ಮುಂದಿನ ದಿನಗಳಲ್ಲಿ ಮಹಿಳೆಯರು ರಾಜ್ಯವನ್ನು ಆರ್ಥಿಕತೆಯ ಸಬಲತೆಯತ್ತ ಕೊಂಡೊಯ್ಯಬಲ್ಲರು ಎಂಬ ವಿಶ್ವಾಸವಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಮಹಿಳೆಯರು ಸಾಮರ್ಥ್ಯ ಹಾಗೂ ಕಾರ್ಯಕ್ಷೇತ್ರದಲ್ಲಿನ ಸಾಧನೆಗಳಿಂದ ವರ್ಷದ ಪ್ರತಿ ದಿನವೂ ಮಹಿಳಾ ದಿನಾಚರಣೆಯನ್ನು ಆಚರಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶ್ರೀ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ಮಾರ್ಚ್ 8ರಂದು ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರ ಪ್ರಾಮಾಣಿಕತೆ, ಪರಿಶ್ರಮ ಹಾಗೂ ಉಳಿತಾಯದ ಚಾಕಚಕ್ಯತೆಗಳಿಗೆ ಸೂಕ್ತ ಅವಕಾಶ ಹಾಗೂ ಮಾರ್ಗದರ್ಶನ ನೀಡಿದರೆ ಅವರೂ ನವೋದ್ಯಮಿಗಳಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಬಾರಿಯ ಆಯವ್ಯಯವನ್ನು ರೂಪಿಸಲಾಗಿದೆ. ಸ್ವ ಸಹಾಯ ಸಂಘಕ್ಕೆ 1.50 ಲಕ್ಷ ಆರ್ಥಿಕ ನೆರವು, ಸುಲಭ ಸಾಲ ಸೌಲಭ್ಯ, ಉದ್ಯೋಗ, 43,118 ಕೋಟಿ ರೂ. ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ ಎಂದರು.
ಉಳಿತಾಯ ಸಂಸ್ಕೃತಿ..
ಭಾರತದಲ್ಲಿ ಉಳಿತಾಯ ಸಂಸ್ಕೃತಿ ಮಹಿಳೆಯರಿಂದ ಬಂದಿದೆ. ಪಾಶ್ಚಿಮಾತ್ಯದಲ್ಲಿ ಖರ್ಚು ಮಾಡುವ ಸಂಸ್ಕೃತಿಯಿದೆ. ಅಮೆರಿಕಾದಲ್ಲಿ ಬ್ಯಾಂಕ್ ನಷ್ಟ ಹೊಂದಿದ್ದರೆ ಆಪದ್ಧನದ ಮಾರ್ಗವೇ ಇರುವುದಿಲ್ಲ. ಆದರೆ ಭಾರತದಲ್ಲಿ ಮಹಿಳೆಯರು ಖರ್ಚಿನ ಬಾಬ್ತಿನಲ್ಲಿ ಚಾಕಚಕ್ಯತೆಯಿಂದ ಹಣವನ್ನು ಆಪದ್ಧನವಾಗಿ ಉಳಿತಾಯ ಮಾಡಿರುತ್ತಾರೆ. ಅದೇ ಒಂದು ಕುಟುಂಬದ ಬಂಡವಾಳ ಎಂದು ತಿ
ಹೊಗಳಿದರು.
ವೀರ ನಾರಿಯರು ಪ್ರೇರಣಾ ಶಕ್ತಿ..
ಶಕ್ತಿ ದೇವತೆಗಳೆಲ್ಲಾ ಸ್ತ್ರೀ ಸ್ವರೂಪವೇ. ವೀರಮಹಿಳೆಯರ. ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿದ ವೀರ ನಾರಿಯರು ನಮಗೆಲ್ಲಾ ಪ್ರೇರಣಾ ಶಕ್ತಿ. ಯುವಪೀಳಿಗೆಗೆ ವೀರವನಿತೆಯರ ಜೀವನ ಸಾಧನೆಗಳ ಪರಿಚಯಿಸುವ ಸಲುವಾಗಿ ಕೆಳದಿ ಚೆನ್ನಮ್ಮ, ಒನಕೆ ಓಬವ್ವ ರಂತಹ ವೀರವನಿತೆಯರ ಜನ್ಮ ದಿನಾಚರಣೆಯನ್ನು ಸರ್ಕಾರ ಆಚರಣೆ ಮಾಡಿದೆ.
ದುಡಿಮೆಯೇ ದೊಡ್ಡಪ್ಪ..
ಬಡ ಹೆಣ್ಣುಮಕ್ಕಳು ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳ ಸಹಾಯದಿಂದ ಆರ್ಥಿಕವಾಗಿ ಸಬಲರಾದರೆ, ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೂ ಕೊಡುಗೆ ನೀಡಬಹುದು. ವಿಜ್ಞಾನ, ಕ್ರೀಡೆ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಮುಂದಿರುವ ಮಹಿಳೆಯರು’ದುಡಿಮೆಯೇ ದೊಡ್ಡಪ್ಪ’ ಎನ್ನುವ ಮಾತನ್ನು ಅರ್ಥಪೂರ್ಣಗೊಳಿಸಬಲ್ಲರು. ಮಹಿಳೆಯರು ತಮ್ಮ ಕ್ರಿಯಾಶೀಲತೆಯಿಂದ ಉತ್ತಮ ನಾಡು ಕಟ್ಟಬಲ್ಲರು. ಲಿಂಗ ಸಮಾನತೆ ಹಾಗೂ ಸುಸ್ಥಿತ ಭವಿಷ್ಯದ ಧ್ಯೇಯವಾಕ್ಯದ ಅಂತರರಾಷ್ಟ್ರೀಯ ಮಹಿಳಾ ದಿನದ ಆಚರಣೆ ಸಾರ್ಥಕವಾಗಲಿ ಎಂದು ತಿಳಿಸಿದರು.