ಇದು ಸಮಾಜಮುಖಿಯೋ ಅಥವಾ ಮನರಂಜನೆಯ ಹೂರಣವೋ ಅಂತೂ ಕಟ್ಟಿಂಗ್ ಶಾಪ್ ಎಂಬ ಹೆಸರಿನಲ್ಲಿ ತಯಾರಾಗಿದೆ ಮತ್ತು ಬಿಡುಗಡೆಗೆ ಸಜ್ಜಾಗಿದೆ.
ವಿಭಿನ್ನ ಶೀರ್ಷಿಕೆ ಹೊಸತನದ ಪರಿಕಲ್ಪನೆಯೊಂದಿಗೆ ಮೂಡಿಬಂದಿರುವ ಕಟ್ಟಿಂಗ್ ಶಾಪ್ ಇದೇ ಮೇ 20 ರಂದು ತೆರೆ ಕಾಣುತ್ತಿದೆ. ಈಗಾಗಲೇ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರವು ಬಿಡುಗಡೆಗೆ ಮುನ್ನ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ನಾಂದಿ ಹಾಡಿದೆ.
ವಿಶೇಷವೆಂದರೆ ಚಿತ್ರದ ಸಂಕಲನಕಾರರು ಟ್ರೈಲರ್ ಬಿಡುಗಡೆ ಮಾಡಿದ್ದು ವಿಶೇಷವಾಗಿದೆ.
ಅಂದ ಹಾಗೆ ಪವನ್ ಭಟ್ ಇದರ ನಿರ್ದೇಶಕ. ಸಿನಿಮಾ ಮಾಡುವ ಕಷ್ಟಕ್ಕಿಂತ ಅದನ್ನು ಜನರಿಗೆ ತಲುಪಿಸುವುದು ಇನ್ನೂ ಕಷ್ಟ. ಹೊಸಬರ ಈ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ ಎಂಬ ಕೋರಿಕೆ ಅವರಿಂದ ಬಂತು.
ಕೆ.ಬಿ.ಪ್ರವೀಣ್ ಮುಖ್ಯ ಪಾತ್ರದಲ್ಲಿದ್ದು, ಇಲ್ಲಿ ಹೀರೋಯಿಸಂಗಿಂತ ಅಭಿನಯಕ್ಕೆ ಒತ್ತು ನೀಡಲಾಗಿದೆ ಎಂದರು. ಚಿತ್ರದಲ್ಲಿ ವಿಶೇಷವೆನಿಸುವ ಹಾಡು ಇದೆ. ಅದು ಇದೇ 12ಕ್ಕೆ ಬಿಡುಗಡೆ ಕಾಣುತ್ತದೆ ಎಂಬ ಮಾಹಿತಿಯೂ ಬಂತು.
ನಟ, ನಿರ್ದೇಶಕ ನವೀನ್ ಕೃಷ್ಣ ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.
ನಿರ್ದೇಶಕ ಪವನ್ ಭಟ್ ಈಗಾಗಲೇ ಆಪರೇಶನ್ ಅಲಮೇಲಮ್ಮ, ಮಾಯಾಬಜಾರ್, ಅಳಿದು ಉಳಿದವರು, ರಾಂಚಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಬರಹಗಾರನಾಗಿ, ಗೀತ ಸಾಹಿತಿಯಾಗಿ ಕೆಲಸ ಮಾಡಿದ್ದಾರೆ. ಕಟ್ಟಿಂಗ್ ಶಾಪ್ ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ ಎಂಬ ಮಾಹಿತಿಯೂ ಬಂತು.
ಪ್ರವೀಣ್ ಮುಖ್ಯ ಪಾತ್ರದ ಜೊತೆಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಯಂಗ್ ಥಿಂಕರ್ಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆ ಉಮೇಶ್ ಮತ್ತು ಗಣೇಶ್ ಐತಾಳ್ ಸಿನಿಮಾ ನಿರ್ಮಾಣ ಮಾಡಿದ್ದು, ಉಮೇಶ್, ನಿರ್ಮಾಣದ ಜೊತೆಗೆ ಕಾಮಿಡಿ ಪಾತ್ರವನ್ನೂ ನಿರ್ವಹಿಸಿದ್ದಾರೆ.
ಅರ್ಚನಾ ಕೊಟ್ಟಿಗೆ, ದೀಪಕ್ ಭಟ್, ಅಭಿಷೇಕ್ ಸಾವಳಗಿ, ನವೀನ್ ಕೃಷ್ಣ , ಕೆ ವಿ ಆರ್, ದೊರೈ ಭಗವಾನ್ , ಓಂ ಪ್ರಕಾಶ್ ರಾವ್, ವತ್ಸಲಾ ಮೋಹನ್ ತಾರಾಗಣದಲ್ಲಿದ್ದಾರೆ. ಸ್ಕಂದ ರತ್ನಂ ಛಾಯಾಗ್ರಹಣ, ಸಾಗರ್ ಗಣೇಶ್ ಸಂಕಲನ ಈ ಚಿತ್ರಕ್ಕಿದೆ.