ರಾಜ್ ಹುಟ್ಟುಹಬ್ಬದ ವಿಶೇಷ..
ಸುಮಾರು ಐದು ದಶಕಗಳ ಕಾಲ ಕನ್ನಡ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಂಗೊಳಿಸಿದ ವರನಟ ಡಾ.ರಾಜ್ ಕುಮಾರ್, ಅಭಿಮಾನಿ ದೇವರುಗಳ ನರನಾಡಿಗಳಲ್ಲಿ ನೆಲೆಸಿರುವ ಆದರ್ಶ ಪುರುಷ..
ಒಳ್ಳೆಯತನ ಎಂದರೆ ಹೀಗಿರಬೇಕು ಎಂದು ತಮ್ಮ ಪ್ರತಿ ಚಿತ್ರದ ಮೂಲಕವೂ ಸಂದೇಶ ಸಾರಿದ ಡಾ.ರಾಜ್, ಆದರ್ಶದ ನೆಲೆಯಲ್ಲಿಯೇ ಗಟ್ಟಿಯಾಗಿ ಬದುಕಿದವರು. ಸರಳತೆಯ ಸಾಕಾರ ಮೂರ್ತಿಯಾಗಿ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿದವರು..
ಮುತ್ತುರಾಜ್ ಎಂಬ ಮುತ್ತು ಚಿತ್ರರಂಗದಲ್ಲಿ ಬೃಹದಾಕಾರವಾಗಿ ಬೆಳೆದಿದ್ದು ವಿನಮ್ರ ನಡವಳಿಕೆ; ಅಪ್ರತಿಮ ಪ್ರತಿಭಾ ಕೌಶಲ್ಯಗಳಿಂದ.. ಮತ್ತು ಎಂತಹ ಪಾತ್ರದಲ್ಲಿಯೂ ತನ್ಮಯತೆ ಕಾಯ್ದುಕೊಂಡ ವರಸೆಯಿಂದ..
70 ದಶಕದಿಂದ 90ರ ದಶಕದವರೆಗೂ ರಾಜ್ ಚಿತ್ರಗಳು ಜನರ ಜೀವನಾಡಿ ಎಂಬಂತೆ ಬದುಕಿನ ಎಲ್ಲಾ ಆಗು ಹೋಗುಗಳಲ್ಲಿ ಬೆರೆತು ಹೋದವು. ಜೀವನ ಕಷ್ಟ, ಸುಖ ಏನೇ ಇರಲಿ ಅದಕ್ಕೊಂದು ಪರಿಹಾರ ಎಂಬಂತೆ ಚಿತ್ರಗಳು ಪ್ರಶಾಂತ ನದಿಯಾಗಿ ಜನರ ಹೃದಯದಲ್ಲಿ ವಿಹರಿಸಿದವು.
‘ಬಂಗಾರದ ಮನುಷ್ಯ’ ಚಿತ್ರವು ಅಸಂಖ್ಯಾತ ಜನರಿಗೆ ಸ್ಫೂರ್ತಿಯಾಗಿ ಬದುಕು ಕಟ್ಟಿಕೊಳ್ಳಲು ನೆರವಾಯಿತು. ಸಾಮಾಜಿಕ ನೆಲೆಯಲ್ಲಿ ಬರುತ್ತಿದ್ದ ಕಾದಂಬರಿ ಆಧಾರಿತ ಚಿತ್ರಗಳು ತುಂಬು ಕುಟುಂಬದ ಅಸ್ತಿತ್ವ ಮೆರೆಯಲು ನೆರವಾದವು. ಮುಖ್ಯವಾಗಿ ರಾಜಣ್ಣ ಆದರ್ಶದ ಗಣಿ. ಹಾಗಾಗಿ ಅಭಿಮಾನಿ ದೇವರುಗಳ ಉಸಿರಲ್ಲಿ ಉಸಿರಾಗಿ ಬೆರೆತು ಹೋದರು..
