ಹಾಸ್ಯಮಯ ಚಿತ್ರಗಳು ಸದಾ ಪ್ರೇಕ್ಷಕರನ್ನು ಗೆಲ್ಲುತ್ತವೆ. ಅದರಲ್ಲಿಯೂ ಪರಿಶುದ್ಧ ಹಾಸ್ಯ ಮಯ ಚಿತ್ರಗಳು ಮನೆ ಮಂದಿಯನ್ನೆಲ್ಲಾ ಗೆಲ್ಲುತ್ತವೆ. ಆ ಸಾಲಿಗೆ ಸೇರುವ ‘ಗೋವಿಂದ ಗೋವಿಂದ’ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅದಕ್ಕೆ ಮುಂಚೆ ಚಿತ್ರದ ಹಾಡುಗಳ ಝಲಕ್ ಹೇಗಿದೆ ಎಂಬುದನ್ನು ತಿಳಿಸಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಮಧುಗಿರಿ ಕ್ಷೇತ್ರದ ಹಿರಿಯ ರಾಜಕೀಯ ಧುರೀಣ ಕೆ.ಎನ್.ರಾಜಣ್ಣ, ಹಿರಿಯ ನಿರ್ದೇಶಕ ಲಿಂಗದೇವರು ಮೊದಲಾದವರು ಈ ಸಂದರ್ಭದಲ್ಲಿ ಶುಭ ಹಾರೈಸಲು ಬಂದಿದ್ದರು.
ಕಿರುತೆರೆಯಲ್ಲಿ ಹೆಸರಾಗಿರುವ ರವಿಗರಣಿ ಚಿತ್ರದ ನಿರ್ಮಾಪರಲ್ಲಿ ಒಬ್ಬರು. ಅವರ ಜೊತೆ ಕೆಲಸ ಮಾಡಿರುವ ತಿಲಕ್ ಚಿತ್ರದ ನಿರ್ದೇಶಕರು. ಸುಮಂತ್ ಶೈಲೇಂದ್ರ ಹಾಗೂ ಕವಿತಾಗೌಡ ಮುಖ್ಯ ಪಾತ್ರದಲ್ಲಿದ್ದರೆ; ಅವರಿಗೆ ಸಮಾನಾಂತರವಾಗಿ ರೂಪೇಶ್ ಶೆಟ್ಟಿ ಹಾಗೂ ಭಾವನಾ ಜೋಡಿ ಇದೆ. ಇದು ಮನೆ ಮಂದಿಯೆಲ್ಲಾ ಕುಳಿತು ನೋಡುವ ಚಿತ್ರ ಎಂದರು ತಿಲಕ್. ಹಾಡುಗಳಲ್ಲಿ ವೈವಿಧ್ಯತೆ ಇದೆ. ಅದರಲ್ಲಿಯೂ ವೆಂಕಟೇಶ್ವರ ಸುಪ್ರಭಾತದ ರೀತಿಯಲ್ಲಿ ಇರುವ ಹಾಡು ಈಗಾಗಲೇ ಜನ ಮನ ಗೆದ್ದಿದೆ. ಈ ಹಾಡನ್ನು ಬೆಲಂ ಬಾಟಂ ಚಿತ್ರದ ಸಿದ್ದಪ್ಪಾಜಿ ಹಾಡು ಖ್ಯಾತಿಯ ಕಡಬಗೆರೆ ಮುನಿರಾಜು ಹಾಡಿರುವುದು ವಿಶೇಷ ಎಂದರು ರವಿಗರಣಿ. ಒಂದು ಚಿತ್ರ ಮೂರು ದಿನ ಓಡಿದ್ರೆ ಯಶಸ್ವಿ ಯಾಗಲ್ಲ.. ಬದಲಿಗೆ ಅದು ನೂರು ದಿನ ಓಡಬೇಕು ಎಂದರು ಲಿಂಗದೇವರು.
ಅಂದ ಹಾಗೆ ಹಿತನ್ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಪ್ರದೀಪ್ ವರ್ಮ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಈಗ ನಮಗೆ ಸಿಡಿ ಅನ್ನಲು ಭಯವಾಗುತ್ತದೆ. ಹಾಗಾಗಿ ಹಾಡುಗಳ ಜುಕೆ ಬಾಕ್ಸ್ ಎಂದು ಹೇಳುತ್ತಿದ್ದೇವೆ ಎಂದು ಚಟಾಕಿ ಹಾರಿಸಿದರು ರವಿ ಗರಣಿ. ಚಂದ್ರಶೇಖರ್ ಕ್ಯಾಮೆರಾ ಚಿತ್ರಕ್ಕಿದೆ. ನಿರ್ಮಾಪಕ ಶೈಲೇಂದ್ರ ಬಾಬು ಅವರ ಗೈರು ಹಾಜರಿ ಇತ್ತು.