ಟೋಟಲ್ ಕನ್ನಡ ಸಂಸ್ಥೆಯ ವಿ.ಲಕ್ಷ್ಮಿಕಾಂತ್ ಕನ್ನಡಮ್ಮನ ಸೇವೆಯ ನಿರಂತರತೆ ಕಾಯ್ದುಕೊಂಡ ಪರಿಣಾಮ ಒಂದು ಸಿನಿಮಾ ನಿರ್ಮಾಣ ಕನಸಿನ ಆಶಯ ಈಡೇರಿದೆ..
ಅದು ಪಂಪ..!
ಆದರೆ ಆದಿ ಕವಿ ಪಂಪ ಅಲ್ಲ; ಬದಲಿಗೆ ಪಂಚಳ್ಳಿ ಪರಶಿವಮೂರ್ತಿ ಎಂಬುದು ಪಂಪ ಆಗಿದೆ. ಇಲ್ಲಿಯೂ ಕನ್ನಡತನ ಮೆರೆಯಬೇಕು ಎಂಬ ಆಸಕ್ತಿಯಲ್ಲಿ ಮೂಡಿ ಬಂದಿರುವ ಸಿನಿಮಾದಲ್ಲಿ ಎದ್ದು ಕಾಣುವುದು ಕನ್ನಡದ ವೈಭವವೇ..
ಕನ್ನಡದ ಸೂಕ್ಷ್ಮ ಸಂವೇದಿ ನಿರ್ದೇಶಕ ಎಂದೇ ಹೆಸರಾದ ಎಸ್.ಮಹೇಂದರ್ ಇಲ್ಲಿ ಕನ್ನಡ ಕಟ್ಟುವ ಕಾಯಕ ಮುಂದುವರಿಸಿ ಸಿನಿಮಾ ಮಾಡಿರುವುದರಿಂದ ಕನ್ನಡತನ ಎದ್ದು ಕಾಣುತ್ತದೆ.
ಈಚೆಗೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ ನಡೆದ ‘ಪಂಪ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಹಿರಿಯ ಪತ್ರಕರ್ತ ಜೋಗಿ, ಎಸ್.ಮಹೇಂದರ್, ವಿ.ಲಕ್ಷ್ಮಿಕಾಂತ್, ಗಾಯಕ ರವೀಂದ್ರ ಸೊರಗಾವಿ, ನಟ ಅರವಿಂದ್, ಆದಿತ್ಯ ಶೆಟ್ಟಿ ಭಾಗವಹಿಸಿದ್ದರು.
ಆದರೆ ಚಿತ್ರದ ಮುಖ್ಯ ಸೂತ್ರಧಾರರೆನಿಸಿದ್ದ ನಾದಬ್ರಹ್ಮ ಹಂಸಲೇಖ ಹಾಗೂ ಮುಖ್ಯ ಪಾತ್ರದಲ್ಲಿದ್ದವರ ಅನುಪಸ್ಥಿತಿ ಎದ್ದು ಕಂಡಿತು.
ಹಾಡುಗಳ ಕುರಿತು ಟಿ.ಎಸ್.ನಾಗಭರಣ ನವಿರಾದ ಮಾತುಗಳಲ್ಲಿಯೇ ವಿವರಿಸಿದರು. ಈ ಹಾಡುಗಳು ಸ್ಥಾಯಿ ಭಾವಗಳನ್ನು ಹೊಂದಿವೆ. ಹಳೆಯ ಜಾಡು ಎಂಬುದಕ್ಕಿಂತ ಮನಸ್ಸಿಗೆ ಮುದ ನೀಡುವಲ್ಲಿ ಗಟ್ಟಿಯಾಗಿ ನಿಲ್ಲುತ್ತವೆ ಎಂಬುದೇ ಹೆಗ್ಗಳಿಕೆಯಾಗಬಹುದು ಎಂದರು.
ಎಸ್. ಮಹೇದರ್ ಎಂತಹ ಕ್ರಿಯಾಶೀಲ ನಿರ್ದೇಶಕ ಎಂಬುದು ತಿಳಿದಿದೆ. ಅವರು ಅದನ್ನು ಇನ್ನೂ ಉಳಿಸಿಕೊಂಡು ಹೋಗುತ್ತಿದ್ದಾರೆ ಎಂಬುದು ಶ್ಲಾಘನೀಯ ಎಂದರು ನಾಗಾಭರಣ.
ಕನ್ನಡದ ಕೆಲಸ ಅಂದ್ರೆ ಅದು ಸುಲಭವಲ್ಲ; ನಿರಂತರವಾದ ಛಲ ಸಾಧನೆ ಬೇಕಾಗುತ್ತದೆ..
ಟೋಟಲ್ ಕನ್ನಡದ ಲಕ್ಷ್ಮಿಕಾಂತ್ ಕನ್ನಡದ ಕೆಲಸವನ್ನು ಅದೇ ಶ್ರದ್ಧೆ ಮತ್ತು ಭಕ್ತಿಯಿಂದ ಮುಂದುವರೆಸುತ್ತಾ ಸಿನಿಮಾ ಮಾಡಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಮತ್ತು ಮನಸುಗಳು ಬದಲಾಗುತ್ತಿವೆ. ಕನ್ನಡ ಚಿತ್ರಗಳಿಗೆ ದೃಶ್ಯ ಪರಂಪರೆ ಇದೆ.. ಈಗ ಎಲ್ಲಾ ಕಡೆಯು ವೇಗದ್ದೇ ಮಾತು. ಕೆಲವರು ಕಣ್ಣು ಕಿವಿಗೆ ಕೆಲಸ ಕೊಟ್ಟರೂ ಅದು ವೇಗವಾಗಿ ಸರಿದು ಹೋಗುವುದರಿಂದ ಮನಸ್ಸಿಗೆ ನಿಲುಕುವುದಿಲ್ಲ; ಆದರೆ ಇಲ್ಲಿನ ಹಾಡುಗಳು ನವಿರಾಗಿ ಹೃದಯಕ್ಕೆ ತಟ್ಟುವಂತಿವೆ ಎಂದರು ನಾಗಾಭರಣ.
ಎಸ್.ಮಹೇಂದರ್ ಅವರ ಚಿತ್ರಗಳಲ್ಲಿ ಹಾಡುಗಳು ಶೇಕಡಾ 90 ರಷ್ಟು ಹಿಟ್ ಆಗುತ್ತವೆ ಎಂದರು ಹಿರಿಯ ಪತ್ರಕರ್ತ ಜೋಗಿ. ಟೋಟಲ್ ಕನ್ನಡ ಲಕ್ಷ್ಮಿಕಾಂತ್ ನನ್ನ ಬಹಳ ವರ್ಷಗಳ ಗೆಳೆಯರು ಅವರಿಗೆ ಒಳಿತಾಗಲಿ ಎಂದು ಹಾರೈಸಿದರು.
ನಾಗಾಭರಣ ಅವರ ಸೀರಿಯಲ್ ಮಹಾಮಾಯಿ ಮೂಲಕ ನಾನು ನಟನಾಗಿ ಬಂದೆ ಎಂಬುದನ್ನು ನಟ ಅರವಿಂದ್ ಸ್ಮರಿಸಿಕೊಂಡರು. ಕನ್ನಿಕೆ ಹಾಡಿನಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಪುಣ್ಯ ಎಂದರು ಆದಿತ್ಯ ಶೆಟ್ಟಿ.
ಇದು ಕನ್ನಡದ ನೆನಪಿನಲ್ಲಿ ಸಾಗುವ ಆದರೆ ಯಾವುದೇ ಸಿನಿಮ್ಯಾಟಿಕ್ ವೈಭವೀಕರಣ ಇಲ್ಲದ ಸಿನಿಮಾ ಎಂದರು ನಿರ್ದೇಶಕ ಎಸ್.ಮಹೇಂದರ್. ಮರ್ಡರ್ ಮಿಸ್ಟರಿಯಲ್ಲಿ ಮೂರು ಲವ್ ಇದೆ..
ಹಂಸಲೇಖ ಅವರ ಸಂಗೀತದಲ್ಲಿ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಅದ್ಭುತವಾಗಿದೆ ಎಂದರು.
ಈ ಸಿನಿಮಾ ಆಗಲು ಮೂಲ ಕಾರಣವಾಗಿದ್ದೇ ಹಂಸಲೇಖ ಎಂಬುದನ್ನೂ ಸ್ಮರಿಸಿದರು ಮಹೇಂದರ್.