Snehapriya.com

June 7, 2025

ಅದೆಷ್ಟೋ ವಿಘ್ನಗಳ ದಾಟಿ ಜನರ ಮುಂದೆ ಬೈಪಾಸ್ ರೋಡ್

Social Share :

ಒಂದು ಊರಿನಿಂದ ಮತ್ತೊಂದು ಊರಿಗೆ ತಲುಪುವ ಸಮಯದಲ್ಲಿ ಹೆದ್ದಾರಿ ಬಿಟ್ಟು ಇರುವ ಹತ್ತಿರದ ದಾರಿಗೆ ‘ಬೈಪಾಸ್ ರೋಡ್’ ಎಂಬುದು ವಾಡಿಕೆ. ಆದರೆ ಬೇಗನೆ ನಿಗದಿತ ಸ್ಥಳ ತಲುಪಿಸಲು ನೆರವಾಗುವ ‘ಬೈಪಾಸ್ ರೋಡ್’ ಹೆಸರಿನ ಚಿತ್ರವೀಗ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಿದೆ..

ಭರತ್ ರಾಜ್ ಎಂ. ಹಾಗೂ ಸ್ನೇಹ ಬಳಗದ ಪ್ರಯತ್ನವಾಗಿ ಮೂಡಿ ಬಂದಿರುವ ಬೈಪಾಸ್ ರೋಡ್ ಈಗ ಬಿಡುಗಡೆಗೆ ಬಂದಿದೆ‌ ಎಂಬುದು ಚಿತ್ರ ತಂಡಕ್ಕೆ ಹರ್ಷದ ಸಂಗತಿ. ಹಾಗಾಗಿಯೇ ಜುಲೈ 21ರ ಗುರುವಾರ ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ.

ಚಿತ್ರವು 2017ರ ಹೊತ್ತಿಗೆ ಆರಂಭವಾಗಿ 2019ರ ಹೊತ್ತಿಗೆ ಚಿತ್ರವು ತಯಾರಾಯಿತಾದರೂ ಆನಂತರ ಬಂದ ಮಾರಣಾಂತಿಕ ಕೊವಿಡ್; ಚಿತ್ರದ ಆಶಯಗಳನ್ನೇ ನುಂಗಿ ಹಾಕಿತು ಎಂಬ ವಿವರಗಳನ್ನು ನೀಡಿತು ಚಿತ್ರತಂಡ.

ಈ ಚಿತ್ರ ಆರಂಭವಾದ ಸಮಯದಿಂದ ಎಷ್ಟೋ ಘಟನೆಗಳು ನಡೆದು ಹೋಗಿವೆ. ಅದರಲ್ಲಿ ನಟ ಉದಯ್ ದುರಂತದ ಮರಣವೂ ಸೇರಿದೆ. ಚಿತ್ರದ ಪ್ರಚಾರಕ್ಕೆ ಬರಬೇಕಾದ ಕಲಾವಿದರಿಗೆ ಚಿತ್ರದ ಹೆಸರೇ ಮರೆತು ಹೋಗಿದೆ. ಒಂದು ಚಿತ್ರ ಬಿಡುಗಡೆಗೆ ಹೆಚ್ಚು ಸಮಯ ತೆಗೆದುಕೊಂಡರೆ ಅದರಿಂದ ನಿರ್ಮಾಪಕ ಹೆಚ್ಚು ಬಳಲುತ್ತಾನೆ.

ಉತ್ತಮ ಆಶಯಗಳ ಜೊತೆ ಸಿನಿಮಾ ಮಾಡಲು ಬರುವ ನಿರ್ಮಾಪಕನಿಂದ ಎಷ್ಟೋ ಜನರ ಬದುಕು ನಡೆಯುತ್ತದೆ. ಆದರೆ ಕೊನೆಗೆ ನಿರ್ಮಾಪಕ ಅನಾಥನಾಗುತ್ತಾನೆ.

ಇದು ಕನ್ನಡ ಚಿತ್ರರಂಗದ ಬಹಳಷ್ಟು ಜನರ ಸ್ಥಿತಿ ಎಂಬುದು ನಿಜವೇ.. ಅದೇ ಪರಿಸ್ಥಿತಿ ಎದುರಿಸಿದ ತಂಡ ಈಗ ಮೈ ಕೊಡವಿ ಎದ್ದು ಒಂದು ಒಳ್ಳೆ ರೀತಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆ ನಡೆಸಿದೆ.


ನಿರ್ಮಾಪಕರಾದ ಎಂ.ಭರತ್ ರಾಜ್ ಹಾಗೂ ಮಹೇಶ್ ಬಿ.ಎನ್. ನಿರ್ದೇಶಕ ಎಸ್.ಬಿ.ಶ್ರೀನಿವಾಸ್, ಮುಖ್ಯ ಪಾತ್ರದಲ್ಲಿ ನಟಿಸಿರುವ ಭರತ್ ಕುಮಾರ್, ವಿತರಕ ಮಂಜುನಾಥ್ ಮಾಧ್ಯಮಗಳಿಗೆ ವಿವರ ನೀಡಿದರು.

ಒಂದು ಜೋಡಿ ಕಾರಿನಲ್ಲಿ ಬೈಪಾಸ್ ರಸ್ತೆಯಲ್ಲಿ ಹೋಗುವಾಗ.. ಕಥೆಯಲ್ಲಿ ಏಕಾಏಕಿ ತಿರುವು ಕಾಣುತ್ತದೆ. ಅದೇ ಚಿತ್ರದ ಮುಖ್ಯಾಂಶ. ಇಲ್ಲಿ ಗಂಡ ಹೆಂಡತಿ ನಡುವೆ ಅನೋನ್ಯತೆ ಬದಲು ವಿಷಕಾರಕ ಮನಸ್ಸು ಇರುತ್ತದೆ ಎಂಬ ವಿವರ ಕೊಟ್ಟವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಭರತ್ ಕುಮಾರ್.

ತಿಲಕ್, ಚಿಕ್ಕಣ್ಣ, ಮಾಸ್ಟರ್ ಆನಂದ್
ತಬಲ ನಾಣಿ, ಉದಯ್ ಮೊದಲಾದವರ ತಾರಾಗಣವಿದೆ. ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ವಿಜಯ್ ಕೃಷ್ಣ ಸಂಗೀತವಿದೆ ಎಂಬ ವಿವರವೂ ಬಂತು.

ಜುಲೈ 29 ರಂದು ಚಿತ್ರ ಬಿಡುಗಡೆ ಕಾಣುತ್ತಿದೆ. ವಿಕ್ರಾಂತ್ ರೋಣದಂತಹ ದೊಡ್ಡ ಚಿತ್ರವಿದ್ದರೂ ನಮಗೆ ಯಾವುದೇ ತೊಂದರೆಯಾಗದು ಎಂದು ಸಮರ್ಥಿಸಿಕೊಂಡರು ವಿತರಕ ಮಂಜುನಾಥ್.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *