ಕೇವಲ ಎರಡು ಮೂರು ಚಿತ್ರಗಳಲ್ಲೇ ನನ್ನದೇನಿದ್ದರೂ ವೈವಿಧ್ಯಮಯ.. ಎಂದು ಸಾಧಿಸಿ ತೋರಿಸಿದ ನಿರ್ದೇಶಕ ಗುರುಪ್ರಸಾದ್ ಈಗ ‘ಎದ್ದೇಳು ಮಂಜುನಾಥಾ2’ ಮಾಡಿ ಇದು ಅದಲ್ಲ ಎನ್ನುತ್ತಿದ್ದಾರೆ.
ಯಾವುದೇ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು ಬಳಿಕ ಮಾಧ್ಯಮಗಳ ಮುಂದೆ ಬಂದ ನಿರ್ದೇಶಕ ಗುರುಪ್ರಸಾದ್ ತಮ್ಮ ಎಂದಿನ ವಾಗ್ಝರಿಯ ಮೂಲಕವೇ ಗಮನ ಸೆಳೆದರು.
‘ಎದ್ದೇಳು ಮಂಜುನಾಥ2’ ಸಮೂಹ ನಿಧಿಯ ಮೂಲಕ ಆಗಿದೆ. ಇದರ ಷೇರು ಪಡೆದವರು ನಿರ್ಮಾಪಕರಾಗಿದ್ದಾರೆ. ಅದರಲ್ಲಿ ನಾನೂ ಒಬ್ಬ. ಜೊತೆಗೆ ಅನೇಕ ಗೆಳೆಯರು ಸ್ವ ಇಚ್ಚೆ ಮತ್ತು ಆಸಕ್ತಿಯಿಂದ ದುಡಿದು ಚಿತ್ರ ಇಲ್ಲಿಯವರೆಗೆ ಬರುವಂತೆ ನೋಡಿಕೊಂಡಿದ್ದಾರೆ.
ಈ ಚಿತ್ರದ ಕಥೆ ಏನು ಎಂಬುದನ್ನು ನಾನು ಬಿಟ್ಟು ಕೊಡಲಾರೆ. ಆದರೆ ಈ ಕಥೆ ಬೇರೆಯದು. ಇದು ಅದಲ್ಲ; ಆಗ ಸೋಮಾರಿಯೊಬ್ಬನ ಬಗ್ಗೆ ಮಾಡಿದ್ದೆವು. ಅಂತಹ ಕಥೆ ಒಂದೇ ಬಾರಿ ಮಾಡಲು ಸಾಧ್ಯ ಅಷ್ಟೇ. ಇದು ಒಂಥರ ಕ್ರೈಮ್ ಕಾಮಿಡಿ. ಇಷ್ಟು ಮಾತ್ರ ನಾವು ಬಿಟ್ಟು ಕೊಡಲು ಸಾಧ್ಯ ಎಂದ ಗುರುಪ್ರಸಾದ್, ಕಥೆ ಏನೆಂದು ಬಾಯಿ ಬಿಡಿಸುವ ಯಾವ ಪಟ್ಟುಗಳಿಗೂ ಬಗ್ಗಲಿಲ್ಲ.
ಗುರುಪ್ರಸಾದ್ ಅವರ ಜೊತೆಗೆ ಕಾರ್ಯಕಾರಿ ನಿರ್ಮಾಪಕ ದೀಕ್ಷಿತ್, ನಿರ್ಮಾಪಕರಲ್ಲಿ ಒಬ್ಬರಾದ ರಮೇಶ್, ನಟಿ ರಚಿತಾ ಮಹಾಲಕ್ಷ್ಮಿ, ಮಾರ್ಕೆಟಿಂಗ್ ವಿಭಾಗದ ಶಶಿ, ಭರತ್ ಜೈನ್, ಸಿನಿಟೇಕ್ ಸೂರಿ, ಅಶೋಕ್ ಮೊದಲಾದವರು ಮಾತನಾಡಿದರು.
ಚಿತ್ರವು ಸಂಪೂರ್ಣ ಕಾಮಿಡಿ ಎಂಬುದಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ; ಆದರೆ ಒಳಗೆ ಬುದ್ಧಿವಂತಿಕೆ ಕೂಡ ಕೆಲಸ ಮಾಡುತ್ತದೆ. ಅದು ಪ್ರೇಕ್ಷಕರಿಗೆ ಬಿಡುತ್ತಾ ಹೋಗುವ ವಿಷಯ. ಏಪ್ರಿಲ್ ಕಳೆದು ಮೇ ಹೊತ್ತಿಗೆ ಈ ಚಿತ್ರ ಬಿಡುಗಡೆ ಮಾಡುವ ಆಶಯವಿದೆ ಎಂದರು ಗುರುಪ್ರಸಾದ್.