Snehapriya.com

June 8, 2025

ದ್ವಾರಕೀಶ್ @78 ಏಳು ಬೀಳು ಬದುಕಿನ ದೊಡ್ಡ ನಿದರ್ಶನ

Social Share :

ಒಬ್ಬ ಮನುಷ್ಯನ ಬದುಕಿನಲ್ಲಿ ಏಳು ಬೀಳು ಹೇಗೆ ಬರುತ್ತದೆ.. ಏಳಿಗೆ ಬಂದಾಗ ಹೇಗೆ ಮೆರೆಯುತ್ತಾನೆ ಮತ್ತು ಬೀಳು ಬಂದಾಗ ಹೇಗೆ ಅಜ್ಞಾತವಾಸ ಅನುಭವಿಸುತ್ತಾನೆ ಎಂಬುದಕ್ಕೆ ಕರ್ನಾಟಕದ ಕುಳ್ಳ ಎಂದೇ ಹೆಸರಾಗಿರುವ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಅವರ ಬದುಕಿಗಿಂತ ಬೇರೊಂದು ನಿದರ್ಶನ ಬೇಕಾಗಿಯೇ ಇಲ್ಲ.

ಒಬ್ಬ ವ್ಯಕ್ತಿ ಸರ್ಕಾರಿ ನೌಕರಿಯಲ್ಲಿದ್ದರೆ ಅಥವಾ ಅತಿ ಆಸ್ತಿವಂತನಾದರೆ ಅಂತಹವರ ಬದುಕು ಏಳು ಬೀಳು ಇದ್ದರೂ ಕಾಣುವುದಿಲ್ಲ.. ಆದರೆ ಒಬ್ಬ ಸಾಹಸಿಯ ಬದುಕು ಆಕಾಶಕ್ಕೂ ಏರುತ್ತದೆ.. ಪಾತಾಳವನ್ನೂ ಕಾಣುತ್ತದೆ. ಈ ಎರಡನ್ನು ಕಂಡು ಬದುಕಿದ ದ್ವಾರಕೀಶ್ ಅವರಿಗೆ ಈಗ 78 ವರ್ಷವಾಗಿದೆ. ಅವರಿಗೆ ಮುಪ್ಪುಬಂದಿಲ್ಲ.. ಆದರೆ ವೈಯಕ್ತಿಕ ಕಾರಣಗಳಿಂದ ಕೊಂಚ ಮೆತ್ತಗಾಗಿದ್ದಾರೆ ಅಷ್ಟೇ.

ಕನ್ನಡದ ಅದ್ವಿತೀಯ ನಿರ್ದೇಶಕ ದಿವಂಗತ ಹುಣಸೂರು ಕೃಷ್ಣಮೂರ್ತಿ ಅವರ ತಂಗಿಯ ಮಗನಾಗಿ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದ ದ್ವಾರಕೀಶ್ 1969ರಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ‘ಮೇಯರ್ ಮುತ್ತಣ್ಣ’ ಮೂಲಕ ಸ್ವತಂತ್ರ ನಿರ್ಮಾಪಕರಾದ ದ್ವಾರಕೀಶ್, ಆನಂತರ ಕನ್ನಡ ಚಿತ್ರರಂಗದಲ್ಲಿ ಮಾಡಿದ ಕೆಲಸಗಳೆಲ್ಲವೂ ಇತಿಹಾಸ.

ಸುಮಾರು 70ರ ದಶಕದಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಹೊಸ ರೀತಿಯ ಬಣ್ಣ ಆಕಾರಗಳನ್ನು ನೀಡಿದರು. ವಿದೇಶದಲ್ಲಿ ಮೊದಲು ಚಿತ್ರೀಕರಣ ನಡೆಸಿದ ಚಿತ್ರವೂ ಅವರದೇ. ಈ ಕಾಲಘಟ್ಟದಲ್ಲಿಯೂ ಚಿತ್ರ ಮಾಡುವುದರಲ್ಲಿ ಅಷ್ಟೇ ಶಕ್ತಿ ಉಳಿಸಿಕೊಂಡು ಚಿತ್ರ ಮಾಡುತ್ತಿದ್ದಾರೆ.. ಆದರೆ ಈಚಿನ ಮೂರು ಚಿತ್ರಗಳು ಗೆಲ್ಲದೆ ಕೊಟ್ಟ ಶಾಕ್ ನಿಂದಾಗಿ ಇರುವ ಮನೆಯನ್ನೂ ಕಳೆದುಕೊಂಡು ಮತ್ತೆ ಅಜ್ಞಾತಾ ಅನುಭವಿಸುವ ಹಾದಿಯಲ್ಲಿದ್ದಾರೆ.

ಅದು 80ರ ದಶಕ. ಮೇಲಿಂದ ಮೇಲೆ ಚಿತ್ರಗಳನ್ನು ಮಾಡುತ್ತಿದ್ದ ದ್ವಾರಕೀಶ್, ಇಡೀ ಭಾರತೀಯ ಚಿತ್ರರಂಗಕ್ಕೆ ಬೇಕಾದವರಾಗಿದ್ದರು. ಅವರ ಮದ್ರಾಸ್ ನ ಟಿ ನಗರದಲ್ಲಿದ್ದ ಮನೆ ಅತ್ಯಂತ ವಿಶಾಲವಾದ ದೊಡ್ಡ ಬಂಗಲೆ. ಮನೆಯ ಮುಂದೆ ಕಾರುಗಳು ನಿಲ್ಲುವುದಕ್ಕೆ ಎಕರೆಗಟ್ಟಲೆ ಜಾಗ, ರಜನಿಕಾಂತ್, ಶ್ರೀದೇವಿ, ವಿಷ್ಣುವರ್ಧನ್, ಜಯಚಿತ್ರ, ಜಯಸುಧಾ, ಡಿಸ್ಕೋ ಶಾಂತಿ, ವಿಜಯಾನಂದ್ ಅಷ್ಟೇ ಏಕೆ ಅಮಿತಾಬ್ ಬಚ್ಚನ್ ಕೂಡ ಬರುತ್ತಿದ್ದರು. ಅದು ಸದಾ ಕಾಲವೂ ಚಟುವಟಿಕೆಯ ಬೀಡಾಗಿತ್ತು. ಒಂದೊಮ್ಮೆ 1985ರ ಬಳಿಕ ನೀ ತಂದ ಕಾಣಿಕೆ, ಆಫ್ರಿಕಾದಲ್ಲಿ ಶೀಲ ಇನ್ನಿತರ ಚಿತ್ರಗಳು ನೆಲಕಚ್ಚಿ ಇಂಡಿಯಾದಲ್ಲಿ ಸಾಲ ಮಾಡಿಕೊಂಡರು ದ್ವಾರಕೀಶ್. ಆನಂತರ ಅವರು 18 ವರ್ಷಗಳ ಕಾಲ ಅಜ್ಞಾತವಾಸದಲ್ಲಿಯೇ ಇದ್ದರು.

ಇದಕ್ಕೂ ಮುಂಚೆ ಸದಾಶಿವನಗರದ ದೊಡ್ಡ ಮನೆ, ಎನ್.ಆರ್.ಕಾಲೋನಿಯ ಬಂಗಲೆ ಎಲ್ಲವೂ ಕಳೆದು ಹೋಗಿದ್ದವು. ದ್ವಾರಕೀಶ್ ಮತ್ತು ವಿಷ್ಣು ಬೇರೆಯಾಗಿ ಮತ್ತೆ ಒಂದಾದ ಬಳಿಕ ರಾಯರು ಬಂದರು ಮಾವನ ಮನೆಗೆ ಹಾಗೂ ಇತರ ಒಂದೆರಡು ಚಿತ್ರಗಳು ಕೈ ಹಿಡಿದವು. ಅದರಿಂದ ಸುಮಾರಾಗಿ ಸುಧಾರಿಸಿಕೊಂಡರು. ಬಳಿಕ ಮಾಡಿದ ಆಪ್ತಮಿತ್ರ ಸೂಪರ್ ಡೂಪರ್ ಹಿಟ್. ಎಚ್.ಎಸ್.ಆರ್.ಲೇಔಟ್ ನಲ್ಲಿ ದೊಡ್ಡ ಸೈಟ್ ನಲ್ಲಿ ಮನೆ ಕಟ್ಟಿಕೊಂಡರು. ಸುಮಾರು 20 ವರ್ಷ ಆ ಮನೆಯಲ್ಲಿ ಕಳೆದರು. ಈಗ ಆ ಮನೆ ಪ್ರಖ್ಯಾತ ನಟರೊಬ್ಬರ ಪಾಲಾಗಿದೆ. ದ್ವಾರಕೀಶ್ ಮತ್ತೆ ಅಜ್ಞಾತ ದತ್ತ.

ಅವರೇ ಪದೇ ಪದೇ ಹೇಳುವುದೇನೆಂದರೆ ‘ಮದವೇರಿದ ಮನದ ಅವಸಾನಕ್ಕಾಗಿ ಕಾಲವೆಂಬುದು ಕಾದು ಕುಳಿತಿರುತ್ತದೆ..:. ಕೋವಿಡ್ ಸಂದರ್ಭದಲ್ಲಿ ಈ ಮಾತು ಎಲ್ಲರಿಗೂ ಅನ್ವಯಿಸುತ್ತದೆ.

ಸಿನಿಮಾ-ಗಾಸಿಪ್
Social Share :

1 thought on “ದ್ವಾರಕೀಶ್ @78 ಏಳು ಬೀಳು ಬದುಕಿನ ದೊಡ್ಡ ನಿದರ್ಶನ”

Leave a Comment

Your email address will not be published. Required fields are marked *