ನಾಡಿನ ನೆಲ ಜಲದ ವಿಷಯ ಬಂದಾಗ ಹೋರಾಟದ ಹಾದಿ ಹಿಡಿಯುವ ಮುನ್ನ ಎಲ್ಲರ ಗಮನ ರಾಜ್ ಅವರತ್ತ ನೆಲೆಸುತ್ತಿತ್ತು. ಅಣ್ಣ ಹೋರಾಟಕ್ಕೆ ಧುಮುಕಿದರೆಂದರೆ ಸರ್ಕಾರ ನಡುಗಿ ಹೋಗುತ್ತಿತ್ತು.. ಅದೂ ನಾಡು ನುಡಿ ಭಾಷೆಯ ಸಂರಕ್ಷಣೆ ವಿಷಯದಲ್ಲಿ ರಾಜ್ ಮುಂದೆ ಮುಂದೆ.. ಆದರೆ ಅವರು ‘ಜನರಿಂದ ನಾನು ಮೇಲೆ ಬಂದೆ..’ ಎಂದು ವಿನಮ್ರವಾಗಿಯೇ ಹೇಳುತ್ತಿದ್ದರು. ಸಂತನಿರಲಿ; ಸಾಧಕನಿರಲಿ; ರಾಜನಿರಲಿ; ಮಂತ್ರಿ ಇರಲಿ; ಸಾಮಾನ್ಯ ಕೂಲಿ ಅಥವಾ ಚಾಲಕನೇ ಆಗಿರಲಿ ರಾಜ್ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದ ರೀತಿ ವಿಸ್ಮಯ. ಕಸ್ತೂರಿ ನಿವಾಸ, ಭಕ್ತ ಕುಂಬಾರ, ಸಮಯದ ಗೊಂಬೆ, ಭಕ್ತ ಪ್ರಹ್ಲಾದ, ಬಬ್ರುವಾಹನ ಹೀಗೆ ಅನೇಕ ಚಿತ್ರಗಳಲ್ಲಿ ಅಣ್ಣಾವ್ರಿಗೆ ಅವರೇ ಸಾಟಿ. ಶಂಕರ್ ಗುರು ಚಿತ್ರದ ಮೂರು ಪಾತ್ರಗಳನ್ನು ಅವರಷ್ಟು ಚೆನ್ನಾಗಿ ಭಾರತೀಯ ಚಿತ್ರರಂಗದಲ್ಲಿಯೇ ಯಾರು ನಿಭಾಯಿಸಲು ಸಾಧ್ಯವಾಗಲಿಲ್ಲ. ಅವರ ನಟನೆಯ ಬಗ್ಗೆ ಮಾತನಾಡುವುದು ಸುಲಭವೂ ಅಲ್ಲ; ಏಕೆಂದರೆ ಆ ದೈತ್ಯ ಪ್ರತಿಭೆಯನ್ನು ವರ್ಣಿಸುವುದು ಅಸಾಧ್ಯವಾದ ಕೆಲಸ.
ಇಡೀ ಭಾರತೀಯ ಚಿತ್ರರಂಗದಲ್ಲಿ ನಾಯಕ ನಟನಾಗಿ ಅದ್ಭುತ ಗಾಯನ ಪ್ರತಿಭೆಯನ್ನೂ ಮೆರೆದವರು ಡಾ.ರಾಜ್ ಕುಮಾರ್. ಇಡೀ ಪ್ರಪಂಚದಲ್ಲಿಯೇ ಇಂತಹ ನಟನನ್ನು ನೋಡುವುದು ಸಾಧ್ಯವಿಲ್ಲ ಎಂದು ವಿದೇಶಿ ರಾಯಭಾರಿಯೊಬ್ಬರು ಉದ್ಗರಿಸಿದ್ದು ಅತಿಶಯೋಕ್ತಿ ಅಲ್ಲವೇ ಅಲ್ಲ; ಏಕೆಂದರೆ ಇಂದಿಗೂ ಡಾ.ರಾಜ್ ಕುಮಾರ್ ಹಾಡಿಗೆ ಸಾಟಿಯೇ ಇಲ್ಲ.
ಜನರ ಮನಸ್ಸಿನಲ್ಲಿ ದೇವರಾಗಿ ಬೆರೆತ ಅಣ್ಣ, ಅಭಿಮಾನಿಗಳನ್ನೇ ದೇವರೆಂದು ಕರೆದ ‘ದೇವತಾ ಮನುಷ್ಯ’ ನಮ್ಮ ನಡುವೆ ಸದಾ ಅಜರಾಮರಾ ಎಂಬುದೇ ಕನ್ನಡ ನಾಡಿನ ಸೌಭಾಗ್ಯ. ಅಣ್ಣಾವ್ರು ಮತ್ತೊಮ್ಮೆ ಹುಟ್ಟಿ ಬರಲಿ..
🖋ಸ್ನೇಹಪ್ರಿಯ ನಾಗರಾಜ್