Snehapriya.com

June 8, 2025

ವೇದ ಚಿತ್ರವಿಮರ್ಶೆ

Social Share :

ಯುದ್ಧದ ಹಂಬಲ ನೋವು ತುಡಿತ..

ಹೆಣ್ಣು ಎಂದರೆ ಎಂಥಾವರು ಬಾಯಿ ಬಿಡುತ್ತಾರೆ.. ಹೆಣ್ಣು ಸಂಸ್ಕೃತಿ, ಹೆಣ್ಣು ದೇವತೆ, ಹೆಣ್ಣು ಪ್ರಕೃತಿ ಹೀಗೆ ಏನೇ ವೈಭವೀಕರಣ ದಕ್ಕಿದರೂ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಕ್ಕೆ ಕೊನೆ ಇಲ್ಲ..

ಹೆಣ್ಣಿಲ್ಲ ಅಂದ್ರೆ ಸೃಷ್ಟಿನೇ ಇಲ್ಲ.. ಎಂಬ ಮನೋಭಾವದ ವೇದ ಎಂಬ ಪೌರುಷವಿರುವ ಪುರುಷನ ಬಾಳಿನಲ್ಲಿ ನಡೆಯುವುದು ಬೆಂಕಿ ಬೀಭತ್ಸ ಘಟನೆ..

ಕಾಲಕ್ಕಾಗಿ ಕಾಯ್ದು ನಡೆಯುವ ಘಟನೆಗಳ ಸುತ್ತ ಬರೀ ಯುದ್ಧ ಕಾಲದ ಹಂಬಲ.. ಅದು ರಕ್ತ ಸಿಕ್ತ ಅಧ್ಯಾಯ..

ಅದು ಒಂದು ಕುಗ್ರಾಮ ಅಥವಾ ಹಾಡಿ.. ಅಲ್ಲಿನ ಅದ್ಭುತ ವ್ಯಕ್ತಿ ವೇದ.. ಜೊತೆಗೆ ಅವ್ವ ಊರಿನ ಹೈಕಳು ತಮಾಷೆ.. ಕಟ್ಟಾಳು ವೇದ ಮದುವೆಯ ಕನಸು ಕಾಣುವುದಿಲ್ಲ; ಆದರೆ ಆಕಸ್ಮಿಕವಾಗಿ ಮದುವೆ ನಡೆದು ಹೋಗುತ್ತದೆ..

ಅವಳು ಪುಷ್ಪ.. ನಿಜಕ್ಕೂ ಮಲ್ಲಿಗೆ..‌ ಆದರೆ ಅವನಿಗೆ ಒರಟು.. ಅಮ್ಮನಿಗೂ ಸ್ನೇಹಿತರಿಗೂ ಬಿಡಿಸಲಾರದ ಕಗ್ಗಂಟು..

ಮುಂದೆ ಬದುಕು ಸೊಗಸು ಹೆಣ್ಣು ಮಗು ಮಡಿಲು ತುಂಬುವ ಗಳಿಗೆ ಕುಟುಂಬಕ್ಕೆ ಹರ್ಷದ ಹೊನಲು..
ಆದರೆ ವಿಧಿಯಾಟ ಬೇರೆಯೇ.. ಹಾಗಾಗಿ ಇದು ಸ್ನೇಡಿನ ಕಥೆಯಾಗಿ ಪರಿವರ್ತನೆ ಹೊಂದುತ್ತದೆ..

ಮುಂದೆ ನಡೆಯುವುದು ಅಥವಾ ನಡೆದು ಹೋದದ್ದು ಮಾರಿ ಹಬ್ಬ..!

ಅಪ್ಪನ ಕುಡುಗೋಲು ಮತ್ತು ಮಗಳ ಕೈಯಲ್ಲಿ ಕಲ್ಲು ರಕ್ತದ ಕಾರಂಜಿಯನ್ನು ಹೊಮ್ಮಿಸುತ್ತವೆ.. ಅದು ಹೊಡೆದಾಟವೇ ಆದ್ರರೂ ಕಲಾತ್ಮಕತೆ ವಿಜೃಂಭಿಸುತ್ತದೆ..

ಪ್ರೇಕ್ಷಕನೂ ಕೊತ ಕೊತ ಕುದಿಯುವ ವೇಳೆಗೆ ರಕ್ತದ ಚೆಂಡಾಟವೇ ನಡೆದು ಹೋಗಿರುತ್ತದೆ.. ಅದು ಹಿಂಸೆಯೇ ಆದರೂ ಇಲ್ಲಿನ ಕ್ಯಾಮೆರಾ ಕಣ್ಣಿನಲ್ಲಿ ಕ್ಲಾಸಿಕ್.. ಹಾಗಾಗಿ ಪ್ರತಿ ದೃಶ್ಯವೂ ಅಪ್ರತಿಮ ವೇದದ ಸಾರ..

ನಿರ್ದೇಶಕ ಹರ್ಷ ತಮ್ಮ ಹಿಂದಿನ ಪಟ್ಟುಗಳಿಂದ ಮಾಗಿ ಈ ಮಾರ್ಗ ಕಂಡು ಕೊಂಡಿರಬಹುದು ಎನಿಸುವಷ್ಟು ದೃಶ್ಯಗಳು ಅಚ್ಚುಕಟ್ಟು..

ಇನ್ನು ಶಿವಣ್ಣ ಅವರ ಆರ್ಭಟಕ್ಕೆ ಇಲ್ಲಿ ಮೇರೆಯೇ ಇಲ್ಲ; ನಟನೆ ಫೈಟ್ ಎಲ್ಲದರಲ್ಲೂ ಅವರದು ಮಾಗಿದ ವರಸೆ. ಜೊತೆಗೆ ಅದಿತಿ ಸಾಗರ್, ಉಮಾಶ್ರೀ, ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪಾ.. ಹೀಗೆ ಜೊತೆಗೆ ಅಬ್ಬರಿಸಿ ಆರ್ಭಟಿಸಿದ್ದಾರೆ.

ಜೊತೆಗೆ ಚೆಲುವರಾಜು, ರಾಘು ಶಿವಮೊಗ್ಗ, ವಿನಯ್ ಬಿದ್ದಪ್ಪ, ಪ್ರಸನ್ನ, ಕುರಿ ಪ್ರತಾಪ್, ಲಾಸ್ಯ ನಾಗರಾಜ್, ಭರತ್ ಸಾಗರ್, ಸಂಜೀವ್, ಚಾರ್ವಿ ಗೌಡ, ಜಗಪ್ಪ, ಚೇತನ ಹರಿ ಮೊದಲಾದವರಿದ್ದಾರೆ.

‘ಯಾವನೋ ಇವ್ನುಗಿಲ್ಲಕ್ಕೋ..’ ಮತ್ತು ಕೂಟಗಾಳಿ ಬೀಸದಂತೆ..’ ಎಂಬುದು ಕಲಾತ್ಮಕತೆಯ ನೇಯ್ಗೆಯಲ್ಲಿ ಸುಂದರ ಹೊಸಿಗೆ ಬೆರೆತ ಹಾಡುಗಳು..

ಹೆಣ್ಣಿಲ್ಲ ಅಂದ್ರೆ ಸೃಷ್ಟಿ ನೇ ಇಲ್ಲ; ನೀನು ಇವತ್ತು ಮೆರಿತಿರೋದು ಹೆಣ್ಣಿಂದ; ಇದು ಯುದ್ಧ ಕಾಲದ ಹಂಬಲ ಎಂದೆಲ್ಲಾ ಬರುವ ಸಂಭಾಷಣೆ ಪ್ರೇಕ್ಷಕನಿಗೆ ಅಚ್ಚು ಮೆಚ್ಚು.. ಅದು ರಘು ನಿಡುವಳ್ಳಿ ಚಮತ್ಕಾರ.

ಪ್ರತಿ ಸಾಹಸವೂ ಕಲಾತ್ಮಕ ಎಂದರೆ ಅದು ರವಿವರ್ಮ, ವಿಕ್ರಮ್ ಮೋರ್, ಚೇತನ್ ಡಿಸೋಜ ‌‌, ಅರ್ಜುನ್ ರಾಜ್ ಹೀಗೆ ಸಾಲು ಸಾಹಸ ನಿರ್ದೇಶಕರ ಶ್ರಮದ ಫಲ.

ಜೊತೆಗೆ ರವಿ ಸಂತೆಹಕ್ಲು ಕಲಾ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಮತ್ತು ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಅಚ್ಚುಕಟ್ಟು..

ಎಲ್ಲೋ ಕೆಲವೆಡೆ ಇದು ಹಿಂದಿನ ರಾಯಲ್ ಸೀಮಾ ಕಥೆ ಎಂದು ಅನಿಸುವುದನ್ನು ಬಿಟ್ಟರೆ ಒಂದು ಕ್ಲಾಸಿಕ್ ಮೂವಿ ನೋಡಿದ ಅನುಭವ..

ಬಹು ಮುಖ್ಯವಾಗಿ ಹೆಣ್ಣು ಮಕ್ಕಳು ನೋಡಲೇ ಬೇಕಾದ ಚಿತ್ರವಿದು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *