ಕಣ್ಕುವ ಬೆಳಕು.. ಶಬ್ಧದ ಝೇಕಾರ.. ಯುವತಿಯರ ಒನಪು ವಯ್ಯಾರ.. ಚಿಕ್ಕ ಮಕ್ಕಳ ಫ್ಯಾಷನ್ ಅನುಕರಣೆಯ ಜೊತೆಗೆ ಕನ್ನಡದ ಸಿನಿಮಾ ಕ್ಷೇತ್ರದ ದಿಗ್ಗಜರ ಸಮಾಗಮ..
ಅದು ಫ್ಲೆಮಿಂಗೋ ಸೆಲೆಬ್ರಿಟೀಸ್ ಪ್ರಶಸ್ತಿ ಪ್ರದಾನ ಸಮಾರಂಭ. ಅದ್ದೂರಿಯ ಆ ಸಮಾರಂಭದಲ್ಲಿ
ಸೇರಿದ್ದವರು ಉತ್ಸಾಹದ ಚಿಲುಮೆಗಳಂತ್ತಿದ್ದರು..
ಫ್ಲಮಿಂಗೋ ಸೆಲೆಬ್ರಟೀಸ್ ವರ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ದಶಕದ ಸಂಭ್ರಮದ ಹಿನ್ನೆಲೆಯಲ್ಲಿ ಏರ್ಪಾಡಾಗಿದ್ದ ಸಮಾರಂಭದಲ್ಲಿ ಜಗಮಗಿಸುವ ಬೆಳಕಿತ್ತು. ಫ್ಯಾಷನ್ ಶೋಗಾಗಿ ಬಳುಕುವ ಲಲನೆಯರ ಹೊಳಪಿತ್ತು. ಜೊತೆಗೆ ಪ್ರಶಸ್ತಿ ಪಡೆಯಲು ಬಂದ ತಾರೆಯರ ಕಲರವವಿತ್ತು.
ಧವನ್ ಸೋಹಾ ನೇತೃತ್ವದ ಸಂಸ್ಥೆ ಸಿನಿಮಾ ಕ್ಷೇತ್ರಕ್ಕೆ ಬೇಕಾದ ತರಬೇತಿಗಳನ್ನು ನೀಡುತ್ತದೆ. ಅಲ್ಲಿ ಸಿನಿಮಾ ಕ್ಷೇತ್ರದ ಪರಿಣಿತರಿಂದಲೇ ತರಬೇತಿ ದೊರೆಯುತ್ತದೆ. ಹಾಗಾಗಿ ಹಿರಿಯ ನಟಿ ಭವ್ಯ ಪ್ರಾಂಶುಪಾಲರಾದರೆ, ಪದ್ಮವಾಸಂತಿ ಮುಖ್ಯ ತರಬೇತುದಾರರು.
ಅದ್ದೂರಿಯ ಸಮಾರಂಭದಲ್ಲಿ ಹಿರಿಯ ನಟ ಶ್ರೀಧರ್, ವಿಜಯ ಕಾಶಿ, ವೈಜಯಂತಿ ಕಾಶಿ, ಹೇಮಾ
ಸಿಹಿ ಕಹಿ ಚಂದ್ರು ಗೀತಾ ಚಂದ್ರು,
ಹಿರಿಯ ನಟಿ ಕಾಮಿನಿಧರನ್,
ನಟ ಶಿವಧ್ವಜ್, ಪ್ರಮೋದ್ ಶೆಟ್ಟಿ, ಜ್ಯೋತಿ, ಬಿರಾಧಾರ್ ಮೊದಲಾದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿನಿಮಾ ಪತ್ರಿಕೋದ್ಯಮದ ಸಾಧಕರನ್ನು ಇದೇ ಸಂದರ್ಭದಲ್ಲಿ ಗುರುತಿಸಿ ಪ್ರಶಸ್ತಿ ನೀಡಿದ್ದು ವಿಶೇಷವಾಗಿತ್ತು. ಹಿರಿಯ ಛಾಯಾಗ್ರಾಹಕರಾದ ಮನು, ಮೋಕ್ಷೇಂದ್ರ, ಪವರ್ ಟಿವಿ ಸಿನಿಮಾ ವಿಭಾಗದ ಮುಖ್ಯಸ್ಥ ಲಕ್ಷ್ಮಿ ನಾರಾಯಣ್, ನ್ಯೂಸ್ ಫಸ್ಟ್ ನ ಶ್ರೀಧರ್ ಹೀಗೆ ಅನೇಕ ಸಾಧಕರಿಗೆ ಪ್ರಶಸ್ತಿ ನೀಡಿದ್ದು ವಿಶೇಷವಾಗಿತ್ತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಟಿ ಮೇಘಾಶೆಟ್ಟಿ ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ನಟಿ ಕಾಮಿನಿಧರನ್ ಕಲಾವಿದರು ಸಂಕಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಕಲಾವಿದರಲ್ಲಿ ‘ಬದುಕಿರುವವರನ್ನು ಹುಡುಕಿ ಪ್ರಶಸ್ತಿ ಕೊಡಿ’ ಆಗ ಅವರ ಬದುಕಿನಲ್ಲಿ ಚೇತರಿಕೆ ಉತ್ಸಾಹ ಕಾಣುತ್ತದೆ ಎಂದರು.