ರೇಟಿಂಗ್ : 4/5
ನೀತಿಪಾಠ ಎಬ್ಬಿ ಕೊಡುವ ಕಥೆಗಳು..
ಪ್ರೇಮದ ತೀವ್ರತೆಯಲ್ಲಿಯೇ ವಿಷಾದ ಹುಟ್ಟುತ್ತದೆ. ಅದು ವಿನೋದವಾಗಿ ಪರಿವರ್ತನೆಯಾಗುವುದು ಸಾವಿನ ಮನೆ ಕದ ತಟ್ಟಿದಾಗ..(ಗೂಫಿಸ್ ಕೆಫೆ).
ಬದುಕಿದ್ದಾಗ ವ್ಯಕ್ತಿಯ ಮೌಲ್ಯಗಳು ಅರಿವಾಗುವುದಿಲ್ಲ ಅಥವಾ ಅದಕ್ಕೆ ಬೆಲೆಯನ್ನು ಕೊಡುವುದಿಲ್ಲ.. ಸತ್ತ ಮೇಲೆ ಮುಕ್ತಿ ಕಾಣಿಸುವ ಹೆಸರಿನಲ್ಲಿ ಮಾಡುವ ಪೂಜಾ ಕರ್ಮಗಳು ಪ್ರಶ್ನಿಸಲ್ಪಡುತ್ತವೆ.. (ಮೈಸೂರು ಪಾಕ್).
ವಾಸ್ತವ ಪ್ರಜ್ಞೆ ಮರೆತು ವಿಹರಿಸುವ ಮೋಜಿನಾಟಕ್ಕೆ ಮನಸ್ಸೇ ರಾಕ್ಷಸತ್ವ ಪಡೆಯುತ್ತದೆ. ಇಂದಿನ ಯುವ ಪೀಳಿಗೆ ನಾಶ ಹೊಂದುವ ಮನಸ್ಥಿತಿ ತಲುಪುವುದು ಇಲ್ಲಿಯೇ.. (ಕಾಮಾತುರಾಣಂ ನಭಯಂ ನಲಜ್ಜ)
ಕಾಲ ಬದಲಾದರೂ ವ್ಯವಸ್ಥೆ ಬದಲಾಗಿಲ್ಲ; ಮೇಲು ಕೀಳು, ಬಡವ ಶ್ರೀಮಂತ ಹೀಗೆ ಅಸಮಾನತೆ ಮನೆ ಮಾಡಿ ಬಲಾಢ್ಯ ಕ್ರೌರ್ಯ ಮೆರೆಯುವ ಪರಿ ಮತ್ತು ಅಸಹಾಯಕತೆಯ ಕಿಚ್ಚು ಪರಿಣಾಮಕಾರಿ (ದೋಣಿ ಸಾಗಲಿ ಮುಂದೆ ಹೋಗಲಿ).
ಎಷ್ಟೇ ಒಳ್ಳೆಯ ಮನುಷ್ಯತ್ವ ಪಡೆದರೂ ಅಥವಾ ಒಳ್ಳೆಯತನದ ಸೋಗು ಹಾಕಿದರೂ ಮಾಡಿದ ಕರ್ಮ ಹಿಂಬಾಲಿಸದೇ ಬಿಡದು (ಕರ್ಮ)
ಐದೂ ಕಥೆಯ ಸೊಗಸು ಸವಿಯಲು ಚೆನ್ನಾ.. ಪ್ರತಿ ಕಥೆಗೂ ಬೇರೆಯದೇ ಆದ ವಿನ್ಯಾಸವಿರುವುದು ವಿಶೇಷ. ಮುಖ್ಯವಾಗಿ ಮಾನವೀಯ ಅನುಕಂಪದ ನೆಲೆಯಲ್ಲಿ ಚಿತ್ರಣವಾಗಿರುವ ಕಥೆಗಳು ನೋಡುಗರನ್ನು ತೀವ್ರ ಚಿಂತನೆಗೆ ಹಚ್ಚದೇ ಇರಲಾರವು.
ಜೊತೆಗೆ ಪ್ರತಿಕಥೆಯೂ ಸಂದೇಶಗಳನ್ನು ಎಬ್ಬಿ ಕೊಡುವುದು ಚಿತ್ರದ ಹೈಲೈಟ್. ಇಂದಿನ ಸಮಾಜಕ್ಕೆ ಬೇಕಾದ ಅರಿವು ಮೂಡಿಸುವ ಸಾಮರ್ಥ್ಯ ಪ್ರತಿ ಕಥೆಗೂ ಇದೆ ಎಂದರೆ ಅದು ಅತಿಶಯೋಕ್ತಿ ಅಲ್ಲ.. ಸಾಮಾಜಿಕ ನೆಲೆಯ ಎಲ್ಲಾ ಸ್ತರಗಳನ್ನು ಮುಟ್ಟಿ ಬಂದ ಅನುಭವವಾಗುತ್ತದೆ. ಹಾಗಾಗಿ ಇದು ಸಂಪೂರ್ಣ ಚಿತ್ರ.
ನಿರ್ದೇಶಕರಾದ ಚಂದ್ರಮೋಹನ್, ಆಕಾಶ್ ಶ್ರೀವತ್ಸ, ರಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶ್ ಪಾಂಡೆ ಸಮಯದ ಮಿತಿಯಲ್ಲಿ ಅತ್ಯುತ್ತಮ ಕಥೆಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲೆರಡು ಕಥೆಗಳ ಪೈಕಿ ಗೂಫಿಸ್ ಕೆಫೆ.. ಇಂದಿನ ಕಥೆ.. ಇವತ್ತಿನ ಪ್ರೇಮ.. ಅದರ ಮುಂದುವರೆದ ಭಾಗ ಕಾಮಾತುರಾಣಂ.. ಮೈಸೂರು ಪಾಕ್ ಮತ್ತು ಕೊನೆಯ ಸಿಹಿಯಲ್ಲಿ ನಂದಿ ಹೋಗುವ ಜೀವ ಬದುಕಿನ ಪರಿಣಾಮಗಳನ್ನು ಹೇಳುತ್ತವೆ.
ರಘು ಶಿವಮೊಗ್ಗ ಅವರ ಕಾಮಾತುರಾಣಂ.. ಹಾಗೂ ಕಿರಣ್ ಕುಮಾರ್ ಅವರ ದೋಣಿ ಸಾಗಲಿ.. ಎರಡು ಕಥೆಗಳು ಎಂಥವರ ಮನವನ್ನೂ ತೀವ್ರಗತಿಯಲ್ಲಿ ಕಲಕುವ ಸಾಮರ್ಥ್ಯ ಹೊಂದಿವೆ.. ದೋಣಿ ಸಾಗಲಿ..ಸಂಭಾಷಣೆ (ರಘು ನಿಡುವಳ್ಳಿ)ಯಲ್ಲಿ ಹೃದಯ ಇರಿಯುತ್ತದೆ.. ಕಾಮಾತುರಾಣಂ ದೃಶ್ಯಗಳನ್ನು ಕಟ್ಟಿ ಕೊಡುವ ರೀತಿ ಅದ್ಭುತ (ಛಾಯಾಗ್ರಹಣ ಕಿರಣ್ ಹಂಪಾಪುರ)..
ನಿರ್ಮಾಪಕರೂ ಆಗಿರುವ ಗುರುದೇಶ್ ಪಾಂಡೆ ಮತ್ತವರ ತಂಡದ ವರುಷಗಳ ಪ್ರಯತ್ನ ಕನ್ನಡ ಚಿತ್ರರಂಗಕ್ಕೆ ಹೊಸತನದ ಕೊಡುಗೆ ನೀಡಿದೆ ಎಂಬುದೇ ವಿಶೇಷ..
ಎಲ್ಲಾ ಕಲಾವಿದರು ಅತ್ಯುತ್ತಮ ನಟನೆ ನೀಡಿದ್ದರೂ ಪ್ರೀತಿಕಾ ದೇಶ್ ಪಾಂಡೆ, ಕಿಶೋರ್, ತಾನಿಷಾ ಅವರ ಪಾತ್ರಗಳು ಕಾಡುತ್ತವೆ.. ಮಣಿಕಾಂತ್ ಕದ್ರಿ ಸಂಗೀತ ವಿಜೃಂಭಿಸಿದೆ ಎಂದರೆ ತಪ್ಪಲ್ಲ..