Snehapriya.com

June 9, 2025

ತಿಮ್ಮಯ್ಯ & ತಿಮ್ಮಯ್ಯ ಚಿತ್ರವಿಮರ್ಶೆ

Social Share :

ನೆನಪುಗಳ ಮಾತು ಮಧುರ..

ಪ್ರತಿಯೊಬ್ಬರ ಜೀವನ ಕ್ರಮ ಮತ್ತು ಅದರ ಆಶಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ.. ಸುಂದರ ಪರಿಸರದಂತೆಯೇ ಮಾನವ ನಿರ್ಮಿತ ವ್ಯವಸ್ಥೆಯಲ್ಲಿಯೂ ಖುಷಿಯನ್ನು ಕಂಡು ಕೊಳ್ಳಬಹುದು..

‘ಬೆಂಗಳೂರು ಕೆಫೆ’ ಎಂಬುದು ಮರೆತು ಹೋದ ಕಾಲಘಟ್ಟದಲ್ಲಿ ಮಧುರ ನೆನಪುಗಳನ್ನು ತುಂಬುವ ಹೆಸರು. ಅದನ್ನು ಮರು ಸ್ಥಾಪಿಸುವ ಯತ್ನದಲ್ಲಿ ತಿಮ್ಮಯ್ಯ ಮತ್ತು ತಿಮ್ಮಯ್ಯ ನಡೆದುಕೊಳ್ಳುವ ಪರಿ ಮತ್ತು ಮಾಡುವ ಸಾಹಸ ಅನನ್ಯ ಮತ್ತು ಭಾವನಾತ್ಮಕ.

ಬೆಂಗಳೂರು ಕೆಫೆ ಕೇವಲ ಹೊಟೇಲ್ ಮಾತ್ರವಲ್ಲ; ಅದೊಂದು ರೊಮಾಂಚಕ ತಾಣ. ಅಲ್ಲಿ ಬೆರೆಯುವವರಿಗೆ ಅದೊಂದು ವಿಶಿಷ್ಟ ಅನುಭವ. ಹಾಗಾಗಿ ಭಾವನೆಗಳು ಸಹ ಬೆಸೆದುಕೊಂಡಿರುತ್ತವೆ.

ಇಲ್ಲಿ ಅಜ್ಜು (ಅನಂತ್ ನಾಗ್), ವಿನ್ಸಿ (ದಿಗಂತ್), ಜೋ (ಐದ್ರೀತಾ ರೇ), ಜಗ್ಗಣ್ಣ, ಆಂಡಿ ಮೊದಲಾದವರ ಒಡನಾಟ, ಹೋರಾಟ ಕೆಫೆಯ ಜೊತೆ ಬೆರೆಯ ತೊಡಗಿದಾಗ ಭಾವನೆಗಳು ಎಗ್ಗಿಲ್ಲದೆ ಹರಿದಾಡುತ್ತವೆ.. ಇತ್ತ ಪ್ರೇಕ್ಷಕನ ಕಣ್ಣಂಚು ಒದ್ದೆಯಾಗುತ್ತದೆ..

ಹಠಮಾರಿ ಧೋರಣೆಯ; ವಿಲಾಸಿ ಜೀವನದಲ್ಲಿ ಮಿಂದೆದ್ದಿರುವ ಅಜ್ಜು ಪ್ರೇಮ ಸಂವೇದನೆಗಳನ್ನು ಅರಿಯ ಬಲ್ಲ ಚಾಣಕ್ಷ. ಎಲ್ಲೋ ಬಿಟ್ಟು ಹೋಗಬಹುದಾದ ಮಧುರ ನೆನಪುಗಳಿಗೆ ತವಕಿಸುವ ಅದಮ್ಯ ವ್ಯಕ್ತಿತ್ವದ ಅಜ್ಜ.

ಅದಕ್ಕೆ ತಕ್ಕಂತೆ ಪ್ರೇಮಿಯ ನೆನಪಿನಲ್ಲಿ ಭವಿಷ್ಯದ ಅದ್ಯಾವುದೋ ಗುರಿಯ ಜೊತೆ ವರ್ತಮಾನವನ್ನು ಹೇಗೇಗೋ ಅನುಭವಿಸುವ ವಿನ್ಸಿಗೆ ಪ್ರೇಮ ಕಾಮದ ಹಂಗು ಅರಿವು ಎರಡೂ ಇಲ್ಲ.. ಹಾಗಾಗಿ ಸುಂದರಿಯಂತಹ ಹುಡುಗಿ ಜೋ ಪಕ್ಕದಲ್ಲಿದ್ದರೂ ಆತ ನಿರ್ಲಿಪ್ತ.. ಆದರೆ ಜೋಗೆ ವಿನ್ಸಿಯೇ ಪ್ರೇಮ ಸಾಮ್ರಾಜ್ಯ. ಹಾಗಿದ್ದರೂ ಅದರ ತೋರ್ಪಡಿಕೆ ಇಲ್ಲ.

