Snehapriya.com

June 10, 2025

ಡಾ.ರಾಜ್ ಕುಮಾರ್, ದ್ವಾರಕೀಶ್, ರವಿಚಂದ್ರನ್ ಜೊತೆಗೆ ಕೆಜಿಎಫ್

Social Share :

ಕನ್ನಡ ಚಿತ್ರವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತು; ದೇಶದ ಎಲ್ಲಾ ಚಿತ್ರಗಳ ದಾಖಲೆಗಳನ್ನು ಮೀರಿ ಹಣ ಗಳಿಕೆ ಮಾಡಿತು.. ಇದು ಏಕಾಏಕಿ ಆದ ಸಾಧನೆಯಲ್ಲ; ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸಿ ಮಾರುಕಟ್ಟೆ ವಿಸ್ತರಣೆಗೆ ಹಿಂದೆಯೇ ಪ್ರಯತ್ನ ನಡೆಸಲಾಗಿತ್ತು ಎಂಬುದು ಈಗ ಚರ್ಚೆಯ ವಿಷಯ ವಾಗಿದೆ..

ಹೌದು ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಣೆಗೆ ಪ್ರಯತ್ನ ನಡೆಸಲಾಗಿತ್ತು. ಪ್ರಯತ್ನ ಮಾಡಿದವರು ಅಲ್ಲಿ ಗೆಲುವು ಕಾಣಲಾಗದೆ ಕೈ ಸುಟ್ಟುಕೊಂಡ ಉದಾಹರಣೆಯಿಂದ ಮತ್ತೆ ಯಾರೂ ಅಂತಹ ಸಾಹಸಕ್ಕೆ ಕೈ ಹಾಕಿರಲಿಲ್ಲ..

ಆದರೆ ಕೆಜಿಎಫ್ ಮಾಡಿದ ಸಾಹಸ ಮತ್ತು ಪ್ರಯತ್ನ ಎರಡೂ ಅತ್ಯಂತ ಬುದ್ಧಿವಂತಿಕೆಯಿಂದ ಕೂಡಿತ್ತು. ಜೊತೆಗೆ ಅದೃಷ್ಟವೂ ಸೇರಿಕೊಂಡಿರಬಹುದು ಮತ್ತು ಬಿಡುಗಡೆಯ ಕಾಲಘಟ್ಟವೂ ಸಹಕರಿಸಿರಬಹುದು..

ಹೀಗೆ ಚರ್ಚೆ ಆರಂಭವಾಗಿದೆ. ಇದರ ಜೊತೆಗೆ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರು ಒಂದು ಹೇಳಿಕೆ ನೀಡಿದ ಬಳಿಕ ಹೌದೆ ನಿಜವೇ ಎಂಬ ಚರ್ಚೆಯೂ ಆರಂಭವಾಗಿದೆ.

ಮಹತ್ವದ ವಿಷಯ ಏನೆಂದರೆ ವರನಟ ಡಾ.ರಾಜ್ ಕುಮಾರ್ ಅವರ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಒಂದು ಘನತೆಯನ್ನು ತಂದುಕೊಟ್ಟಿದ್ದವು. ಮಾರುಕಟ್ಟೆ ವಿಸ್ತರಣೆಗೆ ತಲೆ ಕೆಡಿಸಿಕೊಳ್ಳದಿದ್ದರೂ ದೇಶ ವ್ಯಾಪಿ ಅಣ್ಣಾವ್ರ ಚಿತ್ರಗಳ ಚರ್ಚೆ ನಡೆಯುತ್ತಿತ್ತು ಮತ್ತು ಅವರ ಸಾಕಷ್ಟು ಚಿತ್ರಗಳು ಪರಭಾಷೆಗೆ ರೀಮೇಕ್ ಆಗುತ್ತಿದ್ದವು.

ಕಸ್ತೂರಿ ನಿವಾಸ, ಬಬ್ರುವಾಹನ, ಶಂಕರ್ ಗುರು, ಭಕ್ತಕುಂಬಾರ, ಭಕ್ತ ಪ್ರಹ್ಲಾದ ಹಾಗೂ ಇನ್ನು ಅನೇಕ ಭಕ್ತಿ ಹಾಗೂ ಪೌರಾಣಿಕ ಚಿತ್ರಗಳನ್ನು ಡಾ.ರಾಜ್ ಅಭಿನಯ ಮತ್ತು ವರ್ಚಸ್ಸು ಎರಡನ್ನೂ ಮೀರುವುದು ಕಷ್ಟವಾಗಿಯೇ ಹೋಗಿತ್ತು.

‘ಶಂಕರ್ ಗುರು’ ಚಿತ್ರದಲ್ಲಿ ಡಾ.ರಾಜ್ ಕುಮಾರ್ ತ್ರಿ ಪಾತ್ರಗಳನ್ನು ನಿಭಾಯಿಸಿದ್ದರು. ಅದೇ ಚಿತ್ರ ‘ಮಹಾನ್’ ಹೆಸರಿನಲ್ಲಿ ಅಮಿತಾಬ್ ಬಚ್ಚನ್ ಮಾಡಿದ್ದರು. ಆದರೆ ಆಗಲೇ ಬಾಲಿವುಡ್ ಡಾ.ರಾಜ್ ಅನನ್ಯ ನಟ. ಅವರನ್ನು ಕರೆತರಬೇಕು ಎಂದು ಮಾಡಿದ ದೊಡ್ಡ ದೊಡ್ಡ ಪ್ರಯತ್ನಗಳು ಸಾಕಾರಗೊಳ್ಳಲಿಲ್ಲ. ಏಕೆಂದರೆ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸುವುದಿಲ್ಲ ಎಂಬುದನ್ನು ರಾಜ್ ತಮ್ಮ ಕೊನೆಯ ಉಸಿರಿರುವವರೆಗೆ ಕಾಯ್ದುಕೊಂಡರು. ಬೆಂಗಳೂರಿನಲ್ಲಿ ‘ಕೂಲಿ’ ಚಿತ್ರದ‌ ಶೂಟಿಂಗ್ ನಡೆಯುವಾಗ ಒಂದು ಚಿಕ್ಕ ಪಾತ್ರವನ್ನು ಮಾಡುವಂತೆ ಇನ್ನಿಲ್ಲದಂತೆ ದುಂಬಾಲು ಬಿದ್ದರೂ ರಾಜ್ ತಮ್ಮ ಸಂಕಲ್ಪ ಮೀರಿ ನಡೆಯಲಿಲ್ಲ. ಅದೇ ಅವರನ್ನು ಮತ್ತಷ್ಟು ಇನ್ನಷ್ಟು ಎಂದು ಎತ್ತರಕ್ಕೆ ಕರೆದೊಯ್ಯಿತು.

ಕನ್ನಡ ಚಿತ್ರರಂಗವನ್ನು ತಮ್ಮ ಅನುಪಮ, ಅಮೋಘ ನಟನಾ ಸಾಮರ್ಥ್ಯದಿಂದ ದಿಗಂತಕ್ಕೆ ಕೊಡೊಯ್ದ ಕೀರ್ತಿ ಡಾ.ರಾಜ್ ಕುಮಾರ್ ಅವರದೇ..

ಮೊನ್ನೆ ಮೊನ್ನೆ ಮೆಗಾಸ್ಟಾರ್ ಚಿರಂಜೀವಿ ಅವರು ಕನ್ನಡ ಕಂಠೀರವ ಡಾ.ರಾಜ್ ಕುಮಾರ್ ಎಂದು ಹೊಗಳಿದರು. ಅದು ಸುಮ್ಮನೆ ಹೊಗಳಿಕೆಯಲ್ಲ; ಅಣ್ಣಾವ್ರ ಚಿತ್ರಗಳ ಅಭಿಮಾನಿ ಅವರು. ಚಿರಂಜೀವಿ ಅವರ ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟ ಚಿತ್ರ ‘ಘರಾನಾ ಮೊಗಡು’. ಅದು ‘ಅನುರಾಗ ಅರಳಿತು’ ಚಿತ್ರದ ರೀಮೇಕ್ ಆಗಿತ್ತು.

ಇತ್ತ ಅದೇ ಚಿತ್ರ ತಮಿಳಿನಲ್ಲಿ ‘ಮನನ್’ ಎಂಬ ಹೆಸರಿನಲ್ಲಿ ರಜನಿಕಾಂತ್ ಅವರಿಗೊಂದು ಹೊಸ ಬದುಕನ್ನು ನೀಡಿತ್ತು. ಡಾ.ರಾಜ್ ಸಾಧನೆಯ ಕುರಿತು ಇಂತಹ ಬೇಕಾದಷ್ಟು ಉದಾಹರಣೆಗಳಿವೆ.

ಇನ್ನು ಎರಡನೇ ಪ್ರಯತ್ನದ ಹೆಸರು ಖಂಡಿತಾ ದ್ವಾರಕೀಶ್ ಅವರದು. ಕನ್ನಡ ಚಿತ್ರವನ್ನು ಮೊದಲು ವಿದೇಶ ನೆಲದಲ್ಲಿ (ಸಿಂಗಪುರದಲ್ಲಿ ರಾಜಾಕುಳ್ಳ) ಚಿತ್ರೀಕರಣ ಮಾಡಿದ ಕೀರ್ತಿ ಅವರದೇ..

1986ರಲ್ಲಿಯೇ ‘ಆಫ್ರಿಕಾದಲ್ಲಿ ಶೀಲ’ ಎಂಬ ಚಿತ್ರವನ್ನು ನಾಲ್ಕು ಭಾಷೆಗಳಲ್ಲಿ ಚಿತ್ರೀಕರಣ ಮಾಡಿದ್ದರು. ಕಲಾವಿದರು; ತಂತ್ರಜ್ಞರು, ಸಹಾಯಕರು ಸೇರಿದಂತೆ ಸುಮಾರು 90 ಜನರನ್ನು ಆಫ್ರಿಕಾಗೆ ಕರೆದೊಯ್ದು ಚಿತ್ರೀಕರಣ ಮಾಡಿದ ಕೀರ್ತಿ ಅವರದೇ..

ಅದಕ್ಕಿಂತ ಮುಖ್ಯವಾಗಿ ಆ ಕಾಲದಲ್ಲಿ ಮುಂಚೂಣಿಯಲ್ಲಿದ್ದ ಬಾಲಿವುಡ್ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಅವರಿಂದ ಲಂಡನ್ ನಲ್ಲಿ ರೀರೆಕಾರ್ಡಿಂಗ್ ಮಾಡಿಸಿದ್ದರು. ಆದರೆ ಅದೃಷ್ಟ ಕೈ ಕೊಟ್ಟಿತ್ತು ‘ಆಫ್ರಿಕಾದಲ್ಲಿ ಶೀಲ ಇಂಡಿಯಾದಲ್ಲಿ ಸಾಲ’ ಎಂಬಂತೆ ಅವರ ಬದುಕಿಗೆ ಅದು ಹಿನ್ನೆಡೆಯಾಗಿಯೇ ಹೋಯಿತು.

1991ರ ಹೊತ್ತಿಗೆ ಒಂದು ದೊಡ್ಡ ಪ್ರಾಜೆಕ್ಟ್ ಬಹಳವೇ ಸುದ್ದಿಯಾಯಿತು. ತಮಿಳಿಗೆ ರಜನಿಕಾಂತ್, ತೆಲುಗಿಗೆ ನಾಗಾರ್ಜುನ ಹೀಗೆ ದೊಡ್ಡ ದೊಡ್ಡ ಸ್ಟಾರ್ ಗಳನ್ನು ಸಂಗಮಿಸಿ ಕನ್ನಡದಲ್ಲಿ ಮಿಂಚಿದ ನಟ ಡಾ.ವಿ.ರವಿಚಂದ್ರನ್. ಅವರ ‘ಶಾಂತಿಕ್ರಾಂತಿ’ ಅಬ್ಬರ ಜೋರಾಗಿತ್ತು. ಆ ಚಿತ್ರದ ಸೆಟ್ ಗಿಂತಲೂ ಹಂಸಲೇಖ ಅವರ ಸಂಗೀತದ ಅಬ್ಬರ ಹೆಚ್ಚಾಗಿತ್ತು. ಆ ಕಾಲದಲ್ಲಿಯೇ ಸುಮಾರು 10 ಕೋಟಿ ಹಣವನ್ನು ಚೆಲ್ಲಿದ ‘ರಣಧೀರ’ ಆದರು ರವಿಚಂದ್ರನ್.

ಇನ್ನು ಈಗ

ಕನ್ನಡದ ‘ಕೆಜಿಎಫ್2’ ಇಡೀ ವಿಶ್ವದ ಗಮನ ಸೆಳೆದಿದೆ.. ಮಾತ್ರವಲ್ಲ; ಭಾರತೀಯ ಚಿತ್ರರಂಗದ ಎಲ್ಲಾ ಗಳಿಕೆಯ ದಾಖಲೆಗಳನ್ನು ಮೆಟ್ಟಿ ನಿಂತಿದೆ.. ಈಗ ಒಂದು ಸಾವಿರ ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಗೆಲುವನ್ನು ವಿವಿಧ ರೀತಿಯಲ್ಲಿ ವರ್ಣಿಸಲಾಗುತ್ತಿದೆ..

ಆದರೆ ಕೆಜಿಎಫ್ ನಿಜವಾಗಿ ಗೆದ್ದಿರುವುದು 8 ವರ್ಷಗಳ ಅವಿರತ ಪ್ರಯತ್ನದಿಂದ ಮತ್ತು ಕ್ರಿಯಾಶೀಲತೆಯಲ್ಲಿ ಅರಮನೆ ಕಟ್ಟುವ ಅದಮ್ಯ ಇಚ್ಚೆಯ ಫಲಶ್ರುತಿಯಿಂದ ಎಂಬುದು ಸಾಬೀತಾಗಿ ಹೋಗಿದೆ..

‘ರೋಮ್ ನಗರವನ್ನು ಒಂದೇ ದಿನ ಕಟ್ಟಲಿಲ್ಲ..’ ಇದು ಗಾದೆ ಮಾತು. ಹೌದು ಸುಂದರ ನಗರವನ್ನು ಸೃಷ್ಟಿಸಲು ಅದೆಷ್ಟೋ ಕಾಲ ಬೇಕಾಯಿತು. ಕೆಜಿಎಫ್ ಮತ್ತು ಅದರ ಎರಡನೇ ಅವತರಣಿಕೆ ಸೃಷ್ಟಿಯಲ್ಲಿಯೂ ಅಗಾಧ ಪರಿಶ್ರಮವನ್ನು ನೋಡಬಹುದು.

ಮೊದಲನೆಯದಾಗಿ ಈ ಚಿತ್ರಕ್ಕೆ ನೀರಿನಂತೆ ಹಣ ಸುರಿದು ಸುಧೀರ್ಘ ಕಾಲ ಕಲಾವಿದರು, ತಂತ್ರಜ್ಞರು ಹಾಗೂ ಸಹಾಯಕರಿಗೆ ನೆರವಾದ ಹೊಂಬಾಳೆ ಫಿಲ್ಸಂ ಮತ್ತು ಅದರ ಮುಖ್ಯಸ್ಥರಾದ ವಿಜಯ್ ಕಿರಗಂದೂರು, ಎರಡನೇಯದಾಗಿ ದೃಶ್ಯಗಳನ್ನು ಹೊಸೆಯುತ್ತಾ ಹೊಸೆಯುತ್ತಾ ಪ್ರಪಂಚ ತಿರುಗಿ ನೋಡುವ ತಾಂತ್ರಿಕ ನೇಯ್ಗೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಚಿತ್ರದ ಸಂಪೂರ್ಣ ಅಸ್ತಿತ್ವವಾಗಿ ಎಂಟು ವರ್ಷಗಳ ಕಾಲ ಒಂದೇ ಚಿತ್ರಕ್ಕೆ ತಮ್ಮನ್ನು ಮೀಸಲಿರಿಸಿಕೊಂಡು; ದೇಹ ಮತ್ತು ಭಾಷೆ ಎರಡರಲ್ಲೂ ಸದೃಢತೆ ಸಾಧಿಸಿದ ನಟ ಯಶ್ ಈಗ ಭಾರತೀಯ ಚಿತ್ರರಂಗದ ಹಾಟ್ ಫೆವರಿಟ್.

ಸಾಧನೆಗಳು ಸುಮ್ಮನೆ ಆಗುವುದಿಲ್ಲ; ನಿರಂತರ ಪ್ರಯತ್ನದಿಂದ ಆಗುತ್ತದೆ. ಅದರಲ್ಲಿಯೂ ಚಿತ್ರರಂಗದಲ್ಲಿ ಕನಸು ಮತ್ತು ಪ್ರಯತ್ನ ಮೇಳೈಸಿರುತ್ತದೆ. ಅದು ನಿಜಕ್ಕೂ ಸಾಕ್ಷಾತ್ಕಾರಗೊಂಡರೆ ಯಶಸ್ಸು ಸಿಕ್ಕಿದವರ ನಡಿಗೆ ಭೂಮಿಯ ಮೇಲೆ ಇರುವುದಿಲ್ಲ..

(ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ರಾಜೇಂದ್ರಸಿಂಗ್ ಬಾಬು, ರಾಶಿ ಬ್ರದರ್ಸ್ ಹೀಗೆ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಅನೇಕ ಮಹನೀಯರಿದ್ದಾರೆ. ಈ ಲೇಖನ ಬಾಲಿವುಡ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಮಾಡಿದ ಪ್ರಯತ್ನದ ಒಂದು ಕಿರುನೋಟ ಅಷ್ಟೇ..)

🖋ಸ್ನೇಹಪ್ರಿಯ ನಾಗರಾಜ್

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *