ಇದು ಖಂಡಿತಾ ಪ್ರೇಮ ಕಥೆ ಅಲ್ಲ; ಆದರೆ ಜೂಲಿಯೆಟ್ ಎಂಬುದು ಚಿತ್ರದ ಹೆಸರು. ಅಸಹಾಯಕ ಹೆಣ್ಣು ಮಗಳು ತೊಂದರೆ ಕೊಟ್ಟವರ ವಿರುದ್ಧ ಹೋರಾಡುವ ಕಥೆ.
ದಿಟ್ಟ ಹೆಣ್ಣಿನ ಪಾತ್ರದಲ್ಲಿ ‘ಪ್ರೇಮಂ ಪೂಜ್ಯಂ’ ಖ್ಯಾತಿಯ ಬೃಂದಾ ಆಚಾರ್ಯ ನಟಿಸಿದ್ದಾರೆ. ಪಶ್ಚಿಮ ಘಟ್ಟಗಳ ಕಾಡಿನ ನಡುವೆ ಸಾಗಿದೆ ಈ ‘ಜೂಲಿಯೆಟ್ 2’ ಚಿತ್ರೀಕರಣ ನಡೆದಿದೆ.
ಇದೇ 24 ರಂದು (ಫೆ.24) ಚಿತ್ರವು ಬಿಡುಗಡೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಈಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಕಂಡಿತು. ಉತ್ತಮ ಕಥೆಯ ಚಿತ್ರಗಳು ಗೆಲ್ಲುತ್ತಿವೆ. ನಮ್ಮ ಈ ಚಿತ್ರ ಉತ್ತಮ ಕಥೆಯಾಧಾರಿತ ಚಿತ್ರವಾಗಿದೆ ಎಂದರು ನಿರ್ದೇಶಕ ವಿರಾಟ್ ಬಿ.ಗೌಡ.
ಆನಂದ್ ಆಡಿಯೋ ಮೂಲಕ ಟ್ರೈಲರ್ ಬಿಡುಗಡೆಗೊಂಡಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ ಮತ್ತು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯನ್ನೂ ಪಡೆಯುತ್ತಿದೆ ಎಂಬ ವಿವರ ಕೊಟ್ಟರು.
ಇಲ್ಲಿ ಜ್ಯೂಲಿಯೆಟ್ ಇದ್ದರೂ ರೋಮಿಯೋ ಇರುವುದಿಲ್ಲ.. ತೊಂದರೆ ಕೊಟ್ಟವರ ವಿರುದ್ಧ ಅಲ್ಲೇ ಸೇಡು ತೀರಿಸಿಕೊಳ್ಳುವ ಕಥೆ. ಈ ವಿಭಿನ್ನ ಕಥಾ ಹಂದರ ನಿಜಕ್ಕೂ ಪ್ರೇಕ್ಷಕರನ್ನು ಸೆಳೆಯ ಬಲ್ಲ ನಂಬಿಕೆ ನಮ್ಮದು ಎಂದರು ನಿರ್ದೇಶಕರು.
ಮುಖ್ಯವಾಗಿ ಅಪ್ಪ – ಮಗಳ ಬಾಂಧವ್ಯದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿವೆ. ಬೆಳ್ತಂಗಡಿ ಬಳಿಯ ಪಶ್ಚಿಮಘಟ್ಟದ ಕಾಡೊಂದರಲ್ಲೇ ಹೆಚ್ಚಿನ ಚಿತ್ರೀಕರಣ ನಡೆಸಲಾಗಿದೆ ಎಂದು ಹೇಳುತ್ತಾ ಹೋದರು ನಿರ್ದೇಶಕ ವಿರಾಟ್ ಬಿ ಗೌಡ.
ನಾವು ರಕ್ತ ಹರಿಸಿ ಈ ಚಿತ್ರವನ್ನು ಮಾಡಿದ್ದೇವೆ ಎಂದರು ಬೃಂದಾ ಆಚಾರ್ಯ. ಏಕೆಂದರೆ ಆ ಕಾಡಿನಲ್ಲಿ ಜಿಗಣೆ ಕಾಟ. ಅವು ಕಚ್ಚಿದಾಗ ಚಿಮ್ಮುತ್ತಿದ್ದ ರಕ್ತ ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ ಎಂದರು. ಈ ಚಿತ್ರದಲ್ಲಿ ನನಗೆ ವಿಶೇಷ ಪಾತ್ರ ನೀಡಿರುವುದು ಸಂತಸ ನೀಡಿದೆ ಎಂದರು.
ಚಿತ್ರದಲ್ಲಿ ಅಭಿನಯಿಸಿರುವ ಶ್ರೀಕಾಂತ್ ಹಾಗೂ ರಾಯ್ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಲಿಖಿತ್ ಆರ್ ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ ಹಾಗೂ ಶ್ಯಾಂಟೋ ವಿ.ಆಂಟೋ ಛಾಯಾಗ್ರಹಣವಿದೆ.
ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.