ದಂಡುಪಾಳ್ಯ ಭಯಾನಕ ಘಟನೆಗಳ ಕರಾಳ ಮುಖದ ಹಿಂದೆ ಬೇರೊಂದು ಸತ್ಯವಿದೆ. ಅದನ್ನು ಈ ಚಿತ್ರದ ಮೂಲಕ ಬಹಿರಂಗಪಡಿಸಲಾಗುವುದು ಎಂದಿದ್ದರು ಬರಹಗಾರ ಅಗ್ನಿ ಶೀಧರ್.
ಅದರ ಹೆಸರು ಕ್ರೀಂ..!
ಸಂಯುಕ್ತ ಹೆಗಡೆ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ದಂಡುಪಾಳ್ಯ ಕೊಲೆಗಳನ್ನು ಕೆಲವು ಕಳ್ಳರ ತಲೆಗೆ ಕಟ್ಟಲಾಯಿತು. ಅದರ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ ಎಂದು ಕಥೆ ಚಿತ್ರಕಥೆ ಬರೆದಿರುವ ಅಗ್ನಿ ಶ್ರೀಧರ್ ಹೇಳಿದ್ದರು.
ಮೊನ್ನೆ ನಡೆದ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಮತ್ತೊಂದು ವಿಷಯ ಬಹಿರಂಗವಾಯಿತು. ಅದು ಚಿತ್ರದ ಪ್ರಮುಖ ಪಾತ್ರದಲ್ಲಿ ಅಗ್ನಿ ಶ್ರೀಧರ್ ಕಾಣಿಸಿಕೊಂಡಿದ್ದಾರೆ.
ಮಾರ್ಚ್ ಒಂದರಂದು ಬಿಡುಗಡೆ ದಿನಾಂಕ ಘೋಷಣೆ ಮಾಡಿಕೊಂಡಿರುವ ‘ಕ್ರೀಂ’ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿತು ಚಿತ್ರತಂಡ
ಡಿ.ಕೆ.ದೇವೇಂದ್ರ ನಿರ್ಮಿಸಿರುವ ಈ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಅವರೇ ಬರೆದಿದ್ದಾರೆ.
ಬರವಣಿಗೆಯಲ್ಲಿ ಇರುವ ಆಸಕ್ತಿ ನಟನೆಯಲ್ಲಿ ಇಲ್ಲ. ಆದರೆ ನಿರ್ಮಾಪಕ ದೇವೇಂದ್ರ ಒಂದು ಪಾತ್ರ ನಿರ್ವಹಣೆ ಮಾಡಲು ಹೆಚ್ಚು ಒತ್ತಾಯಿಸಿದರು. ಮೊದಲು ಆಗುವುದಿಲ್ಲ ಎಂದು ಹೇಳಿದ್ದೆ. ಬಳಿಕ ನಿರ್ಮಾಪಕರು ಹಾಗೂ ಹಿತೈಷಿಗಳ ಒತ್ತಾಯಕ್ಕೆ ಮಣಿದು ನಟಿಸಲು ಒಪ್ಪಿಕೊಂಡೆ ಎಂದರು ಅಗ್ನಿ ಶ್ರೀಧರ್.
ಕ್ರೀಂ ಎಂದರೆ ಬೀಜಾಕ್ಷರ ಮಂತ್ರ. ಈ ಚಿತ್ರದ ಕಥೆ ಹಣ ಹಾಗೂ ಅಧಿಕಾರಕ್ಕಾಗಿ ನಡೆಯುವ ಹೆಣ್ಣುಮಕ್ಕಳ ಬಲಿಯನ್ನು ಕುರಿತ ಕಥಾಹಂದರ ಹೊಂದಿದೆ. ಈಗಲೂ ಕೂಡ ನಮ್ಮ ಊರು, ನಮ್ಮ ದೇಶ ಹಾಗೂ ವಿದೇಶಗಳಲ್ಲೂ ಈ ಕೃತ್ಯ ನಡೆಯುತ್ತಲೇ ಇದೆ. ಇಂತಹ ಸೂಕ್ಷ್ಮ ವಿಚಾರವನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ಅಭಿಷೇಕ್ ಬಸಂತ್ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಹಾಗೂ ಸಂಯುಕ್ತ ಹೆಗಡೆ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ಶ್ರೀಧರ್.
ಐದು ವರ್ಷಗಳ ನಂತರ ನಟಿಸಿರುವ ಕನ್ನಡ ಚಿತ್ರವಿದು. ಅಭಿನಯ ಮತ್ತು ಕ್ರಿಯಾಶೀಲತೆಗೆ ಒತ್ತು ಕೊಟ್ಟಿರುವ ಸಿನಿಮಾ ಕೂಡ ಇದೇ ಆಗಿದೆ ಎಂದರು ಸಂಯುಕ್ತ ಹೆಗಡೆ.