ಕೋವಿಡ್ ಅಟ್ಟಹಾಸದಿಂದ ಸಿನಿಮಾ ಮಂದಿರಗಳು ಮುಚ್ಚಿ ಹೋದವು.. ಜಗತ್ತಿನ ಮನರಂಜನಾ ಕ್ಷೇತ್ರ ಬಡವಾಯಿತು. ಈ ಸಂದರ್ಭದಲ್ಲಿ ಚಿತ್ರರಂಗ ಅಸಹಾಯಕತೆಯಲ್ಲಿ ನರಳಿತು.
ಲಾಕ್ ಡೌನ್ ನ ಬಳಿಕ ಅದರ ತೆರವು ಹಂತ ಹಂತವಾಗಿದ್ದಾಗ್ಯೂ ಚಿತ್ರಮಂದಿರಗಳ ತೆರವಿಗೆ ಬಹಳವೇ ಸಮಯ ತೆಗೆದುಕೊಂಡಿತು. ಇದೀಗ ಕೇಂದ್ರ ಹೊಸ ಮಾರ್ಗಸೂಚಿಗಳ ಜೊತೆಗೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಇದರಿಂದ ಮನರಂಜನಾ ಕ್ಷೇತ್ರದಲ್ಲೊಂದು ಹೊಸ ಹುರುಪು ಮೂಡಿದೆ. ನಿಂತು ಹೋದ ಅನೇಕ ಚಿತ್ರಗಳು ಹೊಸ ಬಗೆಯಲ್ಲಿ ಬಿಡುಗಡೆಗೆ ಸಿದ್ದವಾಗಿವೆ.
ಆದರೆ ಮೊದಲೇ ನಿರ್ಮಾಣಗೊಂಡು ಬಿಡುಗಡೆಗೆ ಕಾಯ್ದುಕೊಂಡಿದ್ದ ‘ಬೆಂಕಿಯ ಬಲೆ ಪ್ರೀತಿಯ ಕೊಲೆ’ ಎಂಬ ಚಿತ್ರ ಪ್ರೀಮಿಯರ್ ಶೋ ಮುಗಿಸಿಕೊಂಡಿದೆ. ಆ ಮೂಲಕ ಲಾಕ್ ಡೌನ್ ಬಳಿಕ ಪ್ರೇಕ್ಷಕರಿಗೆ ಪ್ರದರ್ಶನಗೊಂಡ ಪ್ರಥಮ ಚಿತ್ರವಾಗಿದೆ.
80ರ ದಶಕದಲ್ಲಿ ಅನಂತ್ ನಾಗ್ ಹಾಗೂ ಲಕ್ಷ್ಮಿ ಅವರ ಮನೋಜ್ಞ ಅಭಿನಯದಲ್ಲಿ ಹಾಗೂ ದೊರೆ-ಭಗವಾನ್ ಅವರ ನಿರ್ದೇಶನಲ್ಲಿ ಮೂಡಿ ಬಂದಿದ್ದ ಬೆಂಕಿಯ ಬಲೆ ಎಂಬ ಚಿತ್ರ ಮಾನಸದಲ್ಲಿ ಇಂದಿಗೂ ಉಳಿದು ಹೋಗಿದೆ. ಇದೀಗ ಅದೇ ಹೆಸರಿನಲ್ಲಿ ಮೈಸೂರಿನ ಶಿವಾಜಿ ನಿರ್ಮಿಸಿರುವ ಚಿತ್ರದ ಹೆಸರೂ ಬೆಂಕಿಯ ಬಲೆ. ಇದಕ್ಕೆ ಪ್ರೀತಿಯ ಕೊಲೆ ಎಂಬ ಟ್ಯಾಗ್ ಲೈನ್ ಇದೆ. ಶಿವಾಜಿ ಅವರೇ ಇದನ್ನು ನಿರ್ದೇಶಿಸಿದ್ದಾರೆ. ಸಾಮಾಜಿಕ ಸಂದೇಶ ಹೊಂದಿರುವ ಬೆಂಕಿಯಬಲೆ ಬೆಂಗಳೂರು ಕಲಾವಿದರ ಸಂಘದ ಭವನದಲ್ಲಿ ಪ್ರದರ್ಶನಗೊಂಡಿತು. ಬೆಂಕಿಯಬಲೆ 5 ಹಾಡುಗಳು ಹಾಗೂ 3 ಸಾಹಸ ದೃಶ್ಯಗಳನ್ನು ಒಳಗೊಂಡ ಸಾಂಸಾರಿಕ ಕಥೆಯನ್ನೊಳಗೊಂಡ ಚಿತ್ರವಾಗಿದೆ ಎಂಬ ವಿವರಣೆ ನಿರ್ದೇಶಕರಿಂದ ಬಂತು. ಆಘಾತ, ಪರ್ಚಂಡಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಶಿವಾಜಿ ಈ ಚಿತ್ರದ ಮೂಲಕ ನಿರ್ದೇಶಕನೂ ಆಗಿದ್ದಾರೆ. ಜೊತೆಗೆ ಪ್ರಮುಖ ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರು, ಬನ್ನೂರು ಸುತ್ತಮುತ್ತ ನಡೆದಿದೆ. ಗ್ರಾಮೀಣ ಪರಿಸರದಲ್ಲಿ ನಡೆಯುವ ಹಳ್ಳಿ ರಾಜಕೀಯದ ಕಥಾಹಂದರವನ್ನು ಹೊಂದಿದ ಈ ಚಿತ್ರದಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಉತ್ತಮ ಸಂದೇಶವಿದೆ. ಕ್ಯಾನ್ಸರ್ ತಗುಲಿಕೊಂಡ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಹೋರಾಡುವ ವಿದ್ಯಾವಂತ ಯುವತಿಯಾಗಿ ನಟಿ ಪ್ರೀತಿ ಯಶು ಅಭಿನಯಿಸಿದ್ದಾರೆ. ಉಳಿದಂತೆ ನಿರಂಜನ್ ದೇಶಪ್ರೇಮಿ, ಸುಮ, ಪವಿತ್ರ ಮುಂತಾದ ಕಲಾವಿದರು ಈ ಚಿತ್ರದ ಇತರೆ ಪಾತ್ರಗಳಲ್ಲಿದ್ದಾರೆ.
ಶಿವಾಜಿ ಕ್ಯಾನ್ಸರ್ ನಿಂದ ತಾಯಿಯವರನ್ನು ಕಳೆದುಕೊಂಡು ಅನುಭವಿಸಿದ ನೋವನ್ನು ವರ್ಣಿಸಿ; ಚಿತ್ರದಿಂದ ಬರುವ ಹಣವನ್ನು ಕ್ಯಾನ್ಸರ್ ಪೀಡಿತರ ನೆರವಿಗೆ ನೀಡುತ್ತಿರುವುದಾಗಿ ಹೇಳಿದರು. ಮುಖ್ಯ ಪಾತ್ರದಲ್ಲಿರುವ ಪ್ರೀತಿ ಯಶುಗೆ ಎಲ್ಲವೂ ವಿಶೇಷ. ಗಂಡು ದಿಕ್ಕಿಲ್ಲದ ಮನೆಯ ಹೆಣ್ಣು ಮಕ್ಕಳನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ, ಆಕೆ ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಯಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾಳೆ ಎಂಬುದು ನನ್ನ ಪಾತ್ರ ಎಂದು ಹೇಳಿಕೊಂಡರು. ಮತ್ತೊಬ್ಬ ನಟಿ ಪವಿತ್ರಾ, ನಟ ನಿರಂಜನ್ ಪಾತ್ರಗಳ ಬಗ್ಗೆ ಹೇಳಿಕೊಂಡರು. ಮಂಜುನಾಥ ಮಿರ್ಲೆ, ಶಿವಾಜಿ ಸಹೋದರ ಲೋಕೇಶ್ ಸಹ ಚಿತ್ರದ ಬಗ್ಗೆ ಹೇಳಿಕೊಂಡರು.
ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಿವಾಜಿ, ಊರಿನ ಶ್ರೀಮಂತ ವ್ಯಕ್ತಿ ಸುಂದರೇಗೌಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.