Snehapriya.com

June 6, 2025

ಟಗರು ಪಲ್ಯ ಚಿತ್ರವಿಮರ್ಶೆ

Social Share :


ರೇಟಿಂಗ್ : 4/5

ನಿರ್ಮಾಣ : ಡಾಲಿ ಧನಂಜಯ

ನಿರ್ದೇಶನ : ಉಮೇಶ್ ಕೆ.ಕೃಪಾ

ಸಂಬಂಜ ಅನ್ನೋದು ದೊಡ್ದು ಕನ..

ಅದು ಪ್ರೇಮ ವೈಫಲ್ಯವಲ್ಲ; ಸಂಬಂಧದ ಬೆಲೆ.. ಅವಳು ಹಾಡುತ್ತಿದ್ದರೆ..(ಸೂರ್ಯಕಾಂತಿ) ಅವನ ಹೃದಯದಲ್ಲಿ ಬೆಂಕಿ.. ಉತ್ಕಟ ಪ್ರೇಮವನ್ನು ಸಹಜ ವರ್ತನೆಗೆ ಯತ್ನಿಸುವ ಆತ ಪ್ರೇಕ್ಷಕರ ಹೃದಯಕ್ಕೆ ನೇರವಾಗಿ ಕಿಚ್ಚು ಹಚ್ಚುತ್ತಾನೆ..

ಅವನು ಚಿಕ್ಕ.. ಅನಾಥನಾಗಿ ಮಾವನ ಮನೆಯಲ್ಲಿ ಬೆಳೆದವನು ಮತ್ತು ಮಾವನ ಮಗಳು ಜ್ಯೋತಿಯನ್ನು ಹೃದಯಕ್ಕೆ ತುಂಬಿಕೊಂಡವನು..

ಹರಕೆ ಒಪ್ಪಿಸಲು ಬೆಟ್ಟದ ತಪ್ಪಲಿಗೆ ಬಂದ ಮಾವನ ಕುಟುಂಬ ದೇವರ ಒಪ್ಪಿಗೆಯ ಫಲ ಸಿಗದೆ ಅನಿಶ್ಚಿತತೆಯ ಗೊಂದಲದಲ್ಲಿ ಸಿಲುಕಿದೆ. ಪ್ರೇಮದ ವಿಷಯ ಎಲ್ಲಾ ಗೊತ್ತಿರುವ ಅತ್ತೆ ಹಾಕಿದ ಗೆರೆ.. ಚಿಕ್ಕ ತ್ಯಾಗ ಮಾಡಲು ಪ್ರೇರೇಪಿಸಿದೆ..

ಪಾಂಡಪ್ಪನ ಕುಟುಂಬ ಹರಕೆ ತೀರಿಸಲು ಮುಂಜಾನೆ ಹೊರಟು ಗುಡ್ಡದ ಮೇಲೆ ಬಂದ ನಂತರ ನಡೆಯ ಬಾರದ್ದೆಲ್ಲಾ ನಡೆದು ಹೋಗುತ್ತದೆ. ಟಗರು ಮಾಸದ ಅಮಲೇರಿಸಿಕೊಂಡೇ ಬಂದಿರುವ ಹಳ್ಳಿಯ ಜನ ಅಮಲಿಗಾಗಿ ಹಾತೊರೆಯುವ ಮತ್ತು ಅಮಲೇರಿಸಿ ಬೇಳೆ ಬೇಯಿಸಿಕೊಳ್ಳುವ ಪರಿಯ ನಾಟಕಗಳು ಮೊಗೆದಷ್ಟು ನಗುವಿನ ಬುಗ್ಗೆಯನ್ನೇ ಹರಿಸುತ್ತವೆ..

ಗ್ರಾಮ ದೇವತೆಗೆ ಎಷ್ಟೇ ಬೇಡಿಕೊಂಡು ಮೈ ತುಂಬಾ ನಿರಾಕಿದರೂ ಟಗರು ತಲೆ ಮೈ ಒದರುವುದಿಲ್ಲ.. ಇತ್ತ ದೇವರು ಅಪ್ಪಣೆ ಕೊಡಲಿಲ್ಲವೆಂದು ಮೊನಚು ಖಡ್ಗ ಹಿಡಿದು ಟಗರು ಕಡಿಯಲು ನಿಂತವ ಹಾಗೆ ಜಾರಿಸುತ್ತಾನೆ.. ಹಿರೀಕರು ಏನೋ ತಪ್ಪಾಗಿದೆ ಎನ್ನುತ್ತಾರೆ; ಕುಡಿದು‌ ಅಮಲೇರಿಸಿಕೊಂಡವರು ಪಲ್ಯಕ್ಕೆ ಹಾತೊರೆಯುತ್ತಾರೆ..

ಇದು ಸಂಬಂಧಗಳ ಸುತ್ತ ಹೆಣೆದ ಕಥೆಯಾಗಿ ಗಟ್ಟಿಯಾಗುವುದು ಚಿಕ್ಕನ ಆವೇದನೆ ಮತ್ತು ಪಾಂಡಪ್ಪ ಅಣ್ಣನ ಸಂಸಾರ ಬಂದ ಬಳಿಕ. ಅಂಗೈಯಲ್ಲಿರುವ ಚಿನ್ನ ಮರೆತು ಸಿಟಿಯ ಮೋಹಕ್ಕೆ ಮರುಳಾಗಿ ದೂರದೂರಿಗೆ ಮಗಳನ್ನು ಕೊಡುವ ಪಾಂಡಪ್ಪನ ಆಕಾಂಕ್ಷೆ ಏನು ನಡೆಯದೆ ಕೈ ಚೆಲ್ಲುವಂತಾಗಲು ಇಷ್ಟೆಲ್ಲಾ ಪ್ರಹಸನ ನಡೆಯಲೇ ಬೇಕಾಗುತ್ತದೆ.

ಮೊದ ಮೊದಲು ತಮಾಷೆಯಲ್ಲಿ ಮಿಂದ ಪ್ರೇಕ್ಷಕನಿಗೆ ಕೊನೆಗೆ ಕಣ್ಣಂಚು ಒದ್ದೆಯಾಗುತ್ತದೆ. ಕೌಟುಂಬಿಕ ಚಿತ್ರಗಳು ಬೇಕು ಎನ್ನುವ ಕಾಲಘಟ್ಟದಲ್ಲಿ ‘ಸಂಬಂಜ ಅನ್ನೋದು ದೊಡ್ದು ಕನಾ’ ಎಂಬ ದೇವನೂರರ ಆಶಯಗಳನ್ನು ತುಂಬಿದ ಸಿನಿಮಾ ಕರುನಾಡಿನ ಗ್ರಾಮೀಣ ಸಂಸ್ಕೃತಿ‌ ಮತ್ತು ಸೊಗಡನ್ನು ತುಂಬಿ ಕೊಟ್ಟಿರುವುದೇ ವಿಶೇಷ.

ಕೊನೆ ಕೊನೆಯಲ್ಲಿ ಕೆಲವು ಸಂಭಾಷಣೆಗಳು ಬೋಧನೆಗಳಾಗಿ ಕೊಂಚ ಇರಿಸು ಮುರಿಸು ಮಾಡುವುದನ್ನು ಬಿಟ್ಟರೆ, ಉಳಿದ ಎಲ್ಲಾ ಪ್ರಹಸನಗಳು ಸೊಗಸಾಗಿವೆ.

ರಂಗಾಯಣ ರಘು ಇಡೀ ಸಿನಿಮಾ ಆವರಿಸಿಕೊಂಡರೆ.. ತಾರಾ ಅವರಿಗೆ ನಟನೆಯಲ್ಲಿ ಪೈಪೋಟಿ ನೀಡಿದ್ದಾರೆ. ಚಿಕ್ಕನಾಗಿ ನಾಗಭೂಷಣ್ ಕಣ್ಣಿನಲ್ಲೇ ಮಾತನಾಡುತ್ತಾರೆ. ಅಮೃತಾ ಪ್ರೇಮ್ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ.

ಇನ್ನುಳಿದಂತೆ ಚಿತ್ರಾ ಶೆಣೈ, ಆನಂದ್, ಬಿರಾದಾರ್, ಶರತ್ ಲೋಹಿತಾಶ್ವ, ಹುಲಿ ಕಾರ್ತಿಕ್, ಮಹಾಂತೇಶ್ ಹಿರೇಮಠ್ ಮೊದಲಾದವರ ನಟನೆ ಸೊಗಸು..

ಕಲಾ ನಿರ್ದೇಶಕರಾಗಿದ್ದ ಉಮೇಶ್ ಕೆ. ಕೃಪಾ ನಿರ್ದೇಶಕರಾಗಿ ಬಡ್ತಿ ಪಡೆದು ಮಾಡಿರುವ ಪ್ರಯತ್ನ ಅದ್ಭುತ. ವಾಸುಕಿ ವೈಭವ್ ಸಂಗೀತ ಹಾಗೂ ಎಸ್.ಕೆ.ರಾವ್ ಛಾಯಾಗ್ರಹಣ ಚಿತ್ರಕ್ಕೆ ಪೂರಕ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *