ರೇಟಿಂಗ್ : 3/5
ನಿರ್ಮಾಣ : ರಾಜ್ ಭಾರದ್ವಾಜ್
ನಿರ್ದೇಶನ : ಅವಿನಾಶ್
ಹೆಣ್ಣಿಂದ ಹೆಣ್ಣು ಮಕ್ಕಳ
ಸಂಹಾರದ ನಿಗೂಢ ಕಥೆ
ಒಂದು ಗ್ರಾಮದಲ್ಲಿ ಮಗು ಹುಟ್ಟಿದ ತಕ್ಷಣ ಆ ಮನೆಯ ಹಿರಿಯ ಮಹಿಳೆ ಸಾವಿನ ಮನೆ ಬಾಗಿಲು ತಟ್ಟಬೇಕಾಗುತ್ತದೆ.
ಅದು ಏಕೆ ಏನು ಎಂಬುದಕ್ಕೆ ಭಯಾನಕ ಚರಿತ್ರೆಯೊಂದರ ಅನಾವಣವಾಗುತ್ತದೆ. ಆ ಕಥೆಯ ಮೂಲ ಸೆಲೆಯೇ ನೇಣು ಬಿಗಿಯುವ ಹಗ್ಗ.
ಹಾಗೆ ನೋಡಿದರೆ ಇದು ಹೆಣ್ಣು ಮಕ್ಕಳನ್ನು ಹೆರುವ ಸೊಸೆಯ ಕರುಣಾಜನಕ ಕಥೆ. ಭಾರತೀಯ ಕುಟುಂಬದ ಹೆಣ್ಣು ಮಕ್ಕಳು ಅನುಭವಿಸುವ ವಾಸ್ತವದ ನೋವು ಅದು.
ಆದರೆ ಅದನ್ನು ಪ್ರಚುರ ಪಡಿಸಲು ಆಯ್ಕೆ ಮಾಡಿಕೊಂಡ ಮೌಢ್ಯದ ದಾರಿ ಮಾತ್ರ ಪ್ರಶ್ನಾರ್ಹ. ಕೇವಲ ಮನರಂಜನೆಯ ದೃಷ್ಟಿಯಿಂದ ನೋಡಿದಾಗಲೂ ಈ ಪರಿಯ ಮೌಢ್ಯದ ಅವಶ್ಯಕತೆ ಇತ್ತೆ ಎಂಬ ಪ್ರಶ್ನೆ ಸಹ ಮೂಡುತ್ತದೆ.
ಸ್ವಲ್ಪ ಕಥೆಯ ಆಳಕ್ಕಿಳಿಯುವುದಾದರೇ..
ನಿಗೂಢ ಘಟನೆಗಳ ಮೂಲಕ ಜನರು ಬೆಚ್ಚಿ ಬಿದ್ದು ಊರು ಬಿಡುವ ಸನ್ನಿವೇಶದಲ್ಲಿ ಆ ಊರ ಗೌಡನ ಮಗ ರಾಮ ಸಮಸ್ಯೆ ಬಿಡಿಸುವ ಸಂಕಲ್ಪ ಮಾಡುತ್ತಾನೆ.
ಇದಾದ ಬಳಿಕ ಹಳ್ಳಿಯ ಮುಗ್ಧತೆ ಜೊತೆ ಪಟ್ಟಣದಲ್ಲಿ ವ್ಯವಹರಿಸುವ ಆತನಿಗೆ ಮಾವನ ಸಹಾಯ ದೊರಕಿರುತ್ತದೆ. ಆ ಮಾವನ ಹೆಸರು ಪ್ರಾಂಕ್ ಪ್ರಕಾಶ. ಸುಳ್ಳಿನ ಸರಮಾಲೆ ಕಟ್ಟುವ ಮಾವನ ಜೊತೆ ಹೆಣಗಾಡುತ್ತಾ ಹುಡುಗಿ ಹುಡುಕುತ್ತಾನೆ ರಾಮ.
ಈ ವೇಳೆ ಮಾವ (ತಬಲನಾಣಿ) ಮತ್ತು ಪರಿಚಯದ ಹೆಣ್ಣಿನ ಜೊತೆ ರಾಮು ವರ್ತಿಸುವ ರೀತಿ ನಗೆ ತರಿಸುತ್ತದೆ. ಮಾಮ ಮಾಡುವ ತರ್ಲೆಗಳಿಗೆ ಅಳಿಯ ತಲೆ ಕೊಡಬೇಕಾಗಿ ಬರುವ ಇಕ್ಕಟ್ಟಿನ ಸಂದರ್ಭಗಳಲ್ಲಿ ಪ್ರೇಕ್ಷಕನಿಗೆ ಕಚಗುಳಿ ಇಟ್ಟಂತಾಗುತ್ತದೆ.
