ಅಭಿಮಾನಿಗಳ ಆರಾಧ್ಯದೈವ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಮಾಡಿರುವ ‘ಅಪ್ಪು ಕಥಾ ಗಾಯನ’ ಎಂಬ ಹಾಡು ಬಿಡುಗಡೆಗೊಂಡಿದೆ.
ಬಿವಿಎಂ (ಬ್ರಹ್ಮ ವಿಷ್ಣು ಮಹೇಶ್ವರ) ಕ್ರಿಯೇಷನ್ ಮೂಲಕ ಈ ಹಾಡು ನಿರ್ಮಾಣವಾಗಿ ಬಿಡುಗಡೆಗೊಂಡಿದ್ದು, ಸದ್ಯದಲ್ಲೇ ಅಪ್ಪು ಅವರ ಜೀವನಾಧರಿತ ಚಿತ್ರವನ್ನು ತೆರೆಗೆ ತರುವ ಈ ತಂಡಕ್ಕಿದೆ.
ತೆಲುಗಿನಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿರುವ ಬಿವಿಎಂ ಕ್ರಿಯೇಷನ್ಸ್ ನ ಮುಖ್ಯಸ್ಥ ಮಹಿ ಶಿವಶಂಕರ್, ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿಮಾನದ ಹೊಳೆಯನ್ನೇ ಹರಿಸಿದರು.
ಡಾ.ಪುನೀತ್ ರಾಜ್ಕುಮಾರ್ ಅವರು ಅಭಿಮಾನಿಗಳ ದೇವರು. ನಾನು ರಾಜ್ ಕುಟುಂಬದ ಅಭಿಮಾನಿ ಮತ್ತು ಕಲಾರಾಧಕ. ಅಪ್ಪು ಅವರ ಅಗಲಿಗೆ ಇಂದಿಗೂ ಕೂಡ ಸಹಿಸುವುದು ನನ್ನಿಂದ ಆಗುತ್ತಿಲ್ಲ. ಹಾಗಾಗಿ ‘ಎಲ್ಲಿ ಮರೆಯಾದೆಯೋ..’ ಎಂಬ ಈ ಹಾಡು ಹುಟ್ಟಿಕೊಂಡಿತು ಎಂಬ ವಿವರ ಕೊಟ್ಟರು ಮಹಿ ಶಿವಶಂಕರ್.
ಅಪ್ಪು ಅವರನ್ನು ಅಭಿಮಾನಿಯೊಬ್ಬ ಹುಡುಕುತ್ತಾ ಹೋಗುವ ಪಾತ್ರದಲ್ಲಿ ಸ್ವತಃ ಮಹಿ ಶಿವಶಂಕರ್ ನಟಿಸಿದ್ದು, ಅಪ್ಪು ಅವರ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚೆ ಈ ಹಾಡು ಬಿಡುಗಡೆಗೊಂಡಿದೆ.
ಹಾಡಿಗೆ ಸೋಹನ್ ಅಭಿರಾಮ್ ನಿರ್ದೇಶನವಿದ್ದು, ಚರಣ್ ಅರ್ಜುನ್ ಸಂಗೀತವಿದೆ. ರಾಜೇಶ್ ಕೃಷ್ಣನ್ ಈ ಹಾಡನ್ನು ಹಾಡಿದ್ದಾರೆ.
ರಾಜ್ ಕುಟುಂಬದ ರಾಘವೇಂದ್ರ ರಾಜ್ ಕುಮಾರ್, ಪೂರ್ಣಿಮಾ ರಾಮ್ ಕುಮಾರ್ ಹಾಗೂ ಇತರರು ಮಹಿ ಶಿವಶಂಕರ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಧನಪಾಲ್ ಛಾಯಾಗ್ರಹಣ ನೀಡಿರುವ ಹಾಡು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಕಂಡಿದೆ. ಮಹಿ ಅವರ ತಂದೆ ತಾಯಿ ಹಾಗೂ ಸ್ನೇಹ ಬಳಗದ ಉಪಸ್ಥಿತಿ ಈ ಸಂದರ್ಭದಲ್ಲಿತ್ತು.