* ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಣೆ
* ಸಬ್ಸಿಡಿ ಮುಂದುವರಿಕೆಗೆ ಸಮಿತಿ
* ಡಾ.ರಾಜ್ ವಸ್ತು ಸಂಗ್ರಹಾಲಯ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ‘ಆರೋಗ್ಯ ಯಂತ್ರ’ ಸ್ಥಾಪಿಸುವುದೂ ಸೇರಿದಂತೆ ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಮೂರು ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜುಲೈ 7) ಮಂಡಿಸಿದ ಬಜೆಟ್ ನಲ್ಲಿ ಚಿತ್ರರಂಗದ ಬೇಡಿಕೆಗಳನ್ನು ಪುರಸ್ಕರಿಸಿ ರೂಪಿಸಲಾದ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಅಭಿಮಾನಿಗಳ ದೇವರು ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಹೃದಯ ತಪಾಸಣೆಗೆ ಅನುಕೂಲವಾಗುವ ಸ್ವಯಂಚಾಲಿತ ಬಾಹ್ಯ ಡಿ ಪೈಬ್ರಿಲೇಟರ್ (ಎಇಡಿ) ಯಂತ್ರಗಳನ್ನು ಪ್ರತಿ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಅಳವಡಿಸುವುದಾಗಿ ಪ್ರಕಟಿಸಿದ್ದಾರೆ.
ಅತ್ಯಂತ ಸೂಕ್ಷ್ಮ ಸಣ್ಣ ತಂತು ಪರೀಕ್ಷಾ ಗುಣಗಳನ್ನು ಹೊಂದಿರುವ ಈ ಯಂತ್ರ ಹೃದಯಾಘಾತವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿರುತ್ತದೆ.
ಅಂದುಕೊಂಡಿರುವಂತೆಯೇ ಮೈಸೂರಿನಲ್ಲಿ ಜಾಗತಿಕ ಮಟ್ಟದ ಚಿತ್ರನಗರಿಯನ್ನು ಸ್ಥಾಪನೆ ಮಾಡುವುದಾಗಿಯೂ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ಈಚೆಗೆ ಹಿರಿಯ ನಟ ಶ್ರೀನಿವಾಸಮೂರ್ತಿ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಿತ್ರನಗರಿ ಸಂಬಂಧ ಗಮನ ಸೆಳೆದಿತ್ತು.
ಕನ್ನಡದ ಗುಣಮಟ್ಟದ ಚಿತ್ರಗಳಿಗೆ ಸಹಾಯಧನ ನೀಡುವುದೂ ನಿಂತು ಹೋಗಿರುವ ಬಗ್ಗೆಯೂ ಗಮನ ಸೆಳೆಯಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸಿದ್ದರಾಮಯ್ಯ ಅವರು ಈ ಸಂಬಂಧ ಸದ್ಯವೇ ಚಿತ್ರಗಳ ಆಯ್ಕೆ ಸಮಿತಿ ಮಾಡಿ ಸಹಾಯ ಧನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದೆಂದು ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.
ಅಲ್ಲದೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ವರನಟ ಡಾ.ರಾಜ್ ಕುಮಾರ್ (ಸಮಾಧಿ ಸ್ಥಳ) ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯ ಸ್ಥಾಪಿಸುವುದಾಗಿಯೂ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ.