ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಲುವಾಗಿ ಬುಧವಾರ ಅನೇಕ ಚಿತ್ರಗಳು ಘೋಷಣೆ ಮಾಡಿಕೊಂಡವು. ಅವುಗಳಲ್ಲಿ ಬಹುಕೋಟಿ ವೆಚ್ಚದ ‘ಧೀರ’ ಸಿನಿಮಾ ಗಮನ ಸೆಳೆದಿದೆ.
ಉಪೇಂದ್ರ ಸಿನಿಮಾಗಳನ್ನು ನಿರ್ಮಿಸಿದ್ದ ಹೆಸರಾಂತ ನಿರ್ಮಾಪಕ ಹಾಗೂ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಹೆಚ್.ಸಿ.ಶ್ರೀನಿವಾಸ್ (ಶಿಲ್ಪ ಶ್ರೀನಿವಾಸ್) ಅರ್ಪಿಸುತ್ತಿರುವ ಈ ಚಿತ್ರವನ್ನು ಚಿಲ್ಲಿ ಫಿಲಂಸ್ ಎಂಟರ್ ಟೈನ್ ಮೆಂಟ್ ಹೆಸರಿನಲ್ಲಿ ಸಾಗರ್ ನಿರ್ಮಾಣ ಮಾಡುತ್ತಿದ್ದಾರೆ.
ಓಟಿಟಿ ಚಿತ್ರದ ಮೂಲಕ ಗಮನ ಸೆಳೆದಿದ್ದ ನವೀನ್ ಶೆಟ್ಟಿ ಈ ಚಿತ್ರದ ನಿರ್ದೇಶಕರಾಗಿದ್ದು, 50ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿರುವ ಎಂ.ಎನ್.ಕೃಪಾಕರ್ ಮೊದಲ ಬಾರಿಗೆ ಶಿವಣ್ಣ ಅವರ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಮಲೆನಾಡು ಮೂಲದ ನವೀನ್ ಶೆಟ್ಟಿ; ಎಸ್.ನಾರಾಯಣ್, ಓಂಪ್ರಕಾಶ್ ರಾವ್, ಗಡ್ಡವಿಜಿ ಅವರ ಜೊತೆ ಸಹಾಯಕನಾಗಿ ಕೆಲಸ ಮಾಡಿದ ಅನುಭವ ಪಡೆದುಕೊಂಡಿದ್ದಾರೆ.
ಆ ಬಳಿಕ ಓಟಿಟಿ ಗೆಂದು ನಿರ್ಮಿಸಿದ್ದ ‘ನಿಧಾನವಾಗಿ ಚಲಿಸಿ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದು, ಆ ಚಿತ್ರ ಶಿವಣ್ಣ ಅವರ ಗಮನ ಸೆಳೆದ ಹಿನ್ನೆಲೆಯಲ್ಲಿ ‘ಧೀರ’ ಕಥೆ ಕೇಳಿ ಮೆಚ್ಚಿ ಕಾಲ್ ಶೀಟ್ ಕೊಟ್ಟಿದ್ದಾರೆ ಎಂಬುದು ಮಾಹಿತಿ.
ಶಿವಣ್ಣ ಅವರಿಗೆ ಇದು ವಿಭಿನ್ನ ನೆಲೆಯ ಚಿತ್ರವಾಗುತ್ತದೆ ಎಂಬುದು ನಿರ್ದೇಶಕ ನವೀನ್ ಶೆಟ್ಟಿ ನಂಬಿಕೆ. ಮಾಸ್, ಅಂಡರ್ ವರ್ಲ್ಡ್, ಮ್ಯೂಸಿಕಲ್ ಆಕ್ಷನ್ ಡ್ರಾಮಾ ಚಿತ್ರವಿದು ಎಂಬುದು ಅವರು ನೀಡಿರುವ ಮಾಹಿತಿ.
ಕಲಿಯುಗ ಕರ್ಣ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರಕ್ಕೆ ಎಂ.ಎನ್. ಕೃಪಾಕರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ‘ಧೀರ’ ಚಿತ್ರದ ನಿರ್ಮಾಣ ಪೂರ್ವದ ಕೆಲಸಗಳು ನಡೆಯುತ್ತಿವೆ ಎಂಬ ಮಾಹಿತಿ ಕೊಟ್ಟಿದೆ ಚಿತ್ರತಂಡ.