ಇದು ಸತ್ಯ ಘಟನೆ ಆಧರಿಸಿದ ಚಿತ್ರ. ಹಿರಿಯ ನಿರ್ದೇಶಕ ಕೆ.ವಿ.ರಾಜು ಚಿತ್ರಕಥೆ ಬರೆದಿದ್ದಾರೆ. ಮುಖ್ಯವಾಗಿ ಇದು ನಿಗೂಢ ಅಂಶಗಳನ್ನು ಹೊಂದಿದೆ. ಹಾಗಾಗಿ ಈ ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಾಗಿದೆ..
ಅದು ಸತ್ಯಂ..!
ದಿವಂಗತ ಆನೇಕಲ್ ಬಾಲರಾಜು ಅವರ ಪುತ್ರ ಸಂತೋಷ್ ಬಾಲರಾಜ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತದ ದೊಡ್ಡ ದೊಡ್ಡ ಕಲಾವಿದರ ಬಳಗವೇ ಇದೆ. ಸಂತೋಷ್ ಎದುರು ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ನಟಿಸಿದ್ದಾರೆ.
ಮುಖ್ಯವಾಗಿ ಇದು ನಲವತ್ತು ವರ್ಷಗಳ ಹಿಂದೆ ರಾಜ ಮನೆತನವೊಂದರಲ್ಲಿ ನಡೆದ ನೈಜ ಘಟನೆ. ಒಂದೇ ಒಂದು ಕಳಂಕ ರಾಜ ಮನೆತನದ ಇಡೀ ವಂಶವೇ ಬಲಿಯಾಗುವಂತೆ ಮಾಡುತ್ತದೆ ಎಂಬುದು ಕಥೆಯ ಸಾರಾಂಶ.
ಇಲ್ಲಿ ಮುಖ್ಯ ಪಾತ್ರದಲ್ಲಿ ಸಂತೋಷ್ ಅವರ ಪಾತ್ರಕ್ಕೆ ಎರಡು ಬಗೆಯ ವ್ಯಕ್ತಿತ್ವ ಇರುತ್ತವೆ. ಮನೋಭಾವ ಬದಲಾಗುತ್ತಿರುತ್ತದೆ. ಹಾಗಾಗಿ ಇದು ಆಪ್ತ ಮಿತ್ರದ ರೀತಿಯ ಕಥೆಯೇ ಎಂಬುದಕ್ಕೆ ಸಿನಿಮಾ ನೋಡಿ ಎಂಬ ಉತ್ತರ ಬಂತು..
ಅಲ್ಲದೆ ಚಿತ್ರದಲ್ಲಿ ದಕ್ಷಿಣ ಕನ್ನಡ ಭಾಗದ ಭೂತ ಕೋಲ ವಿಶಿಷ್ಟ ಬಗೆಯಲ್ಲಿ ಸೇರಿಕೊಂಡಿದೆ. ಹಾಗಾಗಿ ಹೆಚ್ಚು ಕುತೂಹಲ ಹುಟ್ಟಿಸಿರುವ ಚಿತ್ರವಿದು.
ಚಿತ್ರದಲ್ಲಿ ನಿಗೂಢ ಸತ್ಯವೊಂದು ವ್ಯಕ್ತವಾಗುತ್ತದೆ. ಅದೇ ಸತ್ಯಂ. ಚಿತ್ರದಲ್ಲಿ ವಿವಿಧ ಆಯಾಮಗಳಿವೆ. ದಿವಂಗತ ಕೆ.ವಿ.ರಾಜು ಅವರು ಚಿತ್ರಕಥೆ ಬರೆದಿರುವುದು ನಮ್ಮ ಪುಣ್ಯ ಎಂದರು ನಿರ್ದೇಶಕ ಅಶೋಕ್ ಕಡಬ.
ಅದು ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ. ರಾಜ್ ಕುಟುಂಬದ ಎಸ್.ಎ.ಗೋವಿಂದರಾಜ್ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಪದಾಧಿಕಾರಿಗಳಾದ ದುನಿಯಾ ಸಿದ್ದರಾಜು, ಕುಶಾಲ್ ರಾಜ್ ಮೊದಲಾದವರು ಪಾಲ್ಗೊಂಡಿದ್ದರು.
ಈ ಚಿತ್ರದ ನಿರ್ಮಾಣ ಹಂತದಲ್ಲಿ ಸ್ಮೇಹಿತರಾದ ಆನೇಕಲ್ ಬಾಲರಾಜ್ ಹೆಚ್ಚಿನ ಸಹಕಾರ ನೀಡಿದ್ದನ್ನು ಸ್ಮರಿಸಿ ಕೊಂಡರು ನಿರ್ಮಾಪಕ ಮಹಂತೇಶ್ ವಿ.ಕೆ.
ನಾವು ಹೆಚ್ಚಿನ ಪರಿಶ್ರಮ ಹಾಕಿ ಮಾಡಿದ್ದೇವೆ. ಸುಮನ್, ಪವಿತ್ರ ಲೋಕೇಶ್, ಸಯಾಜಿ ರಾವ್ ಶಿಂಧೆ, ಮುಖ್ಯಮಂತ್ರಿ ಚಂದ್ರು ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ ಎಂದು ಹೇಳುತ್ತಾ ಹೋದರು.
ಭೂತ ಕೋಲ ವಿಶೇಷಗಳೇನು ಎಂಬುದಕ್ಕೆ ಅದನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಾಗುವುದು. ಆದರೆ ನಿಗೂಢ ಸತ್ಯದ ಆಶಯಗಳನ್ನು ತಿಳಿದವರು ಖಂಡಿತಾ ಬೆಚ್ಚಿ ಬೀಳುತ್ತಾರೆ ಎಂದರು ನಿರ್ದೇಶಕ ಅಶೋಕ್ ಕಡಬ.
ರಾಜ ಮನೆತನದಲ್ಲಿ ಸತ್ಯ ಶೋಧಿಸುವ ಪಾತ್ರ ಸಂತೋಷ್ ಅವರದಾದರೆ ಕೊಂಚ ಗಡಸು ಪಾತ್ರದಲ್ಲಿ ಕಾಣಿಸಿಕೊಂಡಿರುವುದು ರಂಜನಿ ರಾಘವನ್. ಜೊತೆಗೆ ಹೊಸ ಕಲಾವಿದೆ ತನುಶ್ರೀ ನಟಿಸಿದ್ದಾರೆ ಎಂಬ ವಿವರಗಳು ಬಂದವು.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ಜೊತೆಗೆ ಕಿನ್ನಾಳ್ ರಾಜು ಸಂಭಾಷಣೆ ಇದೆ. ಸುರೇಶ್ ಅರಸ್ ಸಂಕಲನ ಮತ್ತು ಸಿನಿಟೆಕ್ ಸೂರಿ ಛಾಯಾಗ್ರಹಣ ಚಿತ್ರದ ವಿಶೇಷಗಳಲ್ಲಿ ಸೇರಿದೆ ಎಂಬ ಮಾಹಿತಿಗಳು ಬಂದವು.