* ಅಪ್ಪು ಸಿನಿಮಾಗೆ ತೊಂದರೆಯಾಗಲು ಬಿಡಲ್ಲ..
* ಸಿಎಂ ಜೊತೆ ಶಿವಣ್ಣ ದಂಪತಿ ಉಪಾಹಾರ ಮಾತುಕತೆ
* ವಾಣಿಜ್ಯ ಮಂಡಳಿಗೆ ಬಂದು ಸ್ಪಷ್ಟನೆ ಕೊಟ್ಟ ಶಿವಣ್ಣ
* ಯಾರ ಸಿನಿಮಾಗೆ ತೊಂದರೆಯಾದ್ರು ಬರ್ತಿನಿ: ಶಿವಣ್ಣ
* 100ಕ್ಕೂ ಹೆಚ್ಚು ಚಿತ್ರಮಂದಿರಗಳಿಂದ ಜೇಮ್ಸ್ ತೆರವು
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ‘ಜೇಮ್ಸ್’ ಚಿತ್ರವನ್ನು ಚಿತ್ರ ಮಂದಿರಗಳಿಂದ ತೆರವುಗೊಳಿಸುವ ಪ್ರಯತ್ನ ನಡೆದಿದೆ ಎಂಬ ಸುದ್ದಿಗಳನ್ನು ಉಲ್ಲೇಖಿಸಿ ನಿನ್ನೆ ಬುಧವಾರ ‘ಅಪ್ಪು ಸಿನಿಮಾಗೆ ತೊಂದರೆಯಾಗಲು ನಾನು ಬಿಡಲ್ಲ..’ ಎಂದು ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಗುರುವಾರ ಡಾ.ಶಿವರಾಜ್ ಕುಮಾರ್ ದಂಪತಿಗಳ ಜೊತೆ ಉಪಹಾರ ಸೇವಿಸುತ್ತಾ ನಡೆಸಿದ ಮಾತುಕತೆಯಲ್ಲಿ ಜೇಮ್ಸ್ ಕುರಿತ ಸಮಸ್ಯೆಗೆ ಶಿವಣ್ಣ ಮತ್ತು ವಾಣಿಜ್ಯ ಮಂಡಳಿ ಚರ್ಚಿಸಿ ಕ್ರಮ ಕೈಗೊಳ್ಳುತ್ತದೆ ಎಂಬ ಮಾತನ್ನು ಪುನರುಚ್ಚರಿಸಿದರು.
ಇದರ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮಂಡಳಿ ಅಧ್ಯಕ್ಷ ಜಯರಾಜ್ ಹಾಗೂ ಮತ್ತಿತರರು ಕನ್ನಡ ಚಿತ್ರಗಳಿಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಆದರೆ ತೆಲುಗು ಚಿತ್ರ ತ್ರಿಬಲ್ ಆರ್ ನ ಸಲುವಾಗಿ ಜೇಮ್ಸ್ ಚಿತ್ರವನ್ನು ತೆಗೆದು ಹಾಕಿ ನೂರಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಬಿಟ್ಟುಕೊಡಲಾಗಿದೆ ಎಂಬ ಮಾಹಿತಿಗಳು ಬಂದಿವೆ. ಸಾಧ್ಯವಾದಷ್ಟು ಜೇಮ್ಸ್ ಚಿತ್ರವನ್ನು ಅದೇ ಚಿತ್ರಮಂದಿರಗಳಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂಬ ಸಮಾಧಾನವೊಂದೇ ಚಿತ್ರತಂಡಕ್ಕೆ ಸಿಕ್ಕಿದೆ.
ಪರಭಾಷೆಯ ಚಿತ್ರಗಳಿಂದ ಕನ್ನಡದ ಚಿತ್ರಗಳಿಗೆ ತೊಂದರೆಯಾಗುವ ವಿಷಯ ಹೊಸದೇನೂ ಅಲ್ಲ; ಆದರೆ ಕನ್ನಡಕ್ಕೆ ತೊಂದರೆಯಾದಾಗ ನಾವು ಹೋರಾಟಕ್ಕೆ ಸಿದ್ದ ಎಂದು ಶಿವಣ್ಣ ಹೇಳಿದರು.
ಇಲ್ಲಿ ನನ್ನ ತಮ್ಮನ ಸಿನಿಮಾಗೆ ತೊಂದರೆಯಾಗಿದೆ ಎಂದು ಮಾತ್ರ ಬಂದಿಲ್ಲ; ಕನ್ನಡದ ಯಾವ ಸಿನಿಮಾಗೆ ತೊಂದರೆಯಾದ್ರು ಹೋರಾಡಲು ನಾನು ಮುಂದೆ ನಿಲ್ಲುತ್ತೇನೆ ಎಂದರು ಶಿವಣ್ಣ.