ಇದು ಕ್ರಾಂತಿಕಾರಿಯೊಬ್ಬನ ಪ್ರೇಮಕಥೆ. ಸತ್ಯ ಘಟನೆ ಆಧರಿಸಿ ಮಾಡಿದ ಚಿತ್ರವೂ ಇರಬಹುದು.. ಅತ್ಯಂತ ಅಚ್ಚುಕಟ್ಟಾಗಿ ಮೂಡಿ ಬಂದಿರುವ ಈ ಚಿತ್ರ ಓಟಿಟಿಯಲ್ಲಿ ಬಿಡುಗಡೆ ಕಾಣುತ್ತಿದೆ. ಅದೇ ವಿಶೇಷ..
ನೀನಾಸಂ ಸತೀಶ್ ಹಾಗೂ ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದ ಹೆಸರು ‘ಡಿಯರ್ ವಿಕ್ರಂ’. ಜೇಕಬ್ ವರ್ಗೀಸ್ ತಂಡದಲ್ಲಿ ಸಹ ನಿರ್ದೇಶಕರಾಗಿದ್ದ ಕೆ.ಎಸ್.ನಂದೀಶ್ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ.
ಸ್ಟಾರ್ ಹೊಟೇಲ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್, ನಂದೀಶ್ ಹಾಗೂ ವೂಟ್ ಸೆಲೆಕ್ಟ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ಕಲರ್ಸ್ ಕನ್ನಡ ವಾಹಿನಿ ಮನರಂಜನಾ ವಿಭಾಗದ ಮುಖ್ಯಸ್ಥ ಪರಮೇಶ್ ಗುಡ್ಕಲ್ ಹಾಜರಿದ್ದರು.
ಇದೊಂದು ವಿಭಿನ್ನ ಪ್ರೇಮಕಥೆ. ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲು ಹಾಗೂ ಮಲೇಷಿಯಾದಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.
ಚಿತ್ರದಲ್ಲಿ ಹೆಸರಾಂತ ತಾರಾಬಳಗವಿದೆ. ಅದು ಖುಷಿ ಕೊಟ್ಟಿದೆ. ವಶಿಷ್ಟ ಸಿಂಹ, ಸೋನುಗೌಡ, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ ಎಂದು ಹೇಳಿಕೊಂಡರು ನೀನಾಸಂ ಸತೀಶ್.
ವಾಸ್ತವವನ್ನು ಬಣ್ಣದ ಕನ್ನಡಕದಿಂದ ನೋಡುವ ಪಾತ್ರ ನನ್ನದು. ಇದನ್ನು ಎಂದಿಗೂ ಮರೆಯುವುದು ಸಾಧ್ಯವೇ ಇಲ್ಲ ಎಂದರು ಶ್ರದ್ಧಾ ಶ್ರೀನಾಥ್.
ಇದೇ ಜೂನ್ 30 ರಂದು ವೂಟ್ ಸೆಲೆಕ್ಟ್ ಮೂಲಕ ಚಿತ್ರವು ಬಿಡುಗಡೆ ಕಾಣುತ್ತಿದೆ. ಇದು ಓಟಿಟಿ ಪರಂಪರೆಯ ಹೊಸ ಯುಗದ ಆರಂಭ ಎಂದರು ಪರಮೇಶ್ ಗುಡ್ಕಲ್.
ಒಂದು ಸಮಾಧಾನಕರ ಬಜೆಟ್ ನೀಡಿ ಚಿತ್ರವನ್ನು ಓಟಿಟಿಗೆ ಕೊಳ್ಳಲಾಗಿದೆ. ಇದರಿಂದ ನಿರ್ಮಾಪಕರಿಗೂ ಖುಷಿಯಾಗಿದೆ. ಆದರೆ ಇದು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಭಾಷೆಗಳಿಗೂ ಡಬ್ ಮಾಡಿ ಬಿಡಲಾಗುವುದು ಇದರಿಂದ ದೇಶ ವಿದೇಶಗಳಲ್ಲಿರುವ ವೂಟ್ ಸೆಲೆಕ್ಟ್ ಚಂದಾದಾರರಿಗೆ ಚಿತ್ರ ನೋಡುವ ಭಾಗ್ಯ ಲಭಿಸಲಿದೆ ಎಂದರು.
ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೇ ಹೋದರೆ ಬಹುಸಂಖ್ಯಾತ ಪ್ರೇಕ್ಷಕರನ್ನು ನಿರಾಸೆ ಮಾಡಿದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ಇಲ್ಲ; ಈಗ ಓಟಿಟಿಗೆ ಜನರು ಒಗ್ಗುತ್ತಿದ್ದಾರೆ. ವೂಟ್ ಸೆಲೆಕ್ಟ್ ಕೂಡ ಉತ್ತಮ ರೀತಿಯಲ್ಲಿ ಜನರನ್ನು ತಲುಪುವ ಆಶಯ ಹೊಂದಿದೆ. ಹಾಗಾಗಿ ಯಾರಿಗೂ ನಿರಾಸೆಯಾಗುತ್ತದೆ ಎಂಬುದನ್ನು ನಾವು ನಂಬುವುದಿಲ್ಲ ಎಂದರು ಪರಮೇಶ್ ಗುಂಡ್ಕಲ್.