ನಟ ಎಸ್.ಮೋಹನ್ ಆಗಾಗ ನಿರ್ದೇಶನದ ಸಾಹಸಕ್ಕಿಳಿಯುತ್ತಾರೆ. ಕೆಲವೊಮ್ಮೆ ಬಿಡುವಿರದ ಕೆಲಸದ ನಡುವೆಯೇ ಸಾಹಸ ಮಾಡುವುದುಂಡು. ಏಕೆಂದರೆ ಸಿನಿಮಾ ನಿರ್ದೇಶನ ಅವರ ಫ್ಯಾಷನ್.
ಈ ಬಾರಿ ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದಿರುವ ಸ್ಕಂದ ಅಶೋಕ್ ಹಾಗೂ ಮತ್ತೊಬ್ಬ ನಟ ಚೇತನ್ ಜೊತೆಗೂಡಿಸಿ ‘ಜಿಗ್ರಿ ದೋಸ್ತ್’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದು, ಅದೀಗ ಇದೇ 17ರಂದು ಬಿಡುಗಡೆ ಕಾಣುತ್ತಿದೆ.
ಸದ್ದಿಲ್ಲದೆ ಮಾಡಿ ಮುಗಿಸಿರುವ ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ ಹಾಗೂ ಹಾಡುಗಳು ಗಮನ ಸೆಳೆಯುತ್ತವೆ ಎಂಬುದನ್ನು ತಿಳಿಸಲು ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ.
ಈ ಕಾಲದಲ್ಲಿ ಚಿತ್ರ ಬಿಡುಗಡೆ ಮಾಡಿದರೆ ನಿರ್ಮಾಪಕ ಎಷ್ಟು ಸೇಫ್ ಎಂಬುದು ಪ್ರಶ್ನೆಯಾಗಿ ಇಲ್ಲಿ ಕಾಡಿತು ಮತ್ತು ಮೋಹನ್ ಅದಕ್ಕೆ ಸಮರ್ಪಕ ಉತ್ತರ ನೀಡಿದರು ಕೂಡ.
ಒಬ್ಬ ಪೊಲೀಸ್ ಒಬ್ಬ ಲಾಯರ್ ಇಬ್ಬರ ಗೆಳೆತನದ ಜೊತೆಗೆ ಲವ್ ಮತ್ತು ಸಂಘರ್ಷ ಇರುವ ಚಿತ್ರವೇ ಜಿಗ್ರಿ ದೋಸ್ತ್. ಇದರಲ್ಲಿ ಸ್ನೇಹದ ಮಹತ್ವ ಇರುತ್ತದೆ ಎಂಬುದನ್ನು ಸಾರುತ್ತದೆ ಎಂದು ಹೇಳಲೇ ಬೇಕಾಗಿಲ್ಲ ಎಂದರು.
ಸಂಗೀತ ನಿರ್ದೇಶಕ ದಿನೇಶ್ ಕುಮಾರ್, ಮುಖ್ಯ ಪಾತ್ರದಲ್ಲಿ ನಟಿಸಿರುವ ಚೇತನ್, ನಾಯಕ ನಟಿಯರಾದ ಅಕ್ಷತಾ, ಸುಷ್ಮಾ ಹಾಗೂ ಸಹ ನಿರ್ಮಾಪಕರಾಗಿರುವ ಮಂಜುನಾಥ್, ನಟ ಇರ್ಫಾನ್ ಈ ಸಂದರ್ಭದಲ್ಲಿದ್ದರು.
ಅಂದ ಹಾಗೆ ಬಿ.ಎನ್. ಗಂಗಾಧರ್ ಈ ಚಿತ್ರದ ನಿರ್ಮಾಪಕ. ಯಾವುದಾದರೂ ಸರಿ ಓಪನ್ ಇರುವ ಚಿತ್ರಮಂದಿರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದರು.