ರೇಟಿಂಗ್ : 3/5
ನಿರ್ಮಾಣ : ಸುಖೀ ಹಾಗೂ ಭರತ್ ವರ್ಷ್
ನಿರ್ದೇಶನ : ಭರತ್ ವರ್ಷ್
ಉಡಾಫೆ ಜೀವನ ಅವನತಿಯ ಧ್ಯಾನ
ಬದುಕಿನ ಮೌಲ್ಯಗಳನ್ನು ನಿರ್ಲಕ್ಷಿಸಿ ಉಡಾಫೆಯ ಜೀವನ ನಡೆಸುವ ಮೂವರು ಯುವಕರ ಬದುಕಿನಲ್ಲಿ ಎರಡು ವಿರಾಮಗಳು ಜೀವನದ ಪಾಠ ಕಲಿಸುತ್ತವೆ.
ಒಂದು ಅಲ್ಪ ವಿರಾಮ; ಈ ವೇಳೆ ಹಳ್ಳಿ ತೊರೆದು ಪಟ್ಟಣ ಸೇರುತ್ತಾರೆ; ಮತ್ತೊಂದು ಪೂರ್ಣ ವಿರಾಮ. ಕೆಟ್ಟು ಹಳ್ಳಿ ಸೇರುತ್ತಾರೆ. ಎರಡೂ ಬದುಕಿನ ಪಾಠ ಎಂಬುದಾದರೆ ಅದರಲ್ಲಿ ಬರುವ ಚಿತ್ರ ವಿಚಿತ್ರ ನಡವಳಿಕೆ ಇತ್ಯಾದಿಗಳನ್ನು ಸಹಿಸಿಕೊಳ್ಳಲೇ ಬೇಕು.
ಗಣೇಶ್ ಟಿ, ಗಣೇಶ್ ಯು, ಗಣೇಶ್ ಎಸ್ ಹೀಗೆ ಮೂವರ ಹೆಸರೂ ಗಣೇಶ್; ಮೂವರ ನಡವಳಿಕೆಯೂ ಒಂದೇ. ಶಾಲೆಗೆ ಚಕ್ಕರ್ ಹೊಡೆದು ಮಜಾ ಮಾಡುವುದು; ಮಾರ್ಕ್ ಕಾರ್ಡ್ ಗೆ ಪೋಷಕರ ಸಹಿ ಫೋರ್ಜರಿ ಮಾಡುವುದು ಹೀಗೆ ಬಾಲ್ಯದಲ್ಲೇ ಆಗುವ ತುಂಟಾಟ ಯುವಕರಾದ ಮೇಲೂ ಮುಂದುವರಿಯುತ್ತದೆ.
ಯಾವುದನ್ನೂ ಗಂಭೀರವಾಗಿ ಪರಿಗಣಿಸದೇ ಉಡಾಫೆಯಿಂದ ವರ್ತಿಸುವುದರಿಂದ ಮೂವರಿಗೆ ಹಳ್ಳಿ ಬಿಡುವ ಪ್ರಸಂಗ ಎದುರಾಗುತ್ತದೆ. ಮುಂದೆ ಪಟ್ಟಣದಲ್ಲಿಯೂ ಇವರ ಜ್ಞಾನಕ್ಕೆ ಯಾವ ಉದ್ಯೋಗವೂ ದೊರೆಯದೇ ಆಶ್ರಯ ಕೊಟ್ಟ ಸ್ನೇಹಿತನಿಂದಲೇ ಛೀಮಾರಿ ಹಾಕಿಸಿಕೊಂಡು ಮತ್ತೆ ಹಳ್ಳಿಗೆ ವಾಪಾಸ್ಸಾಗುತ್ತಾರೆ.
ಅಲ್ಲಿ ಹೆತ್ತವರು ಅದೇ ಪ್ರೀತಿ ಕೊಡುತ್ತಾರೆ. ಇಷ್ಟು ದಿನ ಕಳೆದುಕೊಂಡಿದ್ದು ಗಳಿಸಿದಂತೆ ಖುಷಿಯಾಗಿ ಬದಲಾಗಲು ದಾರಿ ಹುಡುಕುತ್ತಾರೆ. ಉಡಾಫೆಯ ಬದುಕಿನ ದರ್ಶನ ಬೇಕಿದ್ದರೆ ಈ ಚಿತ್ರವನ್ನು ನೋಡಬಹುದು.
ಆದರೆ ಜೀವನವನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ ಏನಾಗುತ್ತದೆ ಎಂಬುದರ ವಾಸ್ತವ ಚಿತ್ರಣವಿದ್ದರೂ ಕೆಲವೆಡೆ ಬರುವ ಅನಾವಶ್ಯಕ ಬೋಧನೆ ಇರಿಸು ಮುರಿಸು ಉಂಟು ಮಾಡಿದರೆ ಅದು ಅಚ್ಚರಿ ಅಲ್ಲ.
ಚಿತ್ರಕಥೆಯನ್ನು ಬದಲಾಯಿಸಿ ಒಂದು ತಾರ್ಕಿಕ ಅಂತ್ಯ ನೀಡುವ ಅವಕಾಶವನ್ನು ನಿರ್ದೇಶಕರು ಸಂಪೂರ್ಣ ಕೈ ಚೆಲ್ಲಿರುವುದು ಎದ್ದು ಕಾಣುತ್ತದೆ.
ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ ಹಾಗೂ ಸುಕಿ ನಟನೆಯಲ್ಲಿ ಗಮನ ಸೆಳೆಯುತ್ತಾರೆ. ಜೊತೆಗೆ ಚರಿತ್ರಾ ರಾವ್, ಸಹನ ಆರಾಧ್ಯ ಪಾತ್ರಗಳು ಸಹಕಾರಿಯಾಗಿವೆ.
ರಾಜ್ ಕಾಂತ್ ಛಾಯಾಗ್ರಹಣ, ವಿಕಾಶ್ ವಸಿಷ್ಠ ಸಂಗೀತ ಚಿತ್ರಕ್ಕೆ ಪೂರಕ.