* ಅಕ್ಟೋಬರ್ 4 ರಂದು ತೆರೆಗೆ *
* ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ಕುಡಿ *
* ರಾಜ್ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ *
ವರನಟ ಡಾ.ರಾಜ್ ಕುಮಾರ್ ವಂಶದ ಮತ್ತೊಂದು ಕುಡಿ ಚಿತ್ರರಂಗ ಪ್ರವೇಶ ಮಾಡಿದೆ..
ರಾಜ್ ಅವರ ಸಹೋದರ ವರದಪ್ಪನವರ ಮೊಮ್ಮಗ ಪೃಥ್ವಿರಾಜ್ ಅಭಿನಯಿಸಿರುವ ‘ಮಿಂಚು ಹುಳು’ ಎಂಬ ಚಿತ್ರ ಈ ವಾರ ತೆರೆ ಕಾಣುತ್ತಿದೆ.
ಈ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶಕ. ಭೂನಿ ಪಿಕ್ಚರ್ಸ್ ಅಡಿ ರಾಜಗೋಪಾಲ್ ದೊಡ್ಡಹುಲ್ಲೂರು ನಿರ್ಮಾಣವಿದೆ. ಇವರಿಗೆ ವಿಜಯ್ ಕುಮಾರ್ ಮತ್ತು ಅಬ್ದುಲ್ ರಫೀಕ್ ಉಲ್ಲಾ ಬೆಂಬಲ ನೀಡಿದ್ದಾರೆ.
ಡಾ.ರಾಜ್ ಕುಮಾರ್ ಅವರ ಆತ್ಮೀಯರಾದ ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರು ತಮ್ಮ ಊರಿನವರೇ ಆದ ನಿರ್ಮಾಪಕರಿಗೆ ಸಹಕಾರ ಮತ್ತು ಸಲಹೆ ನೀಡಿರುವುದು ವಿಶೇಷವಾಗಿದೆ.
ಈಚೆಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ಚಿತ್ರದ ವಿಶೇಷ ಪ್ರದರ್ಶನ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ, ಹಿರಿಯನಟಿ ಜಯಮಾಲಾ, ನಿರ್ದೇಶಕ ಪಿ.ಶೇಷಾದ್ರಿ, ಲಹರಿ ವೇಲು, ಶಾಸಕ ಶರತ್ ಬಚ್ಚೇಗೌಡ, ಚಿಂತಕ ಪ್ರೊ. ರಾಜಪ್ಪ ದಳವಾಯಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.
ಅಲ್ಲದೆ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ್ರು, ದೊಡ್ಡಹುಲ್ಲೂರು ರುಕ್ಕೋಜಿರಾವ್, ರಾಜ್ ಪುತ್ರಿಯರಾದ ಲಕ್ಷ್ಮಿ ಗೋವಿಂದರಾಜ್ ಹಾಗೂ ಪೂರ್ಣಿಮಾ ರಾಮ್ ಕುಮಾರ್ ಸೇರಿದಂತೆ ಅವರ ಕುಟುಂಬದ ಬಹುತೇಕ ಸದಸ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
‘ಮಿಂಚು ಹುಳು’ ನಗರ ಪ್ರದೇಶದಲ್ಲಿ ನಡೆಯುವ ಕಥೆಯಾಗಿದ್ದು, ಬೇಜವಾಬ್ದಾರಿ ತಂದೆ ಹಾಗೂ ಮಗನ ನಡುವಿನ ಸಂಘರ್ಷದ ಕಥೆ.
ಬಾಡಿಗೆ ಕಟ್ಟಲು ಸಾಧ್ಯವಾಗದೇ ಅಪ್ಪ ಮಗ ಪಾಳು ಮನೆ ಸೇರಿದಾಗ ಅಲ್ಲಿ ಎದುರಾಗುವ ಮಿಂಚು ಹುಳು ಹುಡುಗನ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ.
ಮುಖ್ಯವಾಗಿ ಈ ಚಿತ್ರ ನಿರ್ಮಾಣವಾಗಲು ಪುನೀತ್ ರಾಜ್ಕುಮಾರ್ ಅವರೇ ಕಾರಣಕರ್ತರು. ಕನ್ನಡದಲ್ಲಿ ಉತ್ತಮ ಕಥಾವಸ್ತು ಇರುವ ಸಿನಿಮಾಗಳ ಅಗತ್ಯವಿದೆ ಎಂದಾದರೆ ಈ ಸಿನಿಮಾ ಬೆಂಬಲಿಸಿ ಎಂದರು ನಿರ್ದೇಶಕ ಮಹೇಶ್ ಕುಮಾರ್.
ವರದಪ್ಪ ಅವರು ಡಾ.ರಾಜ್ ಕುಮಾರ್ ಬೆಳವಣಿಗೆಯ ಪ್ರೇರಕ ಶಕ್ತಿಯಾಗಿದ್ದರು. ಈಗ ವರದಪ್ಪ ಅವರ ಕುಡಿ ಚಿತ್ರರಂಗ ಪ್ರವೇಶಿದೆ. ಅವರನ್ನು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು ನಾದಬ್ರಹ್ಮ ಹಂಸಲೇಖ.
ಉತ್ತಮ ಕಥಾ ಚಿತ್ರವಿದೆ. ನಿಜಕ್ಕೂ ಜನರನ್ನು ಮುಟ್ಟಬೇಕಾಗಿದೆ ಎಂದವರು ಜಯಮಾಲಾ. ಪಿ.ಶೇಷಾದ್ರಿ, ಲಹರಿ ವೇಲು, ಪ್ರೊ.ರಾಜಪ್ಪ ದಳವಾಯಿ,
ಶಾಸಕ ಶರತ್ ಬಚ್ಚೇಗೌಡ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.
ಮುಖ್ಯ ನಟ ಪೃಥ್ವಿರಾಜ್, ಬಾಲನಟ ಪ್ರೀತಂ ಕೊಪ್ಪದ, ನಿರ್ಮಾಪಕ ರಾಜ್ ಗೋಪಾಲ್, ಕಾರ್ಯಕಾರಿ ನಿರ್ಮಾಪಕ ವಿಜಯ್ ಕುಮಾರ್, ಸಹ ನಿರ್ಮಾಪಕ ರಫೀಕ್ ಉಲ್ಲಾ ಇದ್ದರು.