ಚಿತ್ರರಂಗದಲ್ಲಿ ಕನಸು ಕಾಣುವವರ ಜೊತೆಗೆ ಅದನ್ನು ಅನುಷ್ಟಾನಕ್ಕೆ ತರುವ ಕನಸುಗಾರರು ಇರುತ್ತಾರೆ. ಸುಮಾರು 30 ವರ್ಷಗಳ ಕಾಲ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಿರ್ದೇಶನ, ಛಾಯಾಗ್ರಾಹಕ ಹಾಗೂ ತಂತ್ರಜ್ಞರಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಾ ಬಂದ ಬುಕ್ಕಾಪಟ್ಣ ವಾಸು ಈ ಸಾಹಸಗಾಥೆಯ ನಾಯಕ.
ಬೆಂಗಳೂರಿನ ನಾಗರಬಾವಿಯಲ್ಲಿ ಅವರು ಸ್ನೇಹಿತರ ಜೊತೆ ಸೇರಿ ಅತ್ಯಾಧುನಿಕ ಸ್ಟುಡಿಯೋ ನಿರ್ಮಾಣ ಮಾಡಿದ್ದು, ಅದು ಜಾಹಿರಾತು ಹಾಗೂ ಚಿತ್ರ ರಂಗದ ಸ್ನೇಹಿಯಾಗಿ ಕಾರ್ಯನಿರ್ವಾಹಿಸಲಿದೆ. ಅಂದ ಹಾಗೆ ‘ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈ ಲಿ.’ ಎಂಬುದು ಹೆಸರು. ಸಿನಿಮಾ ನಿರ್ಮಾಣದ ವಿವಿಧ ಹಂತಗಳಲ್ಲಿ, ಜಾಹಿರಾತು ನಿರ್ಮಾಣ ಮತ್ತು ಪ್ರಚಾರ ಇಂತಹ ವಿಷಯಗಳಲ್ಲಿ ಸ್ಟುಡಿಯೋ ಕ್ರಿಯಾಶೀಲರಿಗೆ ನೆರವಾಗಲಿದೆ.
ಕನ್ನಡದ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಸುಮಾರು 30 ವರ್ಷಗಳ ಕಾಲ ಬರಹಗಾರ, ಧಾರಾವಾಹಿ ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ಬುಕ್ಕಾಪಟ್ಟಣ ವಾಸು, ಈಗಾಗಲೇ ಸೆಂಚುರಿ ಫಿಲಂ ಇನ್ಸ್ಟಿಟ್ಯೂಟ್ ಎಂಬ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಅವರಿಗೆ ಗೆಳೆಯ ಶ್ರೀಸಾಯಿಕೃಷ್ಣ ನೆರವು ನೀಡಿದ್ದಾರೆ. ಇದರ ಉದ್ಘಾಟನಾ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನೆರವೇರಿತು. ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ದೊಡ್ಡರಂಗೇಗೌಡ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ವಾಣಿಜ್ಯಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್, ಸಂಗೀತ ನಿರ್ದೇಶಕ ವಿ.ಮನೋಹರ್, ಭಾ.ಮ.ಹರೀಶ್, ಭಾ.ಮ.ಗಿರೀಶ್ ಹಾಗೂ ನಟಿ ಭವ್ಯಶ್ರೀ ರೈ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಸೌಂಡ್ ಎಂಜಿನಿಯರ್ ಪಳನಿ ಹಾಗೂ ಇನ್ನಿತರ ತಂತ್ರಜ್ಞರು ವಾಸು ಅವರ ಜೊತೆ ಕೈ ಜೋಡಿಸಿದ್ದಾರೆ.
ಕನ್ನಡದ ಮಟ್ಟಿಗೆ ಇದು ವಿಶೇಷವಾಗಿದೆ. ಏಕೆಂದರೆ ತೆಲುಗಿನಲ್ಲಿ ಸ್ಟಾರ್ ನಟರೇ ಹೆಚ್ಚು ಸ್ಟುಡಿಯೋ ಸ್ಥಾಪಿಸಿದ್ದಾರೆ. ತಮಿಳು, ಮಲಯಾಳಂನಲ್ಲಿಯೂ ಸ್ಟುಡಿಯೋ ಕಟ್ಟುವ ಉತ್ಸಾಹವನ್ನು ಮುಖ್ಯ ನಟರೇ ತೋರುತ್ತಾರೆ. ಆದರೆ ಒಬ್ಬ ನಿರ್ದೇಶಕ ಇಂತಹ ಸ್ಟುಡಿಯೋ ಮಾಡಿರುವುದು ಅಚ್ಚರಿ ಎಂದವರು ಹಿರಿಯ ನಿರ್ದೇಶಕ ಓಂ.ಸಾಯಿಪ್ರಕಾಶ್.
ಬುಕ್ಕಾಪಟ್ಣ ವಾಸು ಅವರ ಗುರುಗಳೆಂದೇ ಕರೆಸಿಕೊಳ್ಳುವ ಡಾ.ದೊಡ್ಡರಂಗೇಗೌಡರು, ನನ್ನ ವಾಸು ಸಂಬಂಧ ತುಂಬಾ ಹಳೆಯದು, ಕುಂಕುಮ ಭಾಗ್ಯ ಎನ್ನುವ ಮೆಗಾಸೀರಿಯಲ್ಗೆ ನನ್ನಿಂದ 11 ಹಾಡುಗಳನ್ನು ಬರೆಸಿದ್ದರು. ಅವರ ಒಡನಾಟ ನಿರಂತರ. ಈಗಲೂ ಜವಾಬ್ದಾರಿ ಹೊರಿಸಿದ್ದಾರೆ ಎಂದರು. ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಸಿಗುವಂಥ ಸ್ಟುಡಿಯೋ ಸ್ಥಾಪಿಸುವ ಮೂಲಕ ಹೊಸ ಸಾಹಸವನ್ನು ವಾಸು ಮಾಡಿದ್ದಾರೆ ಎಂದವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್. ಸಂಗೀತ ನಿರ್ದೇಶಕ ವಿ.ಮನೋಹರ್ ಸಹ ಶುಭ ಹಾರೈಸಿದರು,