ಇಲ್ಲಿ ಮಚ್ಚುಗಳು ಜಳಪಿಸುತ್ತವೆ.
ಆದರೂ ಪ್ರೇಮದ ಪಿಸುಗುಟ್ಟುವಿಕೆ; ಪುರಾಣದ ಪಾತ್ರಗಳು ಕಾಣ ಸಿಗುತ್ತವೆ.
ಅದು ತಲ್ವಾರ್ ಎಂಬ ಚಿತ್ರ..!
ಧರ್ಮ ಕೀರ್ತಿರಾಜ್ ಹಾಗೂ ಅದಿತಿ ಮುಖ್ಯ ಪಾತ್ರದಲ್ಲಿರುವ ‘ತಲ್ವಾರ್’ ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.
ಇದೊಂದು ರೌಡಿಸಂ ಕಥಾಹಂದರ ಇರುವ ಸಿನಿಮಾ. ಈ ಚಿತ್ರದಲ್ಲಿ ಕ್ಯಾಡ್ ಬರೀಸ್ ಎಂದೇ ಕರೆಸಿಕೊಳ್ಳುವ ಧರ್ಮ ಕೀರ್ತಿರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಈ ಚಿತ್ರ ಹೊಸ ಇಮೇಜ್ ತಂದು ಕೊಡುತ್ತದೆ ಎಂಬುದು ನಂಬಿಕೆ.
ಕಥೆ, ಚಿತ್ರಕಥೆ ಸಂಭಾಷಣೆ ಬರೆದಿರುವ ರಾಘವ ಮುರಳಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈ ಹಿಂದೆ ‘ಮುಮ್ತಾಜ್’ ಎಂಬ ಚಿತ್ರ ನಿರ್ದೇಶಿಸಿದ್ದ ರಾಘವ ಮುರಳಿ ಮತ್ತು ಧರ್ಮ ಕೀರ್ತಿರಾಜ್ ಇಬ್ಬರಿಗೂ ಇದು ಎರಡನೇ ಸಿನಿಮಾ.
ಇನ್ನು, ಈ ಚಿತ್ರದಲ್ಲಿ ಯುವ ನಟ ಅವಿನಾಶ್ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಅವರಿಗೆ ಈ ಚಿತ್ರ ಪರೀಕ್ಷೆಯಾಗಿದೆ. ಹಾಗೆಯೇ ವಿಶೇಷ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (ಜೆಕೆ) ಕಲ್ಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನ ರೌಡಿ ಕಲ್ಕಿ ಎಂಬುದು ಇವರ ಪಾತ್ರದ ಹೆಸರು.
ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಚಿತ್ರವನ್ನು ಸುರ್ನಳ್ಳಿ ಜಯರಾಮ್ ಅರ್ಪಿಸಿ, ಸುರೇಶ್ ಬೈರಸಂದ್ರ ಬಂಡವಾಳ ಹೂಡಿದ್ದಾರೆ. ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್ ಚಿತ್ರಕ್ಕೆ ಸಹ ನಿರ್ಮಾಪಕರಗಿದ್ದ ಸುರೇಶ್ ಈ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.
ಹೇಳಿ ಕೇಳಿ ನುರಿತ ಕ್ಯಾಮೆರಾಮನ್ ಆಗಿರುವ ಸುರೇಶ್ ಬೈರಸಂದ್ರ ಈ ಚಿತ್ರಕ್ಕೂ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.
ಕೆ.ಬಿ. ಪ್ರವೀಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಈಗಾಗಲೇ ಸರಿಗಮ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಖರೀದಿಸಿದೆ.
ಈ ಚಿತ್ರದಲ್ಲಿ 5 ಭರ್ಜರಿ ಸಾಹಸ ದೃಶ್ಯಗಳಿವೆ. ವಿನೋದ್, ಡ್ಯಾನಿ ಮತ್ತು ಕುಂಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ.