ಸ್ಯಾಂಡಲ್ ವುಡ್ ನಲ್ಲಿ ಬಾಳಸಂಗಾತಿಗಳಾಗಿ ಗಮನ ಸೆಳೆದ ಹರಿಪ್ರಿಯ ಹಾಗೂ ವಸಿಷ್ಠಸಿಂಹ ಈಗ ಜೋಡಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿರುವುದು ಮತ್ತೂ ವಿಶಿಷ್ಟವಾಗಿದೆ.
ಆ ಚಿತ್ರ ಯದಾ ಯದಾ ಹಿ..!
ಒಂದು ಮರ್ಡರ್ ಮಿಸ್ಟ್ರಿ ಕಥೆ. ಅದರ ಸುತ್ತ ನಡೆಯುವ ಕುತೂಹಲಕಾರಿ ಪಯಣವನ್ನು ಹೇಳುವ ಚಿತ್ರ ‘ಯದಾ ಯದಾ ಹಿ’. ದಾಂಪತ್ಯ ಜೀವನಕ್ಕೆ ಅಡಿ ಇರಿಸಿದ ಬಳಿಕ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವೂ ಇದಾಗಿದೆ.
ಈ ಚಿತ್ರದಲ್ಲಿ ನಟ ದಿಗಂತ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಲವಾರು ವೈಶಿಷ್ಟ್ಯ ಗಳ ಜೊತೆ ಸಿದ್ಧಗೊಂಡಿರುವ ಚಿತ್ರ ಇದೇ ಜೂನ್ 2ರಂದು ತೆರೆ ಕಾಣುತ್ತಿದೆ.
ಶಾಲಿನಿ ಎಂಟರ್ ಪ್ರೈಸಸ್ ಮೂಲಕ ಜಾಕ್ ಮಂಜು ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಕಂಡು ಗಮನ ಸೆಳೆಯಿತು.
ಇತ್ತೀಚೆಗಷ್ಟೇ ಈ ಚಿತ್ರದ ಶೀರ್ಷಿಕೆ ಗೀತೆಯನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದರು. ವಿಶೇಷವಾಗಿ ವಸಿಷ್ಠಸಿಂಹ ಹಾಗೂ ಹರಿಪ್ರಿಯ ಈ ಹಾಡನ್ನು ಹಾಡಿದ್ದಾರೆ. ತೆಲುಗು ಮೂಲದ ಅಶೋಕ್ ತೇಜ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಎರಡು ಭಾಷೆಗಳಲ್ಲಿ ಇದು ಬಿಡುಗಡೆ ಕಾಣುತ್ತಿದೆ.
ತೆಲುಗು ಅವತರಣಿಕೆಯಲ್ಲಿ ನಟಿ ರೆಜಿನಾ ಅವರು ನಿರ್ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಹರಿಪ್ರಿಯಾ ನಿರ್ವಹಿಸಿದ್ದಾರೆ. ಹಿರಿಯನಟ ಅವಿನಾಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂಬ ವಿವರಗಳು ಬಂದವು.
ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದ್ರಾಬಾದ್ ಮೂಲದ ರಾಜೇಶ್ ಅಗರವಾಲ್ ಬಂಡವಾಳ ಹೂಡಿದ್ದು, ಚಿತ್ರವು ಅದ್ದೂರಿಯಾಗಿ ಮೂಡಿ ಬಂದಿದೆ. ಕೇರಳದ ಮೂನ್ನಾರ್, ಚಿಕ್ಕಮಗಳೂರು, ಹೈದರಾಬಾದ್ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 55 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂಬ ಮಾಹಿತಿ ಕೊಟ್ಟಿತು ಚಿತ್ರತಂಡ.
ತೆಲುಗಿನ ಪ್ರಸಿದ್ಧ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ನಾನು ಇನ್ಸ್ ಪೆಕ್ಟರ್ ಪಾತ್ರ ನಿರ್ವಹಿಸಿರುವೆ ಎಂದರು ನಟ ದಿಗಂತ್. ಇದು ಜನರಿಗೆ ಇಷ್ಟವಾಗುವಂಥ ಕಥೆ. ನನ್ನ ಪಾತ್ರಕ್ಕೆ ಮತ್ತೊಂದು ಶೇಡ್ ಕೂಡ ಇದೆ ಎಂದರು.
ನಿರ್ದೇಶಕ ಅಶೋಕ್ ತೇಜ ಅವರು ಕಥೆ ಹೇಳಿದಾಗ ಬಹಳವೇ ಆಸಕ್ತಿ ಮೂಡಿತು. ಇದು ತೆಲುಗಿನ ಯವುಡು ಕಾದಂಬರಿ ಆಧರಿಸಿ ಮಾಡಲಾಗಿದೆ. ಒಂದೊಳ್ಳೆಯ ಪಯಣದ ಕಥೆ ಇದರಲ್ಲಿದೆ ಎಂದರು ವಸಿಷ್ಠಸಿಂಹ.
ಶೀರ್ಷಿಕೆ ಗೀತೆಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಸಿನಿಮಾದಲ್ಲಿನ ಪಾತ್ರಗಳು, ಅವುಗಳ ತೊಳಲಾಟಗಳನ್ನು ಹೇಳುವ ಸಾಹಿತ್ಯವಿದು. ಚಿತ್ರದಲ್ಲಿ ಪ್ರೀತಿ, ಮೋಸ, ದ್ವೇಷ ಎಲ್ಲವೂ ಇದೆ ಎಂದು ಹೇಳಿದರು.
ಕಥೆ ಕೇಳಿದಾಗಲೇ ನನಗೆ ತುಂಬಾ ಇಷ್ಟವಾಗಿತ್ತು ಎಂದರು ಹರಿಪ್ರಿಯ. ಸಿನಿಮಾ ನೋಡಿ ಮತ್ತಷ್ಟು ಖುಷಿ ಆಯ್ತು. ನಾನು ವಸಿಷ್ಠ, ದಿಗಂತ್ ಮೂರೂ ಜನ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದೇವೆ. ನನಗೆ ಇದರಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶ ಇದೆ ಎಂದರು.
ಮೂರು ಜನರ ಮೇಲೂ ಕಥೆ ಸಾಗುತ್ತದೆ, ಮೂವರೂ ಒಬ್ಬರಿಗಿಂತ ಒಬ್ಬರು ಬುದ್ದಿವಂತರು, ಚಾಣಾಕ್ಷರು, ಇಡೀ ಸಿನಿಮಾ ಸೀಟಿನ ತುದಿಯಲ್ಲಿ ಕೂತು ನೋಡಿಸಿಕೊಂಡು ಹೋಗುತ್ತದೆ. ಟೈಟಲ್ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಸಿನಿಮಾವನ್ನು ಕೂಡ ಜನ ಇಷ್ಟಪಡುತ್ತಾರೆಂಬ ನಂಬಿಕೆಯಿದೆ ಎಂದರು ಹರಿಪ್ರಿಯ.
ಕನ್ನಡ ನೇಟಿವಿಟಿಗೆ ತಕ್ಕಂತೆ ಚಿತ್ರ ಮಾಡಿದ್ದೇವೆ, ದೊಡ್ಡ ಬಜೆಟ್ನಲ್ಲಿ ಉತ್ತಮ ಸಿನಿಮಾ ನಿರ್ಮಾಣವಾಗಿದೆ ಎಂಬ ಆಶಯ ವ್ಯಕ್ತಪಡಿಸಿದವರು ನಿರ್ಮಾಪಕ ರಾಜೇಶ್ ಅಗರವಾಲ್.
ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಘಟ್ಟವಾಗಿದೆ ಎಂದರು ನಿರ್ದೇಶಕ ಅಶೋಕ್ ತೇಜ.
ಶ್ರೀಚರಣ್ ಪಾಕಾಲ ಸಂಗೀತದಲ್ಲಿ ಮೂರು ಹಾಡುಗಳಿದ್ದು, ಹರ್ಷವರ್ಧನ್ರಾಜ್ ಶೀರ್ಷಿಕೆ ಹಾಡು ಮಾಡಿದ್ದಾರೆ. ಯೋಗಿ ಛಾಯಾಗ್ರಹಣವಿದ್ದು, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನವಿದೆ ಎಂಬ ಮಾಹಿತಿಗಳು ಬಂದವು.