ನಾಗೇಕೊಪ್ಲು ಎಂಬುದು ಜನರ ಸೌಹಾರ್ದಕ್ಕೆ ಹೆಸರಾದ ಗ್ರಾಮ. ಅಲ್ಲಿ ನಿಗೂಢ ಘಟನೆಗಳು ನಡೆದು ಜನರನ್ನು ಭಯದ ಅಂಚಿಗೆ ತಳ್ಳಿರುತ್ತವೆ. ಆ ಊರಿನ ಘಟನೆಗಳ ಸುತ್ತ ವ್ಯವರಿಸಿ ಪರಿಹಾರ ಕಂಡುಕೊಳ್ಳಲು ಟಿವಿ ವಾಹಿನಿ ವರದಿಗಾರ್ತಿ ಮನಸ್ಸು ಮಾಡಿದ್ದರ ಫಲ ನಿಗೂಢ ಕಥಾನಕ ಬಿಚ್ಚಿ ಕೊಳ್ಳುತ್ತದೆ.
ಆ ಕಥಾನಕವೇ ಚಿತ್ರದ ಜೀವಾಳ. ಹಣ್ಣು ಹಣ್ಣು ಮುದುಕಿ ಮಾಟಗಾತಿ. ಆಕೆಯ ಸಹಾಯಕ್ಕೊಬ್ಬ ಕ್ರೂರ ಮನುಷ್ಯ. ಆಕೆ ಹೇಳುವ ಕಟ್ಟುಕಥೆಯಲ್ಲಿ ಬರುವ ಅಮಾಯಕ ಹೆಣ್ಣು (ಅನು ಪ್ರಭಾಕರ್) ಮಗಳು ಸಾವಿತ್ರಿ. ಕ್ರೌರ್ಯ ಮೆರೆಯುವ ಆಕೆಯ ಅತ್ತೆ ತ್ರಿಚೆಂಡೇಶ್ವರಿ (ಭವಾನಿ ಪ್ರಕಾಶ್).
ಮಾಟ ಮಂತ್ರ ಎಂಬ ಕಲ್ಪನೆಯಲ್ಲಿ ತೆರೆಯ ಮೇಲೆ ಕಾಣಿಸುವ ಪ್ರತಿಮೆಗಳು ಭಯಾನಕ. ಹಣ್ಣು ಹಣ್ಣು ಮುದುಕಿಯ ಕಲ್ಪನೆಯೇ ಅವಾಸ್ತವ. ಆದರೆ ಅಲ್ಲೊಂದು ಬೇರೆ ನೆಲೆಯ ಕಥೆ ಕಾಣುವುದು ಆಧುನಿಕ ಕಣ್ಣಿನ ಟಿವಿ ಕ್ಯಾಮೆರಾದಿಂದ..
ರಾಮ್ ಪಾತ್ರದಲ್ಲಿ ವೇಣು ಸಾಹಸ ದೃಶ್ಯಗಳಲ್ಲಿ ಸೈ ಎನಿಸಿಕೊಂಡರೆ, ಟಿವಿ ವರದಿಗಾರ್ತಿ ರಿತಿಕಾ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಮಿಂಚಿದ್ದಾರೆ. ಮಾಮನ ಪಾತ್ರದಲ್ಲಿ ತಬಲನಾಣಿ, ಊರ ಗೌಡನಾಗಿ ಅವಿನಾಶ್, ಮತ್ತೊಂದು ಗಮನ ಸೆಳೆಯುವ ಪಾತ್ರದಲ್ಲಿ ಅನು ಪ್ರಭಾಕರ್, ಕ್ರೂರಿ ಅತ್ತೆಯ ಪಾತ್ರದಲ್ಲಿ ಭವಾನಿ ಪ್ರಕಾಶ್ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಗ್ರಾಫಿಕ್ಸ್ ಮತ್ತು ವಿಎಫ್ ಎಕ್ಸ್ ಪರಿಣಾಮಕಾರಿ ಬಳಕೆ ಚಿತ್ರದ ಹೈಲೈಟ್. ಕೊನೆಯ ಕ್ಷಣದ ಆ ದೃಶ್ಯಗಳು ಮಾತ್ರ ಪ್ರೇಕ್ಷಕನನ್ನು ‘ಹಗ್ಗ’ದಿಂದ ಕಟ್ಟಿ ಹಾಕಬಲ್ಲವು..