ಹೆಣ್ಣು ಮಕ್ಕಳಿಗೆ ಒಂದು ಕಾಸಿನಸರ ಮಾಡಿಸಿಕೊಳ್ಳಬೇಕು ಎಂಬುದು ಜೀವನದ ಗುರಿಯಾಗಿರುತ್ತದೆ. ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಅದೊಂದು ಕನಸಾಗಿರುತ್ತದೆ..
ಅಂತಹ ಕಥಾ ಎಳೆ ಚಿತ್ರವಾಗಿರುವುದು ಖುಷಿ ತಂದಿದೆ ಎಂದವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು..
ಶುಕ್ರವಾರ ಅವರು ‘ಕಾಸಿನ ಸರ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕಾಸಿನಸರದ ಹಿಂದಿರುವ ಕಥೆಯನ್ನು ಊಹಿಸಿಕೊಳ್ಳಬಹುದು. ಅಂತಹ ಪ್ರಯೋಗ ಮಾಡಿರುವ ನಿರ್ದೇಶಕ ನಂಜುಂಡೇಗೌಡ ಹಾಗೂ ನಿರ್ಮಾಪಕ ದೊಡ್ಡನಾಗೇಗೌಡರಿಗೆ ಅಭಿನಂದನೆ ತಿಳಿಸುವೆ ಎಂದರು.
ಗ್ರಾಮೀಣ ಬದುಕಿನಲ್ಲಿ ಪ್ರೀತಿ, ವಿಶ್ವಾಸ, ಸಂಬಂಧ ಇರುವುದರಿಂದ ಆ ಬದುಕು ಸೊಗಸು. ಹಳ್ಳಿಯಲ್ಲಿ ಎಲ್ಲರೂ ಎಲ್ಲರಿಗೂ ಗೊತ್ತಿರುವುದಲ್ಲದೆ, ಸುಖ, ದು:ಖಗಳಲ್ಲಿ ಭಾಗಿಯಾಗುತ್ತಾರೆ. ಈ ರೀತಿಯ ಆತ್ಮೀಯ ಬದುಕು ಬಹುತೇಕವಾಗಿ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಇಲ್ಲಿ ಮನೆ ಹಾಗೂ ಮನಗಳೂ ಬೆಸೆದುಕೊಂಡಿರುತ್ತವೆ.. ಎಂದು ಮುಖ್ಯಮಂತ್ರಿ ಅವರು ಗ್ರಾಮೀಣ ಬದುಕಿನ ಸಾರಗಳನ್ನು ಇದೇ ವೇಳೆ ಮೆಲುಕು ಹಾಕಿದರು.
ಮೌಲ್ಯಾಧಾರಿತ ಹಾಗೂ ಗುಣಾತ್ಮಕ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರಲಿ ಎಂದು ಆಶಿಸಿದ ಅವರು, ಕೃಷಿ ಅವಲಂಬಿತ ಕುಟುಂಬದ ಸಾಮಾಜಿಕ ಪರಿಣಾಮ, ಅಡಚಣೆಗಳನ್ನು ‘ಕಾಸಿನ ಸರ’ ಚಿತ್ರದಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಅನ್ನವನ್ನು ವ್ಯರ್ಥಗೊಳಿಸುವವರು, ಅನ್ನವನ್ನು ಸೇವಿಸುವವರೆಲ್ಲರೂ ಈ ಚಿತ್ರವನ್ನು ನೋಡಲೇಬೇಕು. ಈ ಚಿತ್ರದಲ್ಲಿನ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಸಚಿವ ಎಸ್.ಟಿ.ಸೋಮಶೇಖರ್, ಕಲಾವಿದೆ ತಾರಾ ಅನುರಾಧ, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್ ಹಾಗೂ ಚಿತ್ರದ ಮುಖ್ಯ ಪಾತ್ರದಲ್ಲಿರುವ ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ಹಾಜರಿದ್ದರು.