ಬೇಡ ಬೇಡವೆಂದರೂ ಸಂಗಾತಿಯಾಗುವ ಪ್ರೀತಿಯ ಶ್ವಾನದ ಬಗ್ಗೆ ಮರುಗುವ ನಾಯಕ ರಕ್ಷಿತ್ ಶೆಟ್ಟಿ ಮತ್ತವರ ತಂಡ ನಿಜಕ್ಕೂ ಮಾನವೀಯತೆಯ ಅನುಕಂಪದ ನೆಲೆಯಲ್ಲಿ ಚಿಂತನೆ ಮಾಡುತ್ತಿದೆ.
‘ಚಾರ್ಲಿ 777’ ಯಶಸ್ಸಿನಲ್ಲಿ ತೇಲುತ್ತಿರುವ ತಂಡ ಚಿತ್ರವು 25 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ತಂಡ ಯಶಸ್ಸಿನಲ್ಲಿ ಶ್ವಾನ ಅಥವಾ ಸಾಕು ಪ್ರಾಣಿಗಳಿಗೆ ನೆರವಾಗಲು ಯೋಜನೆ ರೂಪಿಸಿದೆ.
ಅದರಂತೆ ಚಿತ್ರದ ಯಶಸ್ಸಿನಿಂದ ಬಂದ ಲಾಭದಲ್ಲಿ ಶೇಕಡಾ 10ರಷ್ಟು ಹಣವನ್ನು ಬೀದಿ ನಾಯಿ ಅಥವಾ ಸಾಕು ಪ್ರಾಣಿಗಳ ನೆರವಿಗಾಗಿ ನೀಡಲು ನಿರ್ಧರಿಸಿ ಈಗಾಗಲೇ ಕಾರ್ಯೋನ್ಮುಕವಾಗಿದೆ.
ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಶ್ವಾನಗಳನ್ನು ನೋಡಿಕೊಳ್ಳುವ ಅಥವಾ ಎನ್ ಜಿ ಓಗಳಿಗೆ ನೆರವು ನೀಡುವ ಆಶಯಗಳನ್ನು ತಂಡ ಪ್ರಕಟಿಸಿತು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಚಿತ್ರ ನೋಡಿದ ಬಳಿಕ ಬೀದಿ ನಾಯಿಗಳ ಕಾಯಕಲ್ಪ ಮಾಡುವ ವಿಷಯ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು..
ಚಿತ್ರವು 25 ಯಶಸ್ವಿ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್, ಕಾರ್ತಿಕ್ ಗೌಡ ಹಾಗೂ ತಂಡದ ಇತರರು ಮಾಧ್ಯಮಗಳ ಮುಂದೆ ಬಂದಿದ್ದರು.
ಈ ರೀತಿಯ ಒಂದು ಯಶಸ್ಸಿಗಾಗಿ ನಾನು ಹಂಬಲಿಸಿದ್ದೆ. ಅದು ಭಾವನಾತ್ಮಕವಾಗಿಯೂ ಸಿಕ್ಕಿದೆ ಎಂದರು ರಕ್ಷಿತ್ ಶೆಟ್ಟಿ. ಇದು ವಿಶಿಷ್ಟ ಎನಿಸುತ್ತಿದೆ. ಈ ರೀತಿಯ ಭಾವನಾತ್ಮಕ ಚಿತ್ರ ಮಾಡುವುದು ಎಲ್ಲಾ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ; ಆದರೆ ಮುಂದಿನ ಹೆಜ್ಜೆಗಳನ್ನು ಇದು ಮತ್ತಷ್ಟು ಗಟ್ಟಿಯಾಗಿಸಿದೆ ಎಂದರು. ಚಿತ್ರಕ್ಕೆ ಲಾಭ ಬಂದಿದೆ. ಇದರಲ್ಲಿ ಶೇಕಡಾ 10 ರಷ್ಟು ಬೀದಿ ಅಥವಾ ಸಾಕು ನಾಯಿಗಳ ಅಭ್ಯುದಯಕ್ಕೆ ಮತ್ತು ಇನ್ನು ಶೇಕಡಾ 10ರಷ್ಟು ಚಿತ್ರತಂಡದ ಸದಸ್ಯರಿಗೆ ಹಂಚಲಾಗುವುದು ಎಂದರು.
ಚಿತ್ರದ ವಿತರಣೆ ಪಡೆದಿರುವ ಕೆಆರ್ ಜಿ ಮುಖ್ಯಸ್ಥ ಕಾರ್ತಿಕ್ ಗೌಡ ಚಿತ್ರದ ಗಳಿಕೆಯ ಸಾಧನೆಗಳನ್ನು ವಿವರಿಸಿದರು. ಇಲ್ಲಿಯವರೆಗೆ ಚಿತ್ರವು ಸುಮಾರು 150 ಕೋಟಿ ಗಳಿಕೆ ಮಾಡಿದೆ ಎಂಬ ಲೆಕ್ಕಾ ಮುಂದಿಟ್ಟರು.
ನಿರ್ದೇಶಕ ಕಿರಣ್ ರಾಜ್ ಚಾರ್ಲಿ ಮತ್ತವಳ ಔದಾರ್ಯವನ್ನು ಕೊಂಡಾಡಿದರು. ಚಾರ್ಲಿ ಸುದ್ದಿಗೋಷ್ಠಿಯ ಹೈಲೈಟ್ ಕೂಡ ಆಗಿತ್ತು. ನಟಿ ಸಂಗೀತಾ ಶೃಂಗೇರಿ, ಬಾಲನಟಿ ಶಾರ್ವರಿ, ಸಂಗೀತ ನಿರ್ದೇಶಕ ನೋಬಿನ್ ಪಾಲ್ ಹಾಗೂ ಇತರರು ತಮ್ಮ ಅನುಭವಗಳನ್ನು ಹಂಚಿಕೊಂಡರು.