ವಂಶವಾಹಿನಿಯ ಹೆಸರು ಸೂಚಿಸುವ ಕಥೆ ಈ ವಾರ ಬಿಡುಗಡೆಯ ಹಾದಿಯಲ್ಲಿತ್ತು. ಅದಕ್ಕಾಗಿ ಪ್ರಚಾರ ಸನ್ಮಾನ ಸಭೆಗಳನ್ನು ನಡೆಸಿತು. ಆದರೆ ಅದ್ಯಾವ ಗಳಿಗೆಯಲ್ಲಿ ಸರ್ಕಾರ ವಾರಾಂತ್ಯದ ಕರ್ಫ್ಯೂ ಹೇರಿಕೆ ಮಾಡಿತೋ ಆಗಿನಿಂದ ಈ ಚಿತ್ರದ ನಿರ್ಮಾಪಕರು ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ.
ಚಿತ್ರದ ಹೆಸರು ‘ಡಿ ಎನ್ ಎ’. ಸುಮಾರು 25 ವರ್ಷಗಳಿಂದ ಚಿತ್ರರಂಗದಲ್ಲಿ ದುಡಿದು ಅನುಭವ ಗಳಿಸಿದ ಪ್ರಕಾಶ್ ರಾಜ್ ಮೇಹು ಸ್ವಂತ ನಿರ್ದೇಶಕರಾಗುವ ಆಶಯದಲ್ಲಿ ಮಾಡಿರುವ ಪ್ರಯತ್ನ ಎಂಬುದು ಇಲ್ಲಿ ಮುಖ್ಯವಾಗಿದ್ದರೆ, ದೇವನೂರು ಅವರ ಪ್ರಸಿದ್ಧ ಬರಹ ರೂಪದ ಸಾಲು ಚಿತ್ರಕ್ಕೊಂದು ಕಳೆ ತಂದು ಕೊಟ್ಟಿದೆ ಎಂಬ ಖುಷಿಯಲ್ಲಿ ಆ ಹಾಡಿನ ಬಿಡುಗಡೆ ಮಾಡಿತು ಚಿತ್ರತಂಡ.
ಅದೇ ‘ಸಂಬಂಜ ಅನ್ನೊದು ದೊಡ್ದು ಕನ’. ಇದು ದೇವನೂರರ ಕುಸುಮಬಾಲೆ ಕೃತಿಯ ಅತಿ ಹೆಚ್ಚು ಹೆಸರು ಮಾಡಿರುವ ಸಾಲು.. ಚಿತ್ರದ ಕಥೆಗೆ ಪೂರಕವಾಗಿರುವ ಸಾಲು ನಿರ್ದೇಶಕರಿಗೆ ಪ್ರತಿ ಕ್ಷಣ ರೋಮಾಂಚನ ಹುಟ್ಟಿಸಿದ ಸಾಲು..
ಚೇತನ್ ಕಾಸ್ಕ ಸಂಗೀತದಲ್ಲಿ ಹಾಡು ಅತ್ಯುತ್ತಮವಾಗಿ ಮೂಡಿಬಂದಿದೆ. ರಂಗಭೂಮಿಯಲ್ಲಿ ಹೆಸರಾಗಿರುವ ಭವಾನಿ ಪ್ರಕಾಶ್ ಹಾಡಿದ್ದಾರೆ. ಆ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟಿಯರಾದ ಎಸ್ತರ್ ನರೋನಾ, ಅನಿತಾಭಟ್, ನಟ ಅಚ್ಯುತ್ ಕುಮಾರ್, ಮಾಸ್ಟರ್ ಆನಂದ್ ಹಾಗೂ ಬಾಲ ನಟರಾದ ಕೃಷ್ಣ, ಧೃವ ಹಾಜರಿದ್ದರು.
ಮುಖ್ಯವಾಗಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಗಿಡ ನೆಡುವ ತಾಯಿ ಪದ್ಮಶ್ರೀ ತುಳಸಿ ಗೋವಿಂದೇಗೌಡ ಅವರ ಉಪಸ್ಥಿತಿ ಗಮನ ಸೆಳೆಯಿತು. ಆದರೆ ಅತ್ಯುತ್ತಮ ಛಾಯಾಗ್ರಹಣ ನೀಡಿದ ಸನಾ ರವಿ ಕುಮಾರ್ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಚಿತ್ರಕ್ಕೆ ಮೈಲಾರಿ ಬಂಡವಾಳ ಹೂಡಿದ್ದಾರೆ. ಇದೇ ಜನವರಿ ಏಳರಂದು ಬಿಡುಗಡೆ ಮಾಡುವ ಘೋಷಣೆ ಮಾಡಿ ಪ್ರಚಾರ ಸಭೆಗಳಿಗೆ ಖರ್ಚು ಮಾಡಿದರು ನಿರ್ಮಾಪಕರು. ಆದರೆ ಕೊರೊನಾ ಮಹಾಮಾರಿ ಅವರಿಗೊಂದು ದೊಡ್ಡ ಪೆಟ್ಟು ನೀಡಿತು..
ಈಗ ಪ್ರಚಾರಕ್ಕೆಂದು ಒಂದು ಲಕ್ಷ ಖರ್ಚು ಮಾಡಿದೆ. ಪ್ರೀಮಿಯರ್ ಶೋ ಮಾಡಬೇಕಿತ್ತು. ಅದಕ್ಕೆ ಖರ್ಚಾಗುವ ಹಣ ಉಳಿಯಿತು. ಒಂದು ವೇಳೆ ಅದನ್ನು ಖರ್ಚು ಮಾಡಿದ್ದರೆ ಹೆಚ್ಚಿನ ನಷ್ಟವಾಗುತ್ತಿತ್ತು ಎಂದು ವಿಷಾದ ಹೊರ ಹಾಕಿದರು ನಿರ್ಮಾಪಕ ಮೈಲಾರಿ.
ಸಮಾರಂಭದಲ್ಲಿ ಮಾಸ್ಟರ್ ಆನಂದ್ ಅವರ ಹುಟ್ಟುಹಬ್ಬ ಆಚರಿಸಿದ್ದು, ಸಿನಿಮಾ ಪತ್ರಕರ್ತರಿಗೆ ಸನ್ಮಾನ ಮಾಡಿದ್ದು ಎಲ್ಲವೂ ವಿಶೇಷವಾಗಿತ್ತು. ಆದರೆ ಇಷ್ಟೆಲ್ಲಾ ಮಾಡಿ ಹಣ ಖರ್ಚು ಮಾಡಿಸಿದ ನಿರ್ಮಾಪಕರಿಗೆ ಚಿತ್ರ ಬಿಡುಗಡೆ ಮರೀಚಿಕೆಯಾಗಿದ್ದು ಮಾತ್ರ ವ್ಯವಸ್ಥೆಯ ಅಣಕದಂತೆ ಕಂಡಿತು.
ಕೊರೊನಾ ಮಹಾಮಾರಿಯ ಹೊಡೆತಕ್ಕೆ ಇಲ್ಲಿಯವರೆಗೂ ಹೆಚ್ಚು ನಷ್ಟ ಅನುಭವಿಸಿರುವುದೇ ಮನರಂಜನಾ ಕ್ಷೇತ್ರ. ಇದು ಕರುಣೆ ಇಲ್ಲದೆ ನಿರ್ಬಂಧಗಳನ್ನು ಹೇರುವ ಆಳುವವರ ನಿರ್ಲಕ್ಷ್ಯಕ್ಕೂ ಒಳಗಾಗಿದೆ ಎಂಬುದೂ ವಿಷಾದದ ಸಂಗತಿ.