ಇದು ಅಕ್ಷರಕ್ರಾಂತಿ ಬಿಂಬಿಸುವ ಚಿತ್ರ ಎಂದರು ನಿರ್ಮಾಪಕಿ ಶೈಲಜಾನಾಗ್.
ಇಂದಿನ ಶೈಕ್ಷಣಿಕ ಸಮಸ್ಯೆಯ ಮೇಲೆ ಚಿತ್ರಿತವಾಗಿದೆ ಎಂದರು ಅವರ ಪತಿ ಬಿ.ಸುರೇಶ್..
ನಿಜ; ಅಕ್ಷರ ಕ್ರಾಂತಿ ಶೈಕ್ಷಣಿಕ ಸಮಸ್ಯೆಯ ಮೇಲೆ ಬಿಂಬಿತವಾಗಿದೆ.. ಆದರೆ ಅದನ್ನು ಬಿಡಿಸಿ ಹೇಳಬಹುದಲ್ಲ ಎಂಬುದಕ್ಕೆ ಜಪ್ಪಯ್ಯ ಅಂದರೂ ಜಗ್ಗಲಿಲ್ಲ ಚಿತ್ರತಂಡ..
ಅದೇ ಕ್ರಾಂತಿ..!
ದರ್ಶನ್ ಮುಖ್ಯ ಪಾತ್ರದಲ್ಲಿರುವ ಚಿತ್ರವನ್ನು ಸಂಗೀತ ನಿರ್ದೇಶಕ ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೋಡಿಯಾಗಿ ರಚಿತಾರಾಮ್ ಕಾಣಿಸಿಕೊಂಡಿದ್ದಾರೆ.
ಚಿತ್ರವು ಡಬ್ಬಿಂಗ್ ಹಂತದಲ್ಲಿ ಇರುವಾಗ ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ. ಇದು ಸಾಮಾಜಿಕ ನೆಲೆಯಲ್ಲಿ ಚಿತ್ರೀಕರಣ ವಾಗಿದೆ. ಒಂದು ದೊಡ್ಡ ಸಮಸ್ಯೆಯ ಸುತ್ತ ಬಿಂಬಿತವಾಗಿದೆ. ಒಬ್ಬ ಕಮರ್ಷಿಯಲ್ ಹೀರೋ ಇಂತಹ ಚಿತ್ರದಲ್ಲಿ ಅಭಿನಯಿಸಲು ಮನಸ್ಸು ಮಾಡಿರುವುದೇ ದೊಡ್ಡ ವಿಷಯ ಎಂದರು ನಿರ್ದೇಶಕ ಹರಿಕೃಷ್ಣ.
ಆದರೆ ಚಿತ್ರದ ಒಳಗೇನಿದೆ ಎಂಬುದಕ್ಕೆ ಅವರೂ ಗುಟ್ಟು ಬಿಟ್ಟು ಕೊಡಲಿಲ್ಲ; ಕೊನೆಗೆ ದರ್ಶನ್ ಕೈಗೆ ಬಂದಾಗ.. ನಾನು ಕಥೆಯನ್ನೇ ಹೇಳಿ ಬಿಡುತ್ತೇನೆ ಅದರಿಂದ ಏನು ತೊಂದರೆಯಾಗುವುದಿಲ್ಲ ಎಂದು ಮಾತಿಗಾರಂಭಿಸಿದರು.
‘ನೋಡಿ ಸರ್ ಇದು ಸರ್ಕಾರಿ ಶಾಲೆಗಳ ಸುತ್ತ ಇರುವ ಸಮಸ್ಯೆಗಳನ್ನು ಬಿಂಬಿಸುವ ಚಿತ್ರ. ಇಲ್ಲಿ ಒಂದು ಕ್ರಾಂತಿ ನಡೆದರೆ, ಸಾಮಾಜಿಕ ವಾಗಿ ಏನೋ ಆಗಬಹುದು ಎಂಬ ಭ್ರಮೆಗಳಿಲ್ಲ! ಆದರೆ ನಾವು ಒಂದು ಪ್ರಯತ್ನ ಮಾಡೋಣ ಎಂದು ಹೆಜ್ಜೆ ಇಟ್ಟಿದ್ದೇವೆ ಎಂದರು ಚಾಲೆಂಜಿಂಗ್ ಸ್ಟಾರ್ ದರ್ಶನ್.
ರಚಿತಾ ರಾಮ್ ಅವರದು ಟೀಚರ್ ಪಾತ್ರ. ಸರ್ಕಾರಿ ಶಾಲೆಗಳ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ. ಆದರೆ ಅದು ನಿಜವಾಗಿ ಸರ್ಕಾರಿ ಶಾಲೆಗಳಂತೆ ಕಾಣುತ್ತದೆ ಎಂದರೆ ಅದಕ್ಕೆ ಕಲಾ ನಿರ್ದೇಶಕ ಶಶಿಧರ್ ಅಡಪ ಅವರ ಕೈ ಚಳಕ ಕಾರಣ ಎಂದರು.
ಇದೊಂದು ಸ್ಫೂರ್ತಿ ನೀಡಬಲ್ಲ ಚಿತ್ರ ಎಂದರು ರಚಿತಾ ರಾಮ್. ದರ್ಶನ್ ಅವರ ಜೊತೆ ಮೂರನೇ ಸಿನಿಮಾ ಮತ್ತು ನಾನು ಚಿತ್ರೋದ್ಯಮಕ್ಕೆ ಬಂದು ಹತ್ತು ವರ್ಷಗಳನ್ನು ಪೂರೈಸಿದ ಸಂದರ್ಭಗಳಾಗಿವೆ ಎಂದು ಮೆಲುಕು ಹಾಕಿದರು.
ಚಿತ್ರಕ್ಕೆ ಸೆಟ್ ಹಾಕುವಾಗ ನನಗೆ ಹೃದಯಾಘಾತವಾಯಿತು. ಆಗ ನನ್ನ ನೆರವಿಗೆ ಬಂದು ಚೆನ್ನಾಗಿ ನೋಡಿಕೊಂಡವರು ದರ್ಶನ್ ಸರ್. ಅವರ ಹೃದಯ ವೈಶಾಲ್ಯ ಎಷ್ಟು ಕೊಂಡಾಡಿದರು ಸಾಲದು ಎಂದರು ಕಲಾ ನಿರ್ದೇಶಕ ಶಶಿಧರ್ ಅಡಪ.
ಛಾಯಾಗ್ರಾಹಕ ಕರುಣಾಕರ್ ಹಾಗೂ ಸಂಕಲನಕಾರ ಪ್ರಕಾಶ್ ತಮ್ಮ ಅನುಭವಗಳನ್ನು ಹೇಳಿಕೊಂಡರು.
ಚಿತ್ರವು ಮೂರು ಅಥವಾ ಇನ್ನು ಹೆಚ್ಚಿನ ಭಾಷೆಗಳಿಗೆ ಡಬ್ ಆಗುತ್ತದೆ. ಆದರೆ ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಎಂದು ಸ್ಪಷ್ಟನೆ ನೀಡಿದರು ನಿರ್ಮಾಪಕಿ ಶೈಲಜಾ ನಾಗ್.
ಇದು ನಮ್ಮ ರಾಜ್ಯದಲ್ಲಿ ಗಾಢವಾಗಿರುವ ಸಮಸ್ಯೆ ನಾನು ಚಿತ್ರಕಥೆ ಸಂದರ್ಭದಲ್ಲಿ ಕುಳಿತಿದ್ದೇನೆ. ಚಿತ್ರದ ಆಶಯಗಳು ಅತ್ಯುತ್ತವಾಗಿವೆ ಎಂದರು ಬಿ.ಸುರೇಶ್.