ಹಾಸನ್ ರಮೇಶ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಶ್ರೀಮಂತ’ ಚಿತ್ರ ಇದೇ ವಾರ ಅಂದರೆ ಮೇ 19ರಂದು ಬಿಡುಗಡೆ ಕಾಣುತ್ತಿದ್ದು, ಈ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಮಾನವೀಯ ತುಡಿತವಿರುವ ಅಸಾಮಾನ್ಯ ನಟ ಎಂದು ಗುರುತಿಸಿಕೊಂಡಿರುವ ಸೋನು ಸೂದ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿರುವುದು ವಿಶೇಷ..
ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಹಾಸನ್ ರಮೇಶ್ ಹಾಗೂ ಚಿತ್ರತಂಡ ಮಾಧ್ಯಮಗಳಿಗೆ ವಿವರಗಳನ್ನು ನೀಡಿತು.
ಚಿತ್ರದ ಆರಂಭಿಕ ಹಂತದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡು ನಂತರ ಎಲ್ಲಾ ಪಾತ್ರಗಳ ಸೂತ್ರಧಾರ ಎಂಬಂತೆ ಕಂಡು ಬರುತ್ತಾರೆ. ನಮ್ಮ ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸುದೀಪ್ ಔದಾರ್ಯ ಮೆರೆದಿದ್ದಾರೆ ಎಂದರು ಹಾಸನ್ ರಮೇಶ್.
ಮುಖ್ಯವಾಗಿ ಇದು ರೈತ ಶ್ರೀಮಂತ ಎಂದು ಸಾರುವ ಚಿತ್ರ. ಜೊತೆಗೆ ಕರ್ನಾಟಕದ ಆಚಾರ ವಿಚಾರ ನಡೆ ನುಡಿ ಸಂಪ್ರದಾಯ ಆಚರಣೆಯನ್ನು ಒಳಗೊಂಡಿದೆ. ಆ ಮೂಲಕ ಎಲ್ಲರ ಮನ ಗೆದ್ದಿದೆ.. ಬದುಕಿನ ಸಂಭ್ರಮಗಳು ಇಲ್ಲಿ ತೆರೆದುಕೊಳ್ಳುವುದೇ ವಿಶೇಷ ರೀತಿಯಲ್ಲಿ ಎಂದು ವಿವರಿಸಿದರು.
ಸೋನು ಸೂದ್ ಬಾಲಿವುಡ್ ಚಿತ್ರಗಳಲ್ಲಿ ಬ್ಯುಜಿ ಇರುವುದರಿಂದ ಪ್ರಚಾರಕ್ಕೆ ಬಂದಿಲ್ಲ; ಸುದೀಪ್ ಅವರು ಇಡೀ ಚಿತ್ರವನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ರೈತನ ಶಕ್ತಿಯ ಅನಾವರಣ ಈ ಚಿತ್ರದ ತಾಕತ್ತು ಎಂದು ವಿವರಿಸಿದರು ಹಾಸನ್ ರಮೇಶ್.
ಚಿತ್ರದಲ್ಲಿ ಇಬ್ಬರು ನಟಿಯರ ಹೆಸರೂ ವೈಷ್ಣವೀ. ಒಬ್ಬರು ಪಟುವರ್ಧನ್ ಆದರೆ ಮತ್ತೊಬ್ಬರು ವೈಷ್ಣವೀ ಮೆನನ್ ಎಂಬ ಉತ್ತರವೂ ಬಂತು.
ಚಿತ್ರದಲ್ಲಿ ರೈತ ಸಂತ ಎಂಬ ಥೀಮ್ ಸಾಂಗ್ ಹಾಡಿರುವುದು ದಿವಂಗತ ಎಸ್.ಪಿ.ಬಾಲಸುಬ್ರಮಣ್ಯಂ ಅವರು. ಇದು ಅವರ ಕೊನೆಯ ಹಾಡು. ಹಾಗಾಗಿ ಅವರ ನೆನಪು ತೀವ್ರವಾಗಿ ಕಾಡುತ್ತದೆ ಎಂದವರು ಸೌಂಡ್ ಡಿಸೈನರ್ ಪಳನಿ ರಾಜ್.
ಅಮ್ಮನ ಪಾತ್ರ ನಿರ್ವಹಿಸಿರುವ ಕಲ್ಯಾಣಿ ರಾಜ್ ತಮ್ಮ ಪಾತ್ರದ ಬಗ್ಗೆ ವಿವರ ನೀಡಿದರು. ಹಿನ್ನೆಲೆ ಸಂಗೀತ ನೀಡಿರುವ ಆರವ್ ಋಷಿಕ್, ವಿನಯ್ ವಜ್ರಪ್ಪ, ಶ್ರೀನಾಥ್ ಕೌಂಡಿಣ್ಯ, ನಿರ್ಮಾಪಕ ಸಂಜಯ್ ಬಾಬು, ನಟರಾದ ಗಿರೀಶ್ ಶಿವಣ್ಣ,
ಕುರಿ ರಂಗ ಹಾಗೂ ಇತರರು ಹಾಜರಿದ್ದರು.