ಜಯಣ್ಣ ನಿರ್ಮಾಣದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಹಾಗೂ ಹರ್ಷ ನಿರ್ದೇಶನದ ಚಿತ್ರ ‘ಭಜರಂಗಿ-2’ ಪಾನ್ ಇಂಡಿಯಾ ಸಿನಿಮಾ ಆಗುವತ್ತ ಗಮನ ಸೆಳೆಯುತ್ತಿದೆ..
ಇದೇ ನವೆಂಬರ್ 29ರಂದು ಬಿಡುಗಡೆ ಕಾಣುತ್ತಿರುವ ‘ಭಜರಂಗಿ-2’ ಟ್ರೈಲರ್ ನೋಡಿದವರು ಓಹ್ ಇದು ನಿಜಕ್ಕೂ ಪಾನ್ ಇಂಡಿಯಾ ಸಿನಿಮಾವಾಗಬೇಕು ಎಂದು ಉದ್ಘರಿಸಿದ್ದಾರೆ. ಅದ್ದೂರಿತನದಲ್ಲಿ ಸಾಟಿ ಇಲ್ಲದಂತೆ ನಿರ್ಮಾಣವಾಗಿರುವ ಚಿತ್ರದ ಮುಖ್ಯ ವಿಶೇಷತೆ ಏನೆಂದರೆ ಅದು ಕಥೆಯಲ್ಲಿ ‘ವೈದ್ಯೋ ನಾರಾಯಣ ಹರಿ’ ಎಂಬ ಹಂದರವನ್ನು ಹೊಂದಿರುವುದು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಬರುವ ಧನ್ವಂತರಿ ಇಲ್ಲಿನ ಭಾಗವಾಗಿರುವುದು.
ಕೊರೊನಾ ಕಾಲಘಟ್ಟದಲ್ಲಿ ಈ ಚಿತ್ರ ಅತ್ಯಂತ ಪ್ರಸ್ತುತ ಮತ್ತು ಆಪ್ತವಾಗುತ್ತದೆ. ಏಕೆಂದರೆ ಇಡೀ ಜಗತ್ತು ಯಾರೂ ಕಂಡರಿಯದ ಔಷಧಗಳ ಅನ್ವೇಷಣೆಯಲ್ಲಿದೆ. ಅಲ್ಲದೆ ಚಿತ್ರ ನೋಡಿದವರು ಥ್ರಿಲ್ಲಾಗಿದ್ದಾರೆ. ಅಭಿಮಾನಿಗಳು ಖುಷಿಯಾಗಿದ್ದಾರೆ.
ಈಚೆಗೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟೆಂಡ್ ಆವರಣದಲ್ಲಿ ನಡೆದ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಸಂಭ್ರಮವೇ ಮನೆ ಮಾಡಿತ್ತು. ಪವರಸ್ಟಾರ್ ಪುನೀತ್ ರಾಜ್ಕುಮಾರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಇತರ ಗಣ್ಯರ ಉಪಸ್ಥಿತಿಯಿಂದ ಕಾರ್ಯಕ್ರಮ ಹೆಚ್ಚು ಹೊಳಪಿನಿಂದ ಕಂಗೊಳಿಸಿತು.
ನಟಿಯರಾದ ಭಾವನಾ, ಶೃತಿ, ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ, ಕಲಾ ನಿರ್ದೇಶಕ ರವಿ ಸಂತೆಹಕ್ಳು, ಛಾಯಾಗ್ರಾಹಕ ಸ್ವಾಮಿ ಜೆ ಗೌಡ, ನಟರಾದ ಗಿರೀಶ್, ಭಜರಂಗಿ ಲೋಕಿ,
ಜಯಣ್ಣ ನಿರ್ಮಾಣ ತಂಡದ ನಿರ್ದೇಶಕರಾದ ವೃಷಭ್ ಶೆಟ್ಟಿ
ಸಂತೋಷ್ ಆನಂದ್ ರಾಮ್
ತೂಗದೀಪ್ ದಿನಕರ್, ಡಾ.ಸೂರಿ ಹಾಗೂ ಇತರ ರು ವೇದಿಕೆಗೆ ರಂಗು ತಂದರು.
ನಿರ್ದೇಶಕ ಹರ್ಷ ಅತ್ಯಂತ ಭಾವುಕರಾಗಿದ್ದರು. ಶಿವಣ್ಣ ಮಗುವಿನ ಥರಾ.. ಅವರು ಕೊಟ್ಟ ಬೆಂಬಲ ಜೀವನದಲ್ಲಿ ಮರೆಯುವುದು ಸಾಧ್ಯವಿಲ್ಲ ಎಂದರು. ಪ್ರತಿಯೊಬ್ಬರ ಸಹಕಾರ ನೆನೆದರು.
ಜಯಣ್ಣ ಮತ್ತು ಭೋಗಣ್ಣ ವೇದಿಕೆಗೆ ಬಂದರಾದರು ಮಾತನಾಡಲು ಸಂಕೋಚ ವ್ಯಕ್ತಪಡಿಸಿದರು. ಒಂದು ರೀತಿಯಲ್ಲಿ ಜಯಣ್ಣ ಅತ್ಯಂತ ಉತ್ಸಾಹದಲ್ಲಿ ಎಲ್ಲರನ್ನು ಮಾತನಾಡಿಸಿದ್ದೂ ಕಂಡು ಬಂತು.
ಶಿವಣ್ಣ, ಯಶ್ ಹಾಗೂ ಪುನೀತ್ ವೇದಿಕೆಯಲ್ಲಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತು.