ಇದು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಹಾಗಾಗಿ ವಿಭಿನ್ನ ಕಥಾ ಹಂದರವನ್ನು ಹೊಂದಿದೆ..
ಹಾಗೆಂದು ಹೇಳಿಕೊಂಡಿತು ಚಿತ್ರತಂಡ. ಅಂದ ಹಾಗೆ ಈ ಹಿಂದೆ ‘ಗೌಡ್ರುಸೈಕಲ್’ ಎಂಬ ಗ್ರಾಮೀಣ ಸೊಗಡಿನ ಚಿತ್ರವನ್ನು ಮಾಡಿದ್ದ ತಂಡದ ಹೆಚ್ಚಿನ ಮಂದಿ ಸೇರಿ ತಯಾರಿಸಿದ ಮತ್ತೊಂದು ಚಿತ್ರವೇ ಅದು..
ಹೆಸರು ಬಹುಕೃತ ವೇಷಂ..!
ಬಿಗ್ಬಾಸ್ ಖ್ಯಾತಿಯ ವೈಷ್ಣವಿಗೌಡ ಹಾಗೂ ಗೌಡ್ರುಸೈಕಲ್ ನ ಮುಖ್ಯ ಪಾತ್ರಧಾರಿ ಶಶಿಕಾಂತ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ಈ ಹಿಂದೆ ಗೌಡ್ರುಸೈಕಲ್ ಚಿತ್ರಕ್ಕೂ ನಿರ್ದೇಶಕರಾಗಿದ್ದರು. ಆದರೆ ಈಚೆಗೆ ನಡೆದ ಚಿತ್ರದ ಪ್ರಚಾರಕ್ಕೆ ಅವರು ಗೈರು ಹಾಜರಿದ್ದರು. ಏಕೆಂದರೆ ಅವರು ವಿವಾಹವಾಗುತ್ತಿದ್ದಾರೆ ಎಂಬ ಉತ್ತರ ನೀಡಿತು ಚಿತ್ರತಂಡ.
ಶಶಿಕಾಂತ್ ಪಾತ್ರದಲ್ಲಿ ಎರಡು ಶೆಡ್ ಇರುತ್ತದೆ. ಡಿಲೇರಿಯಂ ಫೋಬಿಯಾ ಅಂದರೆ ವಿಚಿತ್ರ ಪರಿಕಲ್ಪನೆಯಲ್ಲಿ ನರಳುವ ವ್ಯಕ್ತಿಯ ಪಾತ್ರವದು.. ಈ ಕಥೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೊದಲು ಒಪ್ಪಲಿಲ್ಲ, ನಂತರ ನಮ್ಮ ಹಿಂದಿನ ಚಿತ್ರಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ತಂದು ತೋರಿಸಿದಾಗ ಒಪ್ಪಿದರು ಎಂಬ ಮಾಹಿತಿಗಳನ್ನು ಹಂಚಿಕೊಂಡರು ಶಶಿಕಾಂತ್.
ಕಥೆ ಬರೆಯುವಾಗ ಇನ್ನೊಂದು ಪಾತ್ರಕ್ಕೆ ವೈಷ್ಣವಿ ಗೌಡ ಅವರೇ ಸೂಕ್ತ ಅಂದುಕೊಂಡಿದ್ದೆವು, ಅವರ ಬಳಿ ಹೋಗಿ ಕಥೆ ಹೇಳಿದಾಗ ಅವರೂ ಸಹ ಒಪ್ಪಿದರು. ಚಿತ್ರಕ್ಕೆ 70 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ವೈಷ್ಣವಿಗೌಡ ಅವರು ಸಿಂಗಲ್ ಶಾಟ್ನಲ್ಲಿ ಅದ್ಭುತವಾಗಿ ಅಭಿನಯ ನೀಡಿದ್ದಾರೆ ಎಂದೂ ಮಾಹಿತಿ ನೀಡಿತು ಚಿತ್ರತಂಡ.
ಅಧ್ಯಾಯ್ ತೇಜ್ ಕಥೆ, ಚಿತ್ರಕಥೆ ಬರೆದಿದ್ದು, ಸ್ನೇಹಿತನೊಬ್ಬನಿಗೆ ಈ ರೀತಿಯ ಖಾಯಿಲೆ ಇತ್ತು. ಪ್ರತಿದಿನ ಅವನ ಮೇಲೆ ಅವನೇ ಫೈಟ್ ಮಾಡುತ್ತಿದ್ದ ಇದನ್ನು ನೋಡಿ ಅರಿತು ಚಿತ್ರಕಥೆ ಮಾಡಲಾಯಿತು. ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲವೂ ಇದರಲ್ಲಿದೆ ಎಂದರು.
ಎಚ್. ನಂದ ಹಾಗೂ ಡಿ. ಕೆ. ರವಿ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿಂಗಪೂರ್ ನಲ್ಲಿ ನೆಲೆಸಿರುವ ವೈಶಾಖ್ ವಿ.ಭಾರ್ಗವ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿರಣ್ ಕೃಷ್ಣಮೂರ್ತಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಹರ್ಷಕುಮಾರ್ ಗೌಡ ಛಾಯಾಗ್ರಹಣ, ಜ್ಞಾನೇಶ್ ಬಿ. ಸಂಕಲನ ಚಿತ್ರಕ್ಕಿದೆ ಎಂಬ ವಿವರಗಳು ಬಂದವು..
ವಿಜಯ್ ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಅನುಕೂಲಕ್ಕೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.