗದ ಜಾನಪದ ಸೊಗಡಿನ ಅಭಿವ್ಯಕ್ತಿಯಲ್ಲಿ ಮತ್ತೆ ಮೀಯುವ ಅವಕಾಶ..

ರೈತ ಭಾರತ ಭಾಗ್ಯವಿಧಾತ ಹೇಗೆ.. ಎಂಬುದಕ್ಕೆ ರೈತನ ಸಂಕಷ್ಟ ಗೋಳು ರೀತಿ ಆಸೆ ಆಕಾಂಕ್ಷೆ ಇತ್ಯಾದಿಗಳನ್ನು ಪರಿಚಯಿಸಲಾಗುತ್ತದೆ..

ಅದು ಶ್ರೀಮಂತ..!

ಇದು ಒಂದು ಊರಿನಲ್ಲಿ ನಡೆಯುವ ಕಥೆ. ಇಡೀ ಗ್ರಾಮೀಣ ಭಾಗವನ್ನು ಪ್ರತಿನಿಧಿಸುತ್ತದೆ. ರೈತ ಮಳೆಗೆ ಕಾಯುವುದು.. ಅದಕ್ಕಾಗಿ ಅನೇಕ ಆಚರಣೆಗಳನ್ನು ಮಾಡುವುದು ಮಳೆ ಬಂದು ಸಂಪನ್ನವಾದ ಬಳಿಕ ಕೃಷಿಯಲ್ಲಿ ತೊಡಗಿ ಬೆಳೆ ಬೆಳೆಯುವುದು ಎಲ್ಲವೂ ಸುಂದರ ಮತ್ತು ಅಚ್ಚುಕಟ್ಟು.

ಅದರ ಬಳಿಕ ಇಡೀ ಊರು ಮನರಂಜನೆಗೆ ತೆರೆದುಕೊಳ್ಳುತ್ತದೆ. ಆಗ ಹುಟ್ಟುವುದು ನಾಟಕ ಆಡುವ ಕನಸು. ಅದೇ ಪ್ರಹಸನ ಇಡೀ ಚಿತ್ರದ ಜೀವಾಳವಾಗುತ್ತದೆ.

ಊರೆಂದ ಮೇಲೆ ಅಲ್ಲಿ ತರಲೇ ಹುಡುಗರ ಗುಂಪಿರುತ್ತದೆ. ಆ ಹುಡುಗರ ತುಂಟಾಟ ದೊಡ್ಡವರಿಗೆ ಸಂಕಟ ತಂದೊಡ್ಡುತ್ತದೆ ಎಂಬುದರಿಂದ ಹಿಡಿದು ಊರಿನ ಸಂಕಷ್ಟ ಸಮಯದಲ್ಲಿ ಆದರ್ಶದ ಯುವಕನೊಬ್ಬ ನೆರವಾಗುತ್ತಾನೆ ಎಂಬಷ್ಟರ ಮಟ್ಟಿಗೆ ಕಥೆ ಸಾಗುವಾಗ ಆ ಒಂದು ತಿರುವು ಸಿಗುತ್ತದೆ..

ಪೂರ್ವಾರ್ಧದಲ್ಲಿ ಗ್ರಾಮೀಣ ಸೊಗಡಿನ ಸುತ್ತ ತಿರುಗುವ ಕಥೆಗೆ ಉತ್ತರಾರ್ಧದಲ್ಲಿ ಪ್ರೇಮದ ನಂಟು ಆಹ್ಲಾದಕರವಾಗುತ್ತದೆ..

ಎಲ್ಲಿಂದ ಶುರುವಿಡಲಿ ಕಥಕಳಿಯ ಎಂಬುದರಿಂದ ಹಿಡಿದು ಹೂವೊಂದು ಪ್ರೇಮದಾ ಬನದಲಿ ಅರಳಿ ನಗುತಿದೆ ಎಂಬುದಕ್ಕೆ ಹಂಸಲೇಖ ಸಂಗೀತ ಕಚಗುಳಿ ಇಟ್ಟು ಮೋಡಿ ಮಾಡಿ ಬಿಡುತ್ತದೆ..

ನಾಟಕ ರಂಗೇರುವ ಹೊತ್ತಿಗೆ ಪ್ರೇಮ ಸಂಘರ್ಷ ಶುರುವಾಗಿರುತ್ತದೆ. ಜಾತ್ರೆ ಮತ್ತು ಪ್ರೇಮದ ರಂಗಾಟದ ನಡುವೆ ಸಮಯ ಹೋಗಿದ್ದೇ ತಿಳಿಯುವುದಿಲ್ಲ..

ಕೊನೆಯಲ್ಲಿ ಬರುವ ಸೋನುಸೂದ್ ಚಿತ್ರಕ್ಕೆ ಬೇರೆಯದೇ ಆಯಾಮ ನೀಡುತ್ತಾರೆ. ರೈತ ಶ್ರೀಮಂತ ಏಕೆಂದರೆ ಅದರ ಹಿಂದಿನ ವೈವಿಧ್ಯ ವೈಭೋಗ ಎಲ್ಲವೂ ಇರುತ್ತದೆ ಎಂಬುದನ್ನು ಸಾರುತ್ತದೆ ಚಿತ್ರ.

ನಿರ್ದೇಶಕ ಹಾಸನ್ ರಮೇಶ್ ರೈತರನ್ನು ವಾಸ್ತವ ಪ್ರಜ್ಞೆಯಲ್ಲೇ ಮೆರೆಸಲು ಶ್ರಮ ಹಾಕಿರುವುದರಿಂದ ಇಂದಿನ ವೇಗದ ಸಿನಿಮಾ ಕಲ್ಪನೆಯಿಂದ ದೂರವಾಗಿದೆ. ಚಿತ್ರದಲ್ಲಿ ಅನಗತ್ಯ ದೃಶ್ಯಗಳಿದ್ದರೂ ಅವಧಿ ಹೆಚ್ಚು ಮಾಡಿಕೊಂಡಿರುವುದು ಹೀಗೆ ಕೆಲವೇ ಕೆಲವು ಆಕ್ಷೇಪಗಳ ಹೊರತಾಗಿ ಶ್ರೀಮಂತ ಶುದ್ಧ ಮನರಂಜನೆಯ ಚಿತ್ರ.

ಮುಖ್ಯ ಪಾತ್ರದಲ್ಲಿರುವ ಕ್ರಾಂತಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ಅಭಿನಯ ನೀಡಿದ್ದರೆ. ಇನ್ನು ನಟಿಯರಿಬ್ಬರ ಪೈಕಿ ಪೊಸೆಸಿವ್ ನಲ್ಲಿ ಬೇಯುವ ವೈಷ್ಣವೀ ಮೆನನ್ ಅತ್ಯಾದ್ಭುತ ಅಭಿನಯ ನೀಡಿದರೆ, ಅಷ್ಟೇ ಚೆಂದ ಮತ್ತು ಆಹ್ಲಾದಕರ ಹುಡುಗಿಯಾಗಿ ವೈಷ್ಣವೀ ಪಟವರ್ಧನ್ ಮಿಂಚಿದ್ದಾರೆ. ಎಲ್ಲದಕ್ಕಿಂತ ಗಮನ ಸೆಳೆಯುವುದು ಅವ್ವನ ಪಾತ್ರ. ಕಲ್ಯಾಣಿ ಮತ್ತೊಬ್ಬ ಉಮಾಶ್ರೀ ಆಗಬಲ್ಲೇ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹಂಸಲೇಖ ಅವರ ಸಂಗೀತದಲ್ಲಿ ಹಾಡುಗಳು ಸೊಗಸಾಗಿವೆ. ಅದರಲ್ಲಿಯೂ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕೊನೆಯ ಹಾಡು ‘ರೈತ ಭಾರತ ಭಾಗ್ಯ ವಿಧಾತ..’ ಎಂಬುದು ರೈತ ಗೀತೆಯಾಗಬಲ್ಲದು. ರವಿಕುಮಾರ್ ಸನಾ ಅವರ ಛಾಯಾಗ್ರಹಣದಲ್ಲಿ ಪ್ರತಿ ಫ್ರೇಮ್ ಅಚ್ಚುಕಟ್ಟಾಗಿದೆ.

ನಿರ್ದೇಶಕ ಹಾಸನ್ ರಮೇಶ್ ಕೂಡ ಚಿತ್ರದಲ್ಲಿ ಆಗಾಗ ಕಾಣಿಸಿಕೊಳ್ಳುವುದು ವಿಶೇಷ. ಇನ್ನುಳಿದಂತೆ ಗಿರೀಶ್ ಶಿವಣ್ಣ, ಕುರಿರಂಗ, ಮಧುಗಿರಿ ಪ್ರಕಾಶ್, ರವಿಶಂಕರ್ ಗೌಡ, ಚರಣ್ ರಾಜ್ ಸಿಕ್ಕಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *