ಪ್ರೀತಿ ಪ್ರೇಮದ ಬಳ್ಳಾರಿ ದರ್ಬಾರ್
ಕಾಲೇಜು ಕೆಲವೊಮ್ಮೆ ಪ್ರೀತಿ ಪ್ರೇಮ ಮತ್ತು ವೈಷಮ್ಯದ ಹಾಟ್ ಸ್ಪಾಟ್.. ಇಂತಹ ವಾತಾವರದಲ್ಲಿ ಬದುಕನ್ನು ಕಟ್ಟಿಕೊಳ್ಳುವವರಿಗಿಂತ ಬದುಕನ್ನು ತ್ಯಾಗ ಮಾಡಿದವರೇ ಹೆಚ್ಚು..
ಇಲ್ಲಿಯೂ ಹಾಗೆ ಸ್ನೇಹಿತನಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಅಮಾಯಕ ಹುಡುಗ ಪ್ರೇಕ್ಷಕರ ಹೃದಯ ಗೆಲ್ಲುತ್ತಾನೆ. ಸ್ನೇಹಿತನ ಸ್ನೇಹತ್ವ ಅರಿಯದ ಸ್ನೇಹಿತ ವಿಲನ್ ಮಾದರಿಯಲ್ಲಿ ಅವನಿಗೆ ಮುಳುವಾಗುತ್ತಾನೆ..
ಇದೀಷ್ಟು ಯುವ ಪೀಳಿಗೆಯ ಜಾಡು ಹಿಡಿದು ನಿರ್ಮಾಪಕ ಜಿ.ರಾಮಾಂಜಿನಿ ಕಥೆ ಬರೆದಿದ್ದಾರೆ. ಅದಕ್ಕೆ ಎಲ್ಲಾ ಬಗೆಯ ರಸಗಳನ್ನು ಸೇರಿಸಿ ಚಿತ್ರಕಥೆ ನೇಯ್ದು ನಿರ್ದೇಶನ ಮಾಡಿರುವುದು ‘ಬಳ್ಳಾರಿ ದರ್ಬಾರ್’ ಖ್ಯಾತಿಯ ಸ್ಮೈಲ್ ಶ್ರೀನು.
ನಿರ್ಮಾಪಕ ಮತ್ತು ನಿರ್ದೇಶಕ ಆ ಕಡೆಯವರೇ ಎಂದಾಗ ಅದೇ ವರ್ಚಸ್ಸು ಮಾದರಿ ಎಲ್ಲವೂ ಕಾಣುತ್ತದೆ. ಹಾಡುಗಳಷ್ಟೇ ಹೊಡೆದಾಟದ ದೃಶ್ಯಗಳು ಇಲ್ಲಿ ಗಮನ ಸೆಳೆಯುತ್ತವೆ. ಮುಖ್ಯವಾಗಿ ಇವರ ಸವಾಲನ್ನು ಸ್ವೀಕರಿಸಿರುವುದು ಮುಖ್ಯ ಪಾತ್ರಧಾರಿ ಅಕ್ಷಿತ್ ಶಶಿಕುಮಾರ್.
ಅಂದ ಹಾಗೆ ಕನ್ನಡದ ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಅವರ ಪರಿಚಯಾತ್ಮಕ ಚಿತ್ರ ಇದು. ಹಾಗಾಗಿ ಒಬ್ಬ ಯುವ ನಟನನ್ನು ಪರಿಚಯಿಸಲು ಬೇಕಾದ ಚಿತ್ರದ ಮನರಂಜನಾತ್ಮಕ ಅಂಶಗಳಿಗೆ ಪೂರಕವಾಗಿಯೇ ಎಲ್ಲವೂ ಇದೆ.
ಸುಂದರ ಯುವಕ ಹುಡುಗಿಯರನ್ನು ಕ್ಷಣ ಮಾತ್ರದಲ್ಲಿ ಪಟಾಯಿಸಬಲ್ಲ; ಶತ್ರುಗಳನ್ನು ಚಚ್ಚಿ ಪುಡಿ ಮಾಡಬಲ್ಲ; ಹಾಡಿ ಕುಣಿಯುವುದರಲ್ಲಂತೂ ಥೇಟ್ ಅಪ್ಪನಂತೆ ಅಥವಾ ಅದಕ್ಕಿಂತಲೂ ವೇಗ..
