ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ತಮ್ಮ ನಾದ ಲೋಕದ ಸಮ್ಮೋಹನದಿಂದ ಆಳಿದ ಹಾಗೆಯೇ ಚಿತ್ರರಂಗಕ್ಕೆ ‘ಚಂದನವನ’
(ಸ್ಯಾಂಡಲ್ ವುಡ್) ಎಂದು ಚೆಂದದ ಹೆಸರಿನಿಂದ ಕರೆದು ಪ್ರಸಿದ್ಧಿಗೊಳಿಸಿದ
ಇಂದಿನ ರಿಯಾಲಿಟಿ ಶೋಗಳ ಅನಿವಾರ್ಯ ಡಾರ್ಲಿಂಗ್ ಆಗಿರುವ ಡಾ.ಹಂಸಲೇಖ ಅವರು ಯಾರಿಗೆ
ಗೊತ್ತಿಲ್ಲ…??
ಹೌದು ಕನ್ನಡದ ಜನಮಾನಸದಲ್ಲಿ ಅವರೆಂದೂ ಮಿನುಗುವ ನಕ್ಷತ್ರವೇ..
ಅವರ ಹಾಡುಗಳು ಪ್ರತಿಕ್ಷಣ ಹೃದಯ ಮೀಟುವ ರಾಗ ಸಂಗಮವೂ ಹೌದು.. ಪ್ರತಿ ವಾರ ಮನೆಯ ಮನಗಳಲ್ಲಿ ಅವರು ಮಿನುಗುವುದೂ ನಿಜ. ಆದರೆ ಒಂದು ವಿಷಯದಲ್ಲಿ ಅವರು ಕೊಂಚ ತಟಸ್ಥ ಮತ್ತು ನಿರ್ಲಿಪ್ತ. ಅದೆಂದರೆ ಅವರನ್ನು ಹುಡುಕಿಕೊಂಡು ಬರುವ ಪ್ರಶಸ್ತಿಗಳು..
ಕನ್ನಡ ನಾಡಿನಲ್ಲಿ ನಾದಬ್ರಹ್ಮ ಎಂದೇ ಖ್ಯಾತರಾಗಿರುವ ಡಾ.ಹಂಸಲೇಖ ಅವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.. ಸದ್ಯ ಅವರಿಗೆ ನೆರೆಯ ಗೋವಾ ಹುಡುಕಿ ಸನ್ಮಾನಿಸಿದೆ. ಪ್ರಶಸ್ತಿ ಕೊಟ್ಟು ಗೌರವಿಸಿದೆ.
ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ)ಯು ಸಂಗೀತದಲ್ಲಿ ‘ವರ್ಷದ ಅತ್ಯುತ್ತಮ ಸಂವಹನಕಾರ’ (ಕಮ್ಯುನಿಕೇಟರ್ ಆಪ್ ದ ಇಯರ್- ಮ್ಯೂಜಿಕ್) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈಚೆಗೆ ನಡೆದ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಡಾ.ಹಂಸಲೇಖ ಅವರಿಗೆ ನೀಡಿ ಸನ್ಮಾನಿಸಿದ್ದಾರೆ.