Snehapriya.com

June 8, 2025

ಪ್ರತಿಯೊಂದು ದೇವರ ನಿಯಮ ಹಿರಿಯ ನಟ ಅನಂತ್ ನಾಗ್..

Social Share :

* ಅನಂತಲೋಕ ವಿತ್ ರಮೇಶ್

* ಅನಂತ್ ನಾಗ್ ಅವರಿಗೆ ಕೋಪ ಜಾಸ್ತಿ : ಗಾಯಿತ್ರಿ ಅನಂತ್ ನಾಗ್

* ಎಲ್ಲವನ್ನೂ ಮಾಡಿಸುವ ದೇವರಲ್ಲಿ ಹೆಚ್ಚು ನಂಬಿಕೆ

‘ನೋಡಿ ವಾಸ್ತವದಲ್ಲಿ ಏನಾಗುತ್ತಿದೆ.. ಯಾರಿಗೂ ತಾಳ್ಮೆ ಎಂಬುದೇ ಇಲ್ಲ; ಅಸಹನೆ ಕಟ್ಟೆಯೊಡೆದಂತೆ ವರ್ತಿಸುತ್ತಾರೆ‌..’

ಹೀಗೆ ಹೇಳಿ ಆಕಾಶಕ್ಕೆ ಮುಖ ನೆಟ್ಟರು ಕನ್ನಡದ ಸಹಜ ನಟ ಅನಂತ್ ನಾಗ್..

ಅದು ಅನಂತ್ ನಾಗ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳಾದ ಸಂದರ್ಭದಲ್ಲಿ ‘ಅನಂತಲೋಕ ವಿತ್ ರಮೇಶ್’ ಎಂಬ ಕಾರ್ಯಕ್ರಮ. ಕನ್ನಡದ ಮುಂಚೂಣಿಯ ಸಿನಿಮಾ ಪ್ರಚಾರ ಸಂಸ್ಥೆಯಾಗಿರುವ ರಾಘವೇಂದ್ರ ಚಿತ್ರವಾಣಿ ಏರ್ಪಡಿಸಿದ್ದ ಆಪ್ತ ಸಮಾರಂಭ.

ಯಾವುದೇ ವಿಷಯವಿರಲಿ; ಜನರು ಅಸಹನೆಯಿಂದ ವರ್ತಿಸುತ್ತಿದ್ದಾರೆ. ಯಾರಿಗೂ ತಾಳ್ಮೆ ಎಂಬುದೇ ಇಲ್ಲ. ಉದಾಹರಣೆಗೆ ಈಗಿನ ಸರ್ಕಾರ ಬಂದು ಎರಡು ತಿಂಗಳಾಗಿಲ್ಲ. ಸುಖ ಸುಮ್ಮನೆ ಅದರ ಮೇಲೆ ಬಿದ್ದಿದ್ದಾರೆ. ಕೊಂಚ ತಾಳ್ಮೆಯಿಂದ ಎಲ್ಲವನ್ನು ಪರಿಸೀಲಿಸಬಹುದು ಅಲ್ಲವೇ..

ನಾನು ಕೂಡ ಕೋಪಿಷ್ಠ ಅಥವಾ ಬೇಗನೆ ಸಿಟ್ಟಿಗೊಳಗಾಗುತ್ತೇನೆ ಎಂಬುದನ್ನು ಗಾಯಿತ್ರಿ ಹೇಳುತ್ತಿರುತ್ತಾಳೆ. ಅದು ಹೇಗೆಂದು ನನಗೆ ಗೊತ್ತಿಲ್ಲ ಎಂದಾಗ, ವೇದಿಕೆಯ ಮುಂಭಾಗದಲ್ಲಿದ್ದ ಗಾಯಿತ್ರಿ ಅನಂತ್ ನಾಗ್ ಅವರು ತಕ್ಷಣವೇ ಪ್ರತಿಕ್ರಿಯಿಸಿ ‘ಅವರಿಗೆ ಕೋಪ ತಕ್ಷಣವೇ ಬರುತ್ತದೆ ಮತ್ತು ಅದು ಜಾಸ್ತಿ’ ಎಂದು ಸಮರ್ಥಿಸಿಕೊಂಡರು.

ನಟ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮ ಅತ್ಯಂತ ರಂಜನೀಯ ಹಂತ ತಲುಪಿದ್ದು ಆಗಲೇ..

ನೋಡಿ.. ಇಲ್ಲಿ ನಾನು ನೀವು ಎಲ್ಲವೂ ನಿಮಿತ್ತ ಮಾತ್ರ; ಎಲ್ಲದಕ್ಕೂ ದೇವರೇ ಕಾರಣ ಮತ್ತು ಆತನ ಲೀಲೆ.. ನಮ್ಮಿಂದ ಇದೆಲ್ಲವನ್ನು ಮಾಡಿಸಿರಬಹುದು ಎಂದು ನಕ್ಕರು.

ನೀವು ಸಿನಿಮಾ ರಂಗಕ್ಕೆ ಹೇಗೆ ಬಂದಿರಿ.. ಎಂಬ ಪ್ರಶ್ನೆಗೆ, ತಮ್ಮ ಬಾಲ್ಯಕ್ಕೆ ಜಾರಿದರು ಅನಂತ್ ನಾಗ್. ನಾನು ಚಿಕ್ಕ ವಯಸ್ಸಿನಲ್ಲಿ ಮನೆಗೆ ಬರುವ ಎಲ್ಲರನ್ನು ಅಣುಕಿಸುತ್ತಾ ಅವರ ಹಾವ ಭಾವಗಳನ್ನು ಹಾಗೆಯೇ ಪ್ರದರ್ಶನ ಮಾಡುತ್ತಿದ್ದೆ. ಬಹುಶಃ ನನಗೆ ನಟನೆ ಎಂಬುದು ಆಗಲೇ ಒಗ್ಗಿರಬೇಕು ಎಂದರು.

ಇನ್ನು ನಾನು ಬೆಳೆದಿದ್ದು ಮಠದ ವಾತಾವರಣ. ಕಾಂಚನಗಡ
ರಾಮ್ ದಾಸರ ಆಶ್ರಮ
ಸಿರಾಲಿ ಚಿತ್ರಪುರ ಮಠ. ಅಲ್ಲಿ
ಆಧ್ಯಾತ್ಮಿಕ ವಾತಾವರಣವಿತ್ತು. ಹಾರ್ಮೋನಿಯಂ ತಬಲ
ರಾಮನಾಮ ಕಲಿತ್ತಿದ್ದೆ. ಅದು
ಕಲಿಕೆ ಅಲ್ಲ ಸಹಜವಾಗಿತ್ತು.

ಬಳಿಕ ಕಾಲೇಜಿನಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡಾಗ ಜೀವಶಾಸ್ತ್ರ ಅಧ್ಯಯನ ಮಾಡುವಾಗ ಕಪ್ಪೆಗಳನ್ನು ಕತ್ತರಿಸಿ ಮಾಡುವಾಗ ಮುಜುಗರಕ್ಕೆ ಭಯಕ್ಕೆ ಒಳಗಾಗುತ್ತಿದ್ದೆ. ಕೊನೆಗೆ ವಾಣಿಜ್ಯ ವಿಷಯ ತೆಗೆದುಕೊಂಡು ಓದಬೇಕಾಯಿತು. ಅದು ಸರಿಯಾಗಿ ಆಗಲಿಲ್ಲ. ಕೊನೆಗೆ ಮುಂಬೈನಲ್ಲಿ ನಾಟಕ ಕಂಪನಿ ಸೇರಿದಾಗ ಅಭಿನಯದ ಸಹಜ ಕಲಿಕೆ ಆಯಿತು ಎಂದು ವಿವರಿಸುತ್ತಾ ಹೋದರು ಹಿರಿಯ ನಟ.

ಈ ಮರೆವು ಒಂದು ರೀತಿ ಜಿಜ್ಞಾಸೆಗೆ ದೂಡುತ್ತದೆ. ಕೆಲವೊಮ್ಮೆ ಇದು ವರವೋ ಶಾಪವೋ ಎಂಬ ಭಾವನೆ ಕಾಡುತ್ತದೆ. ಮರೆವು ಎಂಬುದು ವರವೂ ಹೌದು.. ಶಾಪವೂ ಹೌದು.. ಏಕೆಂದರೆ ಅನೇಕ ದುಃಖದ ಸಂಗತಿಗಳನ್ನು ಮರೆಯುವುದರಿಂದ ಮನಸ್ಸಿಗೆ ಸಮಾಧಾನ ಆಗುವುದು ಉಂಟು ಎಂದು ಸಹೋದರ ಶಂಕರ್ ನಾಗ್ ಅವರ ಸಾವಿನ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾದರು ಅನಂತ್ ನಾಗ್.

ನೀವು ಆಗಾಗ ಭಗವದ್ಗೀತೆ ಉಲ್ಲೇಖ ಮಾಡುತ್ತೀರಿ.. ಈಗ ‘ಓಪನ್ ಐಮರ್’ ಎಂಬ ಇಂಗ್ಲಿಷ್ ಚಿತ್ರದಲ್ಲಿ ಯಾವುದನ್ನು ಕೋಟ್ ಮಾಡಿದ್ದಾರೆ ಎಂದು ನಿಮಗನಿಸುತ್ತಿದೆ ಎಂಬ ಪ್ರಶ್ನೆಗೆ, ಅದು ಶ್ರೀಕೃಷ್ಣ ಅರ್ಜುನನಿಗೆ ತೋರಿದ ವಿಶ್ವರೂಪ ದರ್ಶನವೇ ಇರಬಹುದು.. ‘ನೀನು ನಿಮಿತ್ತ ಮಾತ್ರ. ಎಲ್ಲವೂ ಭಗವಂತನ ಕೈಯಲ್ಲಿದೆ..’ ಎಂದು ಹೇಳುವುದಿರಬಹುದು. ಹೇಳಿ ಕೇಳಿ ಅದು ಅಣುಬಾಂಬ್ ಕುರಿತ ಚಿತ್ರ ಎಂದು ಮಾರ್ಮಿಕವಾಗಿ ವಿವರಿಸಿದರು ಹಿರಿಯ ನಟ.

ನೀವು ನಾಯಕರಾಗುವುದರ ಬದಲು ಗಾಯಕರಾಗಬಹುದಿತ್ತು ಎಂದಾಗ, ಇಲ್ಲ ನಾನು ಆ ಸಾಹಸಕ್ಕೆ ಕೈ ಹಾಕುವುದಿಲ್ಲ. ಏಕೆಂದರೆ ಗಾಯನಕ್ಕೆ ಗಟ್ಟಿಯಾದ ಅಭ್ಯಾಸ ಬೇಕಾಗುತ್ತದೆ. ಡಾ.ರಾಜ್ ಕುಮಾರ್ ಅವರಿಗೆ ರಂಗಭೂಮಿಯ ಹಿನ್ನೆಲೆ ಇತ್ತು. ಮೊದಲಿನಿಂದ ಹಾಡಿಕೊಂಡು ಬಂದಿದ್ದರು. ಹಾಗಾಗಿ ಗಾಯನ ಅವರಿಗೆ ಒಲಿದಿತ್ತು ಎಂದು ಜಾರಿಕೊಂಡರು ಅನಂತ್.

ಚಲನ ಚಿತ್ರರಂಗ ವೃತ್ತಿ ಎಂದು ತೆಗೆದುಕೊಂಡಾಗ ಏರು ಪೇರು ಇರುತ್ತದೆ. ಅನಿಶ್ಚಿತತೆ ಕೂಡ ಇರುತ್ತದೆ. ನಾನು ಚಿಕ್ಕ ವಯಸ್ಸಿನಲ್ಲೇ ಹಿರಿಯರು ಹೇಳುತ್ತಿದ್ದರು. ನಾಯಕ ನಟ ಆಗುವುದು ಸುಲಭವಲ್ಲ; ಹತ್ತು ಜನರಿಗೆ ಒಬ್ಬ ಆಗುತ್ತಾರೆ. ಹಾಗಾಗಿ ನಾಯಕ ನಟ ಆದ ಮೇಲೆ ಏರು ಪೇರು ಸಾಮಾನ್ಯವಾಗಿರುತ್ತದೆ. ಹಾಗೆಯೇ ಅನಿಶ್ಚಿತತೆ ಕೂಡ ಎಂದರು.

ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಯಾವುದೇ ಕ್ಷೇತ್ರವಿರಬಹುದು.. ಅತ್ಯಾದ್ಭುತ ಎಂಬುದನ್ನು ಮುಟ್ಟಿ ಬರುವ ಅವಕಾಶ ಎಲ್ಲರಿಗೂ ಬರುವುದಿಲ್ಲ. ನನಗೆ ಕೆಲವು ಅವಕಾಶಗಳು ಉತ್ತಮವಾಗಿದ್ದವು ಎಂಬುದು ಹೆಮ್ಮೆಯ ವಿಷಯವಾಗುತ್ತದೆ ಎಂದು ನಕ್ಕರು ಸಹಜ ನಟ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *