ರೇಟಿಂಗ್ : 3.5/5
ನಿರ್ಮಾಣ : ರವಿರಾಜ್ ಎಸ್.ಕುಮಾರ್
ಪ್ರಜೆಗಳು ಭ್ರಷ್ಟರಾದರೆ ಎಂತಹ ಪ್ರಭುತ್ವ..!?
ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಇರುವ ಪ್ರಜಾ ಪ್ರಭುತ್ವದ ಸ್ವರೂಪದಲ್ಲಿ ಅಡಗಿರುವ ನ್ಯೂನತೆಗಳನ್ನು ವಿಶ್ಲೇಷಿಸುವ ಪ್ರಯತ್ನದಲ್ಲಿ ಮನರಂಜನೆಗಿಂತ ಬೋಧನೆಯ ಪಾಲು ಹೆಚ್ಚಿನದು..
ಒಂದು ಮನರಂಜನಾತ್ಮಕ ಸಿನಿಮಾಗೆ ಬೇಕಾಗಿರುವ ಅಪ್ರತಿಮ ಹೋರಾಟ; ಹೊಡೆದಾಟ ವಿಧ್ವಂಸಕ ರೂಪಕ ಎಲ್ಲವೂ ಇದ್ದರೂ ಏನಾಗುತ್ತಿದೆ ಎಂಬ ಪ್ರಶ್ನಾರ್ಥಕ ಚಿಹ್ನೆಗಳು ಗಾಢ ಚಿಂತನೆಗೂ ಹಚ್ಚಿ ಬಿಡುತ್ತವೆ.
ಮೆಕಾನಿಕ್ ವೃತ್ತಿ ಮಾಡುವ ಮನೋಹರ ಅಲಿಯಾಸ್ ಮನು ಆದರ್ಶದಿಂದ ರೂಪುಗೊಂಡಿರುವ ಯುವಕ. ಅದಕ್ಕೆ ಕಾರಣ ಆತನ ತಂದೆ ಆದರ್ಶ ಶಿಕ್ಷಕ ಕೃಷ್ಣಮೂರ್ತಿ ಕಾರಣ.
ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ಮಡಿಯುವ ಕೃಷ್ಣಮೂರ್ತಿ ವ್ಯವಸ್ಥೆಯ ಬಲಿಪಶು. ಆತನ ಮಗ ಮುಂದೆ ತುಳಿಯುವ ಹಾದಿಯಲ್ಲಿ ಆತ ಕೂಡ ಸಾಂದರ್ಭಿಕ ಶಿಶು.
ಪ್ರಜಾ ಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಹಿಡಿದು ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ , ಭಗತ್ ಸಿಂಗ್ ಹೀಗೆ ಆದರ್ಶಗಳನ್ನು ಸಾರುವ ಮಹಾತ್ಮರ ಸಂದೇಶದ ಝಲಕ್ ಗಳು ಸಂಭಾಷಣೆಯ ರೂಪದಲ್ಲಿ ಉದ್ದಕ್ಕೂ ಹೊರಬೀಳುತ್ತವೆ.
ಅದು ಗ್ರಾಮದ ಯಜಮಾನ ಅಯ್ನೋರ ವ್ಯಕ್ತಿತ್ವದ ಪ್ರತಿಫಲ. ಒಂದು ಅತ್ಯಾಚಾರ ವಿರೋಧಿಸಿ ಎಸಿಪಿ ಸಾವಿಗೆ ಕಾರಣನಾಗುವ ಮನು, ಮಧ್ಯಾಂತರದ ಹೊತ್ತಿಗೆ ಪುಂಡರ ಸದೆ ಬಡಿದು ಎದುರಿಸುವ ಸಾಹಸದಲ್ಲಿ ಅಮ್ಮನನ್ನೂ ಕಳೆದುಕೊಳ್ಳುತ್ತಾನೆ.
ಮುಂದೆ ಆತ ಹುಟ್ಟೂರಿಗೆ ಬಂದು ನೆಲೆಸುವುದೂ ಅಲ್ಲಿ ಅಯ್ನೋರ ಬೆಂಬಲ ಚುನಾವಣೆ ಜೊತೆಗೆ ದುಷ್ಟರ ವಿಜೃಂಭಣೆಯ ಜೊತೆಗೆ ಅನೇಕ ಕೊಲೆಗಳ ಆರೋಪ ಹೊತ್ತು ನಿಲ್ಲುತ್ತಾನೆ.
ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳಿಗೆ ಮತ್ತು ಅವರ ಜೀವಗಳಿಗೆ ಬೆಲೆ ಇಲ್ಲ ಮತ್ತು ಹಣ ಪಡೆದು ಮತ ಚಲಾಯಿಸುವ ಪ್ರಜೆಗಳಿಗೆ ನೈತಿಕತೆಯೇ ಇಲ್ಲ ಎಂದು ಸಾರುವುದು ಮತ್ತು ಆ ಮೂಲಕ ಸಂದೇಶ ನೀಡುವುದು ಚಿತ್ರದ ತಿರುಳು.
ಇಡೀ ಚಿತ್ರವನ್ನು ಬೆನ್ನ ಮೇಲೆ ಹೊತ್ತಿರುವ ಚೇತನ್ ಚಂದ್ರ ನಟನೆ ಮತ್ತು ಹೊಡೆದಾಟದಲ್ಲಿ ಸೂಪರ್. ಅವಕಾಶಗಳು ಬಂದರೆ ಕನ್ನಡದ ಮುಂಚೂಣಿಯ ನಟರ ಸಾಲಿಗೆ ನಿಲ್ಲುವ ಸಾಮರ್ಥ್ಯವೂ ಅವರಿಗಿದೆ.
ಜೋಡಿಯಾಗಿರುವ ಪಾವನಾ, ತಂದೆಯಾಗಿರುವ ರಾಜೇಶ್ ನಟರಂಗ, ಅಯ್ನೋರ ಪಾತ್ರಧಾರಿ ನಾಜರ್, ತಿಮ್ಮಕ್ಕ ರೂಪಾದೇವಿ, ತಾಯಿ ಪಾತ್ರಧಾರಿ ವೀಣಾ ಸುಂದರ್, ಇನ್ಸ್ ಪೆಕ್ಟರ್ ಶಶಿಕುಮಾರ್, ಎಸಿಪಿ ಧರ್ಮ, ಸಬ್ ಇನ್ಸ್ ಪೆಕ್ಟರ್ ಯತಿರಾಜ್, ಎಸಿಪಿ ಮುನಿಯಾ, ಸಿಬಿಐ ಅಧಿಕಾರಿ ಪೂಜಾ ಲೋಕೇಶ್ ಪಾತ್ರವಲ್ಲದೆ ನ್ಯಾಯಾಧೀಶೆ ಪಾತ್ರದಲ್ಲಿ ಅಂಬಿಕಾ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಕೆಟ್ಟ ರಾಜಕಾರಣಿಗಳ ಪಾತ್ರದಲ್ಲಿರುವ ಶರತ್ ಲೋಹಿತಾಶ್ವ, ಖಳನ ಪಾತ್ರದಲ್ಲಿನ ಆದಿ ಲೋಕೇಶ್, ಮನು ಸ್ನೇಹಿತರಾಗಿರುವ ಗಿರೀಶ್ ಶಿವಣ್ಣ, ಡ್ಯಾನಿ, ವಿಜಯ್ ಚೆಂಡೂರ್, ಸಂದೀಪ್ ಹೀಗೆ ಅಸಂಖ್ಯಾ ತಾರಾಗಣ ನೋಡಲು ಹಬ್ಬ.
ಮೇಘಡಹಳ್ಳಿ ಡಾ.ಶಿವಕುಮಾರ್ ಕಥೆ ಬರೆದಿದ್ದಾರೆ. ವಿನಯ್ ಮೂರ್ತಿ ಛಾಯಾಗ್ರಹಣ ಹಾಗೂ ಎಮಿಲ್ ಸಂಗೀತ ಚಿತ್ರಕ್ಕೆ ಪೂರಕ.
ಮತದಾರ ಭ್ರಷ್ಟಾಚಾರಿಯಾದರೆ ‘ಪ್ರಭುತ್ವ’ ಹೇಗೆ ದಾರಿ ತಪ್ಪುತ್ತದೆ ಎಂಬ ವಾಸ್ತವ ನೆಲೆಯಲ್ಲಿ ಹೆಣೆಯಲಾಗಿರುವ ಚಿತ್ರಕಥೆ ಇಂದಿನ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಂತೆ ಕಾಣುತ್ತದೆ.
ಸಾಮಾಜಿಕ ನೆಲೆಯಲ್ಲಿ ಪರಿಣಾಮ ಬೀರುವ ಚಿತ್ರದಲ್ಲಿ ನ್ಯೂನತೆಗಳು ಇಲ್ಲವೆಂದಿಲ್ಲ; ಹಳೆಯ ದೃಶ್ಯಗಳ ಸವಕಲು ಮೆರವಣಿಗೆಯೂ ಇದೆ.
ಹಾಗೆಯೇ ವ್ಯವಸ್ಥೆಯ ಲೋಪಗಳನ್ನು ಅತಿಯಾಗಿ ವಿಜೃಂಭಿಸುವ ದೃಶ್ಯಗಳೂ ಮಾನ್ಯತೆ ಪಡೆಯುತ್ತವೆ. ಹಾಗಾಗಿ ಮನು ಹೋರಾಟ ನಿರರ್ಥಕ ಎನಿಸುತ್ತದೆ.
ನೋಟಿಗಾಗಿ ಓಟನ್ನು ಮಾರಿಕೊಳ್ಳುವ ಪ್ರಜೆಗಳು ನೋಡಲೇ ಬೇಕಾದ ಅಪರೂಪದ ಚಿತ್ರವಿದು.