ಮಾರಣಾಂತಿಕ ಕೊರೊನಾ ಹರಡಿದ ಕಾಠಿಣ್ಯದ ದಿನಗಳಲ್ಲಿ ಮಾನವೀಯತೆ ಮೆರೆದು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಪ್ರಸಿದ್ಧ ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಸಂಬಂಧಿ ನಟ ಭುವನ್ ಪೊನ್ನಣ್ಣ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ‘ಮದರ್ ತೆರೆಸಾ ರಾಷ್ಟ್ರೀಯ ಸ್ಮಾರಕ’ ಪ್ರಶಸ್ತಿಯನ್ನು ನೀಡಲಾಗಿದೆ.
ಜುಲೈ 3ರ ಭಾನುವಾರ ‘ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ’ ಹಾಗೂ ‘ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ’ ಸಂಸ್ಥೆಗಳು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಹರ್ಷಿಕಾ ಹಾಗೂ ಭುವನ್ ಗೆ ನೀಡಲಾಗಿದೆ.
ಕೊರೊನಾ ಸಮಯದಲ್ಲಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಸಂತ್ರಸ್ತರಿಗೆ ಸಹಾಯ ಮಾಡಲು ಬಹಳವಾಗಿ ಶ್ರಮಿಸಿದ್ದರು. ಕಾಡು ಮೇಡುಗಳನ್ನು ತಿರುಗಿ ಆಹಾರ ಹಂಚುವುದು; ವೈದ್ಯಕೀಯ ಪರಿಕರಗಳನ್ನು ನೀಡುವುದು ಮೊದಲಾದ ಮಾನವೀಯ ನೆಲೆಯ ಚಿಂತನೆಗಳ ಜೊತೆ ಕೆಲಸ ಮಾಡಿದ್ದರು.
ಇದಕ್ಕಾಗಿ ಅವರು ಹಗಲಿರುಳೆನ್ನದೆ ಶ್ರಮಪಟ್ಟಿದ್ದರು ಎಂಬುದು ಹೆಚ್ಚುಗಾರಿಕೆಯ ವಿಷಯವಾಗಿತ್ತು. ಕನ್ನಡ, ತಮಿಳು,ತೆಲುಗು, ಮಲಯಾಳಂ ಹಾಗೂ ಭೋಜ್ ಪುರಿ ಚಿತ್ರಗಳಲ್ಲಿ ನಟಿಸುತ್ತಾ ಅತ್ಯಂತ ಬ್ಯುಜಿಯಾಗಿರುವ ನಟಿ ಹರ್ಷಿಕಾ ಪೂಣಚ್ಚ ಬೆಂಗಳೂರು ಹಾಗೂ ಮಡಿಕೇರಿ ಮೊದಲಾದ ಕಡೆ ಸಮಾಜಸೇವೆಯಲ್ಲಿ ತೊಡಗಿ ಕೊರೊನಾ ಸಂತ್ರಸ್ತರಿಗೆ ನೆರವಾಗಿದ್ದರು. ಭುವನ್ ಪೊನ್ನಣ್ಣ ಭುವನ್ ಫೌಂಡೇಶನ್ ಮೂಲಕ ಅವರ ಜೊತೆ ಈ ಸಮಾಜ ಮುಖಿ ಕಾರ್ಯಗಳಲ್ಲಿ ಕೈ ಜೋಡಿಸಿದ್ದರು.