ಪ್ರೇಮ್ (ಅಕ್ಷಿತ್ ಶಶಿಕುಮಾರ್) ನ ಉತ್ತಮ ಆಶಯ ಎಂದರೆ ಸ್ನೇಹ ಮತ್ತು ತ್ಯಾಗ. ಹಾಗೆಯೇ ಮಾನವೀಯ ನೆಲೆಯಲ್ಲಿ ಎಲ್ಲವನ್ನು ನೋಡುತ್ತಾ ಸಂಬಂಧಗಳಿಗೆ ಬೆಲೆ ಕೊಡುವುದು..ಹಾಗಾಗಿ ಪ್ರೀತಿ (ಕೀರ್ತಿ ಕಲ್ಕೆರೆ) ಸೇರಿದಂತೆ ಎಲ್ಲರಿಗೂ ಅವನೆಂದರೆ ಪಂಚಪ್ರಾಣ.
ಅಲ್ಲಿ ವಿಲನ್ ಆಗಿ ಗೋಚರಿಸುವುದು ಸ್ನೇಹಿತ ಅವನಿಗೆ ಕಿವಿ ಹಿಂಡುವ ಮತ್ತೊಬ್ಬ ಕೆಟ್ಟ ಸ್ನೇಹಿತ. ಅಲ್ಲದೆ ಹುಡುಗಿಗಾಗಿ ಹಂಬಲಿಸುವ ನಿಜವಾದ ವಿಲನ್ (ದೇವ್ ಗಿಲ್) ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ. ಕೆಲವರ ದುರಾಸೆಯ ಫಲಗಳನ್ನು ಒಳ್ಳೆಯ ಜನರೂ ಅನುಭವಿಸಬೇಕಾಗುತ್ತದೆ. ಇಂತಹ ನೆಲೆಯಲ್ಲಿ ಕಥೆ ಸಾಗುವಾಗಲೇ.. ಹಾಡುಗಳು ಮನಸ್ಸಿಗೆ ಮುದ ನೀಡುತ್ತವೆ.. ಸುಂದರ ತಾಣಗಳಲ್ಲಿ ಅಕ್ಷಿತ್-ಕೀರ್ತಿ ಕುಣಿಯುವ ಪರಿ ನೋಡಲು ಚೆಂದ.
ಅದರಲ್ಲೂ ಸ್ಪರ್ಧೆಯಲ್ಲಿ ಹಾಡುವ ಹಾಡು ‘ನಿನ್ನ ಡ್ಯಾಡಿ ನನಗೆ ಮಾವ ಆಗೋದು..’ ಚಿತ್ರದ ಹೈಲೈಟ್. ಅಕ್ಷಿತ್ ಶಶಿಕುಮಾರ್ ಸಿಕ್ಕಿದ ಅವಕಾಶದಲ್ಲಿ ಅತ್ಯುತ್ತಮ ವರಸೆ ತೋರಿದ್ದಾರೆ. ಹಾಗಾಗಿ ಅವರು ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕ ನಟ. ಏಕೆಂದರೆ ನಟನೆ, ಹಾಡು, ಕುಣಿತ, ಹೊಡೆದಾಟ ಎಲ್ಲದರಲ್ಲೂ ಈಗಿನ ಜಮಾನದ ಹುಡುಗರ ನಾಡಿ ಮಿಡಿತಕ್ಕೆ ಸ್ಪಂದಿಸುವ ಎಲ್ಲಾ ವರಸೆಯಲ್ಲೂ ಪ್ರತಿಭಾವಂತ..
ಕೀರ್ತಿ ಕಲ್ಕೆರೆ, ಪೃಥ್ವಿ, ಎಸ್.ನಾರಾಯಣ್, ಸಾಧು ಕೋಕಿಲ, ಸಂಗೀತಾ ಅನಿಲ್, ಪವಿತ್ರಾ ಲೋಕೇಶ್, ಸುಂದರಶ್ರೀ, ದೇವಗಿಲ್ ಎಲ್ಲರೂ ತಮ್ಮ ಪಾತ್ರದ ಮಿತಿಯಲ್ಲಿ ಅತ್ಯುತ್ತಮ ನ್ಯಾಯ ಸಲ್ಲಿಸಿದ್ದಾರೆ.
ಚಿತ್ರದ ಪ್ರತಿ ಪ್ರೇಮ್ ಅಚ್ಚುಕಟ್ಟಾಗಿದೆ. ಹಾಗಾಗಿ ಹಾಲೇಶ್ ಛಾಯಾಗ್ರಹಣ ಸುಂದರ ಮತ್ತು ಚರಣ್ ಅರ್ಜುನ್ ಸಂಗೀತ ಸುಮಧುರ.
🖋ಸ್ನೇಹಪ್ರಿಯ ನಾಗರಾಜ್