ಇದು ಪ್ಯಾರೆಲಲ್ ಸಿನಿಮಾ ವರ್ಗಕ್ಕೆ ಸೇರುತ್ತದೆ ಎಂಬುದು ನಿಜ; ಆದರೆ ಸ್ಲೋ ಇಲ್ಲ; ಕಮರ್ಷಿಯಲ್ ಆಗಿ ಕ್ಲಿಕ್ ಆಗುವುದೋ ಎಂದು ನೋಡಬೇಕಿದೆ; ಹಾಗಾಗಿ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ ತಂಡ.
ಅದು ‘ಡೊಳ್ಳು’ ಜಾನಪದ ನೆಲೆಯಲ್ಲಿ ನೋಡಲಾಗಿದೆ. ಡೊಳ್ಳು ಕುಣಿತದ ಕಲಾವಿದರ ಪರಿಶ್ರಮ, ಹತಾಶೆ, ನೋವಿನಂತಹ ವಿಷಯಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ. ಇದೇ ಗುಣಗಳಿಂದಲೇ ಸುಮಾರು 16 ಸಿನಿಮಾ ಉತ್ಸವಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಪಡೆದಿದೆ.
ಕನ್ನಡದ ಹೆಸರಾಂತ ನಿರ್ದೇಶಕ ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಪುತ್ರ ಸಾಗರ್ ಪುರಾಣಿಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಬೆಂಗಳೂರು ಸಿನಿಮೋತ್ಸವ, ಪನೋರಮಾ ಸೇರಿದಂತೆ ಅನೇಕ ಸಿನಿಮಾ ಉತ್ಸವಗಳಲ್ಲಿ ಪಾಲ್ಗೊಂಡಿರುವ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸಬೇಕು. ಹಾಗಾಗಿ ಮಾಧ್ಯಮಗಳ ಮುಂದೆ ಬಂದಿರುವುದಾಗಿ ಚಿತ್ರತಂಡ ಹೇಳಿಕೊಂಡಿತು.
ನನಗೆ ಕಮರ್ಷಿಯಲ್ ಸಿನಿಮಾಗಳನ್ನು ಮಾಡಿ ಗೊತ್ತು. ಆದರೆ ಕಲಾತ್ಮಕ ಸಿನಿಮಾ ಹೇಗಿರುತ್ತದೆ. ಅದರ ಒಳಗೆ ಏನೆಲ್ಲಾ ಸಂಭವಿಸುತ್ತದೆ ಎಂದು ತಿಳಿಯುವ ಕುತೂಹಲಕ್ಕಾಗಿ ಈ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಪವನ್ ಒಡೆಯರ್.
ಮುಖ್ಯ ಪಾತ್ರದಲ್ಲಿರುವ ಕಾರ್ತಿಕ್, ನಿಧಿ ಹೆಗಡೆ, ಸಂಕಲನಕಾರ ಕೆಂಪರಾಜು, ಡೊಳ್ಳು ಕುಣಿತ ಕಲಿಯಲು ಸಹಾಯ ಮಾಡಿದ ಪ್ರಭು, ಹಿರಿಯ ಕಲಾವಿದ ಚಂದ್ರ ಮಯೂರ್ , ಛಾಯಾಗ್ರಾಹಕ ಅಭಿಲಾಸ್, ನಟಿ ಶರಣ್ಯ ಸುರೇಶ್ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.