ಎರಡು ಮಹತ್ವದ ಸಂಗತಿಗಳು ಒಟ್ಟಿಗೆ ಸಂಭವಿಸಿವೆ.. ಹಾಗಾಗಿ ‘ಕಬ್ಜ’ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಆರ್.ಚಂದ್ರು ಸಂತೃಪ್ತಿಯಲ್ಲಿ ಮಿಂದೆದ್ದಿದ್ದಾರೆ..
ಮೊದಲನೇಯದು ಅವರಿಗೆ ಅತಿ ಹೆಚ್ಚು ತೆರಿಗೆ ಪಾವತಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದಿಂದ ಪ್ರಶಂಸೆ ಸಿಕ್ಕಿದೆ.
ಎರಡನೇಯದು ಅತ್ಯಂತ ಪ್ರತಿಷ್ಠಿತ ಎನಿಸಿರುವ ‘ಪ್ರಜಾವಾಣಿ ಸಿನಿ ಸಮ್ಮಾನ್-2’ ಪ್ರಶಸ್ತಿಯನ್ನು ‘ಕಬ್ಜ’ ಮೂರು ವಿಭಾಗಗಳಲ್ಲಿ (ಅತ್ಯುತ್ತಮ ವಿಎಫ್ ಎಕ್ಸ್, ನಿರ್ಮಾಣ ನಂತರದ ಕೆಲಸ ಹಾಗೂ ಅನಿಮೇಷನ್) ಮುಡಿಗೇರಿಸಿಕೊಂಡಿರುವುದು.
ಇದೀಗ ಆರ್ ಸಿ ಪ್ರೊಡಕ್ಷನ್ (ಆರ್.ಚಂದ್ರು ನಿರ್ಮಾಣ ಸಂಸ್ಥೆ) ಘೋಷಣೆ ಮಾಡಿಕೊಂಡಿದ್ದ ಆರು ಚಿತ್ರಗಳ ಪೈಕಿ ‘ಫಾದರ್’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಆರಂಭವಾಗಿದೆ. ಉಳಿದ ಚಿತ್ರಗಳ ಚಿತ್ರೀಕರಣ ಪೂರ್ವ ಕೆಲಸಗಳು ಎಡೆ ಬಿಡದೆ ನಡೆಯುತ್ತಿವೆ.
ಹಾಗಾಗಿ ಬಿಡುವಿರದೆ ಮುಂಬೈ, ಚೆನ್ನೈಗೆ ಓಡಾಡಿಕೊಂಡಿರುವ ಆರ್.ಚಂದ್ರು ಖುಷಿಯ ಕ್ಷಣಗಳಲ್ಲಿಯೂ ಮಿಂದೆದ್ದಿದ್ದಾರೆ. ಏಕೆಂದರೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲದಿಂದ ಪ್ರಶಂಸನಾ ಪತ್ರ ಪಡೆಯುವುದು ಸಾಮಾನ್ಯ ವಿಷಯವೇ ಅಲ್ಲ.
ಮುಖ್ಯವಾಗಿ ಆರ್.ಚಂದ್ರು ಅವರ ಆರ್.ಸಿ.ಪ್ರೊಡಕ್ಷನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅದೇ ದಿನ ಮುಂಬೈನ ಅತಿರಥ ಮಹಾರಥರೆನಿಸುವ ಸಿನಿಮಾ ಉದ್ಯಮಿಗಳು ಹಾಜರಿದ್ದು ಆರ್.ಸಿ.ಪ್ರೊಡಕ್ಷನ್ ಗೆ ಶುಭ ಹಾರೈಸಿದ್ದಲ್ಲದೆ ಬೆಂಬಲ ಘೋಷಣೆ ಮಾಡಿದ್ದರು.
ಇದೇ ವೇಳೆ ‘ಕಬ್ಜ’ ಚಿತ್ರದ ಬಗ್ಗೆ ಬೇರೆ ಬಗೆಯ ವ್ಯಂಗ್ಯಭರಿತ ಮಾತುಗಳನ್ನಾಡಿದ ಕೆಲವರ ವಿರುದ್ಧ ಚಂದ್ರು ಹರಿ ಹಾಯ್ದಿದ್ದರು. ಅಲ್ಲದೆ ‘ನಾನು 20 ಕೋಟಿ ತೆರಿಗೆ ಕಟ್ಟಿದ್ದೇನೆ’ ಎಂದು ಹೇಳಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.
ಕನ್ನಡದ ಉತ್ತಮ ಚಿತ್ರಗಳನ್ನು ಪ್ರೋತ್ಸಾಹಿಸುವುದು ಇಂದಿನ ಅನಿವಾರ್ಯ ಹಾಗಿದ್ದರೂ ದೊಡ್ಡ ಚಿತ್ರ ಮಾಡಿದಾಗ ಇಷ್ಟೊಂದು ವ್ಯತಿರಿಕ್ತ ಪ್ರಹಸನಗಳು ಏಕೆ ಎಂದು ಪ್ರಶ್ನೆ ಮಾಡಿದ್ದರು.
ಆ ರೀತಿಯ ಎಲ್ಲಾ ನೋವುಗಳಿಗೆ ಉತ್ತರ ಸಿಕ್ಕಿದೆ. ಹಾಗಾಗಿ ಈಗ ಹೆಚ್ಚಿನ ಖುಷಿಯಲ್ಲಿರುವೆ ಎಂದು ಉತ್ತರಿಸಿದರು ಆರ್.ಚಂದ್ರು. ಈಗ ಅತ್ಯುತ್ತಮ ಚಿತ್ರಗಳನ್ನು ನೀಡುವುದೇ ನಮ್ಮ ಗುರಿ. ಆ ದಿಕ್ಕಿನಲ್ಲಿ ಆರ್.ಸಿ.ಪ್ರೊಡಕ್ಷನ್ ಮಹತ್ವದ ಹೆಜ್ಜೆ ಇಟ್ಟಿರುವುದು ಇದಕ್ಕೆ ಸಾಕ್ಷಿ ಎಂದು ನಕ್ಕರು ಚಂದ್ರು.
ಪ್ರಕಾಶ್ ರೈ ಹಾಗೂ ಡಾರ್ಲಿಂಗ್ ಕೃಷ್ಣ ಮುಖ್ಯ ಭೂಮಿಕೆಯಲ್ಲಿರುವ ‘ಫಾದರ್’ ಕೂಡ ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡುತ್ತದೆ. ಕಬ್ಜ ಚಿತ್ರದಲ್ಲಿ ಶಿವಣ್ಣ ಅವರ ಇರುವಿಕೆಯ ಕ್ಷಣಗಳು ಮಹತ್ವ ಎನಿಸಿದ್ದವು. ದೊಡ್ಡ ಸ್ಟಾರ್ ಗಳನ್ನು ಕಲೆ ಹಾಕಿ ಚಿತ್ರ ಮಾಡುವುದು ನನ್ನ ಫ್ಯಾಶನ್ ಎಂದು ಹೇಳುತ್ತಾ ಹೋದರು.