ಬಿಲ್ಡಪ್ ಗೋಡೆಗಳ ಸುತ್ತ..
ಸಿನಿಮಾ ರಂಗ ಈಗ ಮೊದಲಿನ ಘನತೆ ಉಳಿಸಿಕೊಂಡಿಲ್ಲ ಎಂಬುದು ಸಾಂಪ್ರದಾಯಿಕ ನೆಲೆಯಿಂದ ಬಂದವರ ಮಾತು..
ಆದರೆ ನಿರ್ದೇಶಕ ಎಚ್.ಎನ್.ನರೇಶ್ ಕುಮಾರ್ ಇಂದಿನ ಎಲ್ಲಾ ಆಗು ಹೋಗು ನಡವಳಿಕೆಯ ಸುತ್ತ ಕಥೆ ಹೆಣೆದು ಇದೇ ನೋಡಿ ಇಂದಿನ ವಾಸ್ತವ ಎಂದು ಬಿಂಬಿಸಿದ್ದಾರೆ.
ಅದು ಸೌತ್ ಇಂಡಿಯನ್ ಹೀರೋ. ಚಿತ್ರದ ಒಳಗೊಂದು ಚಿತ್ರವಿದೆ. ಅಲ್ಲಿ ಚಿತ್ರೀಕರಣ ನಡೆಯುತ್ತದೆ. ವ್ಯಾಪಾರದ ಪ್ರತಿಬಿಂಬ ಎದ್ದು ಕಾಣುತ್ತದೆ. ಅದೆಲ್ಲವನ್ನೂ ಮೀರಿದಂತೆ ಹೀರೋ ಅಂದ್ರೆ ಬಿಲ್ಡಪ್ ಮಾತ್ರ ಎಂಬುದು ಎದ್ದು ಕಾಣುತ್ತದೆ.
ಸಿನಿಮಾ ರಂಗದಲ್ಲಿ ಹೀರೋಯಿಸಂ ಬಿಲ್ಡಪ್ ಯಾವಾಗ ಹುಟ್ಟಿಕೊಂಡಿತೋ ಆಗ ದರ್ಪ, ದೌಲತ್ತು, ಅಸೂಯೆ ವಿಚಾರಗಳು ಹೆಚ್ಚಾದವು. ತಮ್ಮ ಸುತ್ತಲೂ ಅಭೇದ್ಯ ಗೋಡೆ ಕಟ್ಟಿಕೊಳ್ಳುವ ಹೀರೋಗಳು ಕೇವಲ ಬಿಲ್ಡಪ್ ಗೆ ಸೀಮೀತ ಎಂಬುದು ಇಲ್ಲಿ ಕಾಣುತ್ತದೆ.
ಲಾಜಿಕ್ ಲಕ್ಷ್ಮಣ ರಾವ್ ಇಲ್ಲಿ ಸಾಮಾನ್ಯ ಪ್ರೇಕ್ಷಕನ ಪ್ರತಿನಿಧಿಯಂತೆ ಕಾಣುತ್ತಾನೆ. ಆತನ ತಲೆಯೊಳಗೆ ಮೂಡುವ ಪ್ರಶ್ನೆ ಮತ್ತು ಲಾಜಿಕ್ ಬುದ್ಧಿವಂತ ಪ್ರೇಕ್ಷಕನ ಮನಸ್ಥಿತಿಯೇ ಆಗಿದೆ. ಆದರೆ ಅದೆಲ್ಲವನ್ನು ಮೀರಿ ಸಿನಿಮ್ಯಾಟಿಕ್ ಗುಣಗಳು ವಿಜೃಂಭಿಸುತ್ತವೆ ಎಂದು ಗೊತ್ತಾದಾಗ ಆತ ಲಕ್ಕಿಯಾಗುತ್ತಾನೆ. ಆಗ ಅವನು ಸಾಮಾನ್ಯ ಪ್ರೇಕ್ಷಕ.
ಕೊನೆಗೆ ಬದುಕಿನ ಶೂನ್ಯ ಭಾವದವರೆಗೂ ತಲುಪುವ ಆಶಯದೊಳಗೆ ಇದ್ದವನಿಗೆ ಲೌಕಿಕ ಜಗತ್ತಿನಲ್ಲಿ ಇನ್ನು ಮಾಡುವ ಕೆಲಸಗಳು ಬೇಕಾದಷ್ಟಿವೆ ಎಂಬುದರ ಅರಿವು ಮಾಡಿಕೊಡಲಾಗುತ್ತದೆ.
ಇದನ್ನು ಕೇವಲ ಒಂದು ಚಿತ್ರವಾಗಿ ಮಾತ್ರ ನೋಡಲು ಸಾಧ್ಯವಿಲ್ಲ. ಏಕೆಂದರೆ ಸಿನಿಮಾದ ಒಳಗಿದ್ದವರಿಗೆ ಈ ಕಥೆ ಬೇಗ ಕನೆಕ್ಟ್ ಆಗುತ್ತದೆ.
ಹೊರಗಿನವರಿಗೆ ಅಯ್ಯೋ ಇದೆಲ್ಲಾ ನಿಜವಾ.. ಎಂಬ ಅನುಮಾನಗಳನ್ನು ಹುಟ್ಟು ಹಾಕುತ್ತದೆ.
ಸಿನಿಮಾ ಹೃದಯಕ್ಕೆ ಸಂಬಂಧಿಸಿದ್ದು, ತಲೆಗಲ್ಲ.. ಎಂಬುದನ್ನು ಮನರಂಜನೆಯ ಮೂಲಕವೇ ಅರ್ಥ ಮಾಡಿಸುವಲ್ಲಿ ನರೇಶ್ ಕುಮಾರ್ ಸಫಲತೆ ಸಾಧಿಸಿದ್ದಾರೆ.
‘ಗೆದ್ದರೆ ಅಸೂಯೆಯಿಂದ; ಹೊಟ್ಟೆ ಕಿಚ್ಚಿನಿಂದ ಹೃದಯ ಒಡೆಯುವ ಜನರಿದ್ದಾರೆ..
ಸೋತರೆ ಹೃದಯ ತಾನಾಗಿಯೇ ಒಡೆಯುತ್ತದೆ..’
ಇದು ಚಾರ್ಲಿ ಚಾಪ್ಲಿನ್ ಅವರನ್ನು ಉಲ್ಲೇಖಿಸುತ್ತಾ ರಾಜ್ ಕಪೂರ್ ಅವರು ಹೇಳುವ ಮಾತು..
ಈ ಚಿತ್ರದ ಆಶಯದಲ್ಲಿ ಇದನ್ನು ಒಳಗೊಳಿಸಲಾಗಿದೆ. ಇಡೀ ಚಿತ್ರವನ್ನು ಆವರಿಸಿರುವ ಸಾರ್ಥಕ್ ನಿಜವಾದ ಸೌತ್ ಇಂಡಿಯನ್ ಹೀರೋ ಆಗಿ ಮೆರೆದಿದ್ದಾರೆ ಮಾತ್ರವಲ್ಲ; ನಿಜವಾಗಿ ತಾವೊಬ್ಬ ಹೀರೋ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಮಾನಸಿ ಪಾತ್ರದಲ್ಲಿ ಖಾಸೀಮಾ ಭರವಸೆಯ ನಟಿಯಾಗಿ ಹೊಮ್ಮಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ಡೈರೆಕ್ಟರ್ ಆಗಿರುವ ವಿಜಯ್ ಚೆಂಡೂರ್, ಗುರು ನಾಗರಾಜ್ ಹಾಗೂ ಮತಿತ್ತರರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ರಾಜಶೇಖರ್ ಕ್ಯಾಮೆರಾ ಹಾಗೂ ಹರ್ಷವರ್ಧನ್ ಹಾಗೂ ಸಿ.ಜೆ.ಅನಿಲ್ ಸಂಗೀತ ವಿಜೃಂಭಿಸಿದೆ ಎಂದರೆ ತಪ್ಪಲ್ಲ..