ಕೆಫೆಯನ್ನು ಪುನರಾರಂಭಿಸುವ ದಾರಿಯಲ್ಲಿ ನೆನಪಿನ ಬಾಗಿಲುಗಳು ತೆರೆದುಕೊಳ್ಳುತ್ತವೆ. ಆ ನೆನಪುಗಳು ಮಧುರ ಎಂಬುದನ್ನು ಅಷ್ಟೇ ಸೌಂದರ್ಯ ಲಹರಿ ಮೂಲಕ ಚಿತ್ರಿಸಿದ್ದಾರೆ ನಿರ್ದೇಶಕ ಸಂಜಯ್ ಶರ್ಮಾ.

ಆಧುನಿಕ ಜೀವನ ಕ್ರಮದಲ್ಲಿ ಭಾವನೆಗಳು ಭಾವನೆಗಳಾಗಿ ಉಳಿದಿಲ್ಲ; ಆದರೆ ಆಳದಲ್ಲಿ ಪುಟಿಯುವ ಭಾವನೆಗಳು ಯಾರಿಗೂ ನಿಲುಕುವುದಿಲ್ಲ.. ಅಜ್ಜ, ಮೊಮ್ಮಗ ಮತ್ತು ಅವರ ಪ್ರೇಮದಲ್ಲಿ ಅಂತರ ಹೆಚ್ಚಿದ್ದರೂ ಅದನ್ನು ಆಪ್ತವಾಗಿಸುವ ನಿಟ್ಟಿನ ದೃಶ್ಯಗಳೂ ಅದ್ಭುತ..

ಇನ್ನು ಕಾಲದ ಬಗ್ಗೆ ಮಾತನಾಡುವ ಅಜ್ಜು, ‘ಈ ಕಾಲವೇ ಹಾಗೆ ಬೆರಳಿನ ಮಧ್ಯದಿಂದ ಜಾರಿ ಹೋಗಿದ್ದು ಗೊತ್ತೇ ಆಗಲ್ಲ..’ ಎಂದು ಹೇಳುತ್ತಲೇ ತಾನು ಬದುಕಿದ ರೀತಿಯನ್ನೇ ಪ್ರಸ್ತುತ ಪಡಿಸುತ್ತಾರೆ. ಅಜ್ಜು (ಮೊದಲ ತಿಮ್ಮಯ್ಯ) ಪಾತ್ರದಲ್ಲಿ ಅನಂತ್ ನಾಗ್ ಪರಕಾಯ ಪ್ರವೇಶ ಮಾಡಿದ್ದಾರೆ. ಅವರ ಆ ಪಾತ್ರ ನೋಡುಗನ ಹೃದಯ ಆರ್ದ್ರಗೊಳಿಸುತ್ತದೆ..

ದಿಗಂತ್ ಕೂಡ ಇಲ್ಲಿ ವಿಭಿನ್ನ. ಸೋಮಾರಿ ಹುಡುಗನಿಂದ ಬಡ್ತಿ ಪಡೆದು ಕೊಂಚ ಜವಾಬ್ದಾರಿಯ ಹುಡುಗನಾಗಿ ಮತ್ತು ನಿಗೂಢ ಪ್ರೇಮಿಯಾಗಿ ಆಪ್ತವಾಗುತ್ತಾರೆ. ಐದ್ರೀತಾ ಗ್ಲಾಮರ್ ಮತ್ತು ಮೌನದಲ್ಲಿಯೇ ಕಾಡುವ ವರಸೆ ಉತ್ತಮ.

ಶುಭ್ರ ಅಯ್ಯಪ್ಪ, ಪ್ರಕಾಶ್ ತುಂಬಿನಾಡು ಮೊದಲಾದವರು ತಮ್ಮ ಪಾತ್ರಗಳಿಗೆ ನ್ಯಾಯಾ ಸಲ್ಲಿಸಿದ್ದಾರೆ.

ಜೀವನ ಪ್ರೇಮ ಅಭಿವ್ಯಕ್ತಿಸುವ ಈ ಚಿತ್ರದಲ್ಲಿ ನಿಜವಾಗಿ ಜೀವಿಸುವುದು ಅಥವಾ ವಿಜೃಂಭಿಸುವುದು ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತ..

